ಹಣಬಲ ಇರುವವರಿಗೆ ಇ-ಸ್ವತ್ತು ಮಾಡುವುದಲ್ಲಾ, ಬಡವರಿಗೆ ನಿಗದಿತ ಸಮಯದಲ್ಲಿ ಇ-ಸ್ವತ್ತು ನೀಡುವವನು ನೈಜ ಅಧಿಕಾರಿ. ಸಂಸದ ಡಿ ಕೆ ಸುರೇಶ್
ಚನ್ನಪಟ್ಟಣ:ಆ/06/20/ಗುರುವಾರ. ಹಣಬಲ ಇರುವವರಿಗೆ, ರಾಜಕಾರಣಿಗಳ ಹಿಂಬಾಲಕರಿಗೆ ಲಂಚ ಪಡೆದು, ಕೇಳಿದ ತಕ್ಷಣ ಇ-ಸ್ವತ್ತು ಮಾಡುವ ಅಧಿಕಾರಿಗಳು, ಬಡವರಿಗೂ ಅದೇ ಸಮಯದಲ್ಲಿ ಇ-ಸ್ವತ್ತು ಮಾಡಿಕೊಡಬೇಕು. ಆಗಲೇ ಅವನು ನಿಜವಾದ ಅಧಿಕಾರಿಯಾಗಲು ಸಾಧ್ಯ. ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆದಿಯಾಗಿ ಯಾವ್ಯಾವ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆಂದು ಗೊತ್ತಿದೆ. ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ಪಿಡಿಓ ಗಳ ವಿರುದ್ದ ನಯವಾಗಿಯೇ ಕಾಲೆಳೆದರು.
ಅವರು ಇಂದು ನೀಲಸಂದ್ರ ಗ್ರಾಮ ಪಂಚಾಯತಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ನಿರಂತರ ಇ-ಸ್ವತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇ-ಸ್ವತ್ತು ಮಾಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಸೇರಿ ಯೋಜನೆ ರೂಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಯಾರನ್ನೋ ನಂಬಿ ಇ-ಸ್ವತ್ತಿಗಾಗಿ ಕಾಯಬೇಡಿ. ಕನಿಷ್ಠ ಐದು ಸಾವಿರದಿಂದ ಐವತ್ತು ಸಾವಿರ ರೂಪಾಯಿವರೆಗೂ ಹಣ ಪೀಕಿ ಇ-ಸ್ವತ್ತು ಮಾಡಿಸಿಕೊಂಡಿರುವುದು ನನ್ನ ಗಮನಕ್ಕೆ ಬಂದಿದೆ. ಅವರಿಂದ ಹಣ ಪಡೆಯಲು ನೀವೇನೂ ಅವರಿಗೆ ಜಮೀನು ನೀಡಿತ್ತಿಲ್ಲ ಅವರ ಸ್ವಂತ ಜಮೀನಿಗೆ ಇ-ಸ್ವತ್ತು ಮಾಡಿಕೊಡುವುದು ಎಂದು ಅವರು ಗುಡುಗಿದರು.
ಬಡ ಜನರಿಗೆ ಸೇವೆ ಸಲ್ಲಿಸಿ ಮಾನವೀಯತೆ ಮೆರೆಯಿರಿ. ಅವರಿಗೆ ಮುಂದೆ ಅನುಕೂಲವಾಗುವಂತೆ ದಾಖಲೆ ಸಂಗ್ರಹಿಸಿ ಇ-ಸ್ವತ್ತು ನೀಡಿ. ಬಡ ಜನರ ಬಳಿ ಹಣಕ್ಕಾಗಿ ಪೀಡಿಸಿ ಅಲೆಯುವಂತೆ ಮಾಡಬೇಡಿ. ನರೇಗಾ ಕಾಮಗಾರಿಯನ್ನು ಪಂಚಾಯತಿ ಸದಸ್ಯರಿಗೆ, ಗುತ್ತಿಗೆದಾರರಿಗೆ ನೀಡುವುದಲ್ಲ. ಬಡ ಕಾರ್ಮಿಕರಿಗೆ ನೀಡಿ. ಜನರು ಅವರಿಷ್ಟ ಬಂದವರಿಗೆ ಮತ ನೀಡಲಿ, ಅವರಿಗೆ ಕೆಲಸ ನೀಡಿ, ಅವರ ಬಳಿ ಹಣ ಓಡಾಡುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಕಿವಿ ಹಿಂಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಓ ಚಂದ್ರು ರವರು ನಿರಂತರ ಇ-ಸ್ವತ್ತು ಎಂದರೆ ಕಟ್ಟಡಗಳು, ನಿವೇಶನಗಳನ್ನು ಅಧಿಕೃತವಾಗಿ ದಾಖಲು ಮಾಡುವುದು ಇತ್ತೀಚಿಗೆ ಗ್ರಾಮ ಪಂಚಾಯತಿಗಳಲ್ಲಿ ಇ-ಸ್ವತ್ತು ನೀಡದಿರುವುದರ ಬಗ್ಗೆ ಹಲವಾರು ದೂರು ಬರುತ್ತಿರುವುದರಿಂದ ಸೂಕ್ತ ದಾಖಲೆ ತೆಗೆದುಕೊಂಡು ತಿಂಗಳೊಳಗೆ ಇ-ಸ್ವತ್ತು ನೀಡುತ್ತೇವೆ. ಶೇಕಡಾ ೯೦ ರಷ್ಟು ಇ-ಸ್ವತ್ತು ನೀಡಬೇಕಾಗಿದೆ ಎಂದರು
ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ ಅರ್ಜಿ ಕೊಟ್ಟು ವರ್ಷವಾದರೂ ಇ-ಸ್ವತ್ತು ದೊರೆಯದ ಕಾರಣ ಖಾತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಒಂದು ದಿನದ ಮುಂಚೆ ಆ ಗ್ರಾಮದಲ್ಲಿ ಟಾಂಟಾಂ ಮಾಡಿಸಿ ದಾಖಲೆ ಪರಾಮರ್ಶಿಸಿ ಇ-ಸ್ವತ್ತು ನೀಡಲು ನಿರಂತರ ಇ-ಸ್ವತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಪಿಡಿಓ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು
ಲೇಔಟ್ ಸಂಬಂಧಿಸಿದ ಇ-ಸ್ವತ್ತುಗಳು ಬೇಗ ಮಾಡಿಕೊಡುತ್ತಾರೆ. ಅದೇ ಬಡವರಿಗೆ ನೂರೆಂಟು ಕಾರಣ ನೀಡಿ ಸತಾಯಿಸುತ್ತಿದ್ದಾರೆ. ಇ-ಸ್ವತ್ತಿಗೆ ಬರುವ ೧೧ಎ ಮತ್ತು ಬಿ ದಾಖಲೆಗಳನ್ನು ತಾಲ್ಲೂಕು ಪಂಚಾಯತಿಗೆ ಮಾಹಿತಿ ನೀಡಿ. ಪ್ರತಿ ಗ್ರಾಮದಲ್ಲೂ ಒಂದಿನ ಮುಂಚಿತವಾಗಿ ತಿಳಿಸಿ ಇ-ಸ್ವತ್ತು ಮಾಡಿಕೊಡಿ ಎಂದು ತಾಕೀತು ಮಾಡಿದರು.
ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ ಇದು ವಿಶಿಷ್ಟ ಕಾರ್ಯಕ್ರಮ, ಇದುವರೆಗೂ ಇ-ಸ್ವತ್ತು ಕನ್ನಡಿಯೊಳಗಿನ ಗಂಟಾಗಿತ್ತು. ಜನರಿಗೂ ತಿಳುವಳಿಕೆ ಕಡಿಮೆ ಇತ್ತು. ಗ್ರಾಮ ಪಂಚಾಯತಿ ಅಧಿಕಾರಿಗಳು ಇ-ಸ್ವತ್ತನ್ನು ಬ್ರಹ್ಮ ಗಂಟನ್ನಾಗಿ ಮಾಡಿ ಜನರಿಗೆ ಹೆದರಿಸಿಬಿಟ್ಡಿದ್ದರು. ನಗರ ಸಭೆ, ಬಿಬಿಎಂಪಿ ಸೇರಿ ರಾಜ್ಯಾದ್ಯಂತ ಒಂದೆ ರೀತಿಯ ಇ-ಸ್ವತ್ತು ಕೊಡುವುದು. ಸೈಬರ್ ಕೆಫೆ ಯವರು ದಂಧೆಕೋರರಾಗಿದ್ದಾರೆ. ಜನಸಾಮಾನ್ಯರಿಗೆ ಇದು ತಲುಪಬೇಕೆಂಬ ಹಂಬಲ ಸುರೇಶ್ ರವರದು. ಅಧಿಕಾರಿಗಳು ಜನಸಾಮಾನ್ಯರ ಕೈಗೆ ಎಟುಕುವಂತೆ ಅರಿವು ಮೂಡಿಸಿ, ಸತಾಯಿಸದೆ ಕೆಲಸ ಮಾಡಬೇಕು. ಆಗಲೇ ಜನರಿಗೆ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಹತ್ತಿರವಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸಪ್ಪ, ಸದಸ್ಯರಾದ ವೀಣಾಕುಮಾರಿ, ಪ್ರಸನ್ನ, ತಾಲ್ಲೂಕು ಪಂಚಾಯತಿ ಸದಸ್ಯ ಸುರೇಶ್, ದಂಡಾಧಿಕಾರಿ ನಾಗೇಶ್, ಪಿಡಿಓ ಮಾದೇಗೌಡ ಸೇರಿದಂತೆ ಕಾಂಗ್ರೆಸ್ ನ ಮುಖಂಡರು, ಅಧಿಕಾರಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು