Tel: 7676775624 | Mail: info@yellowandred.in

Language: EN KAN

    Follow us :


ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡ ಅವರ ೧೦೪ ನೇ ಜನ್ಮದಿನದ ನೆನಪಿಗಾಗಿ ಸು ತ ರಾಮೇಗೌಡ ರ ಲೇಖನ.

Posted date: 11 Aug, 2020

Powered by:     Yellow and Red

ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್. ಮರಿಗೌಡ ಅವರ ೧೦೪ ನೇ ಜನ್ಮದಿನದ ನೆನಪಿಗಾಗಿ ಸು ತ ರಾಮೇಗೌಡ ರ ಲೇಖನ.

ಜೀವನಕ್ಕೆ ದವಸ ಧಾನ್ಯ ನಂಬಿದ್ದ ರೈತಾಪಿ ವರ್ಗಕ್ಕೆ ಫಲಪುಷ್ಪ ಬೆಳೆಸುವ ಕಾಂಚಾಣ ಮಾರ್ಗವನ್ನು ತೋರಿಸಿದ ಕೀರ್ತಿ ಡಾ. ಎಂ.ಎಚ್. ಮರಿಗೌಡ ಅವರದು. ದೇಶದ ನಕಾಶೆಯಲ್ಲಿ *‘ತೋಟಗಾರಿಕೆ ಬೀಡು’* ಎಂಬ ಖ್ಯಾತಿ ಕರ್ನಾಟಕಕ್ಕೆ ದೊರೆಯಲು ಕಾರಣಕರ್ತ ಎನ್ನುವ ಹೆಗ್ಗಳಿಕೆಯೂ ಅವರಿಗೇ ಸಲ್ಲಬೇಕು.


ಕರ್ನಾಟಕದುದ್ದಕ್ಕೂ ನೂರಾರು ತೋಟಗಾರಿಕಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಈ ಮಹಾನ್ ಸಾಧಕ, ಮಾರಗೊಂಡನಹಳ್ಳಿ ಹೊಂಬೇಗೌಡ ಮರಿಗೌಡರು .

ತಿರುಮಕೂಡಲು ನರಸೀಪುರ ತಾಲ್ಲೂಕಿನ ಮಾರಗೊಂಡನಹಳ್ಳಿಯ ಹೊಂಬೇಗೌಡರ ಮಗನಾಗಿ ಹುಟ್ಟಿದ ಮರಿಗೌಡರು ಪ್ರಾಥಮಿಕ ಶಾಲೆ ಓದಿದ್ದು ಹತ್ತಿರದ ಬನ್ನೂರಿನಲ್ಲಿ. ವಿಜ್ಞಾನದಲ್ಲಿ ಪದವಿ ಗಳಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಲಖನೌ ವಿಶ್ವವಿದ್ಯಾನಿಲಯ ದಿಂದ ಸ್ನಾತಕೋತ್ತರ ಪದವಿಗಳಿಸಿದ ಅವರು, ಡಾಕ್ಟರೇಟ್ ವ್ಯಾಸಂಗ ಮಾಡಿದ್ದು ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ.

ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಹಾಯಕ ಸೂಪರಿಂಡೆಂಟ್ ಆಗಿ ಸೇವೆ ಆರಂಭಿಸಿದ್ದರು (1942 ರಲ್ಲಿ) ಮರಿಗೌಡರು  ವಿಶೇಷ ತರಬೇತಿ ಹಾಗೂ ಡಾಕ್ಟರೇಟ್ ವ್ಯಾಸಂಗ ಪಡೆದ ಬಳಿಕ ಲಾಲ್‌ಬಾಗ್ ಸೂಪರಿಂಡೆಂಟ್ ಆಗಿ 1951 ರಲ್ಲಿ ಅಧಿಕಾರ ಸ್ವೀಕರಿಸಿದರು.


ತೋಟಗಾರಿಕೆ ಇಲಾಖೆಗೆ ಪ್ರತ್ಯೇಕ ಅಸ್ತಿತ್ವ ಇಲ್ಲದ ಆ ದಿನಗಳಲ್ಲಿ *‘ಉದ್ಯಾನ ಇಲಾಖೆ’* ಎಂಬ ಹೆಸರಿತ್ತು. ಬೆಂಗಳೂರಿನ ಲಾಲ್ ಬಾಗ್ ಇದರ ಕೇಂದ್ರ ಸ್ಥಳ. ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತೋಟಗಾರಿಕಾ ಶಾಖೆ, ಸ್ವತಂತ್ರ  ಇಲಾಖೆಯಾಗಿ ರೂಪುಗೊಂಡಿದ್ದು 1963 ರಲ್ಲಿ. ಇದರ ಮೊದಲ ನಿರ್ದೇಶಕರು ಮರಿಗೌಡ. ‘ಉದ್ಯಾನ ಇಲಾಖೆ’ ವ್ಯಾಪ್ತಿಯಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆ.ಆರ್. ಎಸ್.ನ ಬೃಂದಾವನಗಳು ಮಾತ್ರವಿದ್ದವು. ಆನಂತರ ಇದಕ್ಕೆ ಸೇರ್ಪಡೆಗೊಂಡಿದ್ದು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟ.

ಇವೆಲ್ಲ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದ ಮರಿಗೌಡರನ್ನು ಇಲಾಖೆಗೆ ಕಾಲಿಟ್ಟ ದಿನದಿಂದಲೂ ರೈತರ ಹಿತ ಚಿಂತನೆ ಕಾಡತೊಡಗಿತ್ತು. ಕೃಷಿ ಕುಟುಂಬದಲ್ಲಿ ಹುಟ್ಟಿ ಸಸ್ಯಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು ಇಂಗ್ಲೆಂಡ್‌ನ *‘ಕ್ಯೂ ಉದ್ಯಾನ’* ಕ್ಕೆ ತರಬೇತಿಗೆಂದು ಹೋದಾಗ ಆದ ಅನುಭವಗಳೆಲ್ಲವೂ ರೈತಪರ ದೃಷ್ಟಿಕೋನವನ್ನೇ ಹೊಂದಿ ದ್ದವು.

‘ಉದ್ಯಾನ ಶಾಖೆ’ಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೇ ಅಂದು ಕೊಂಡಿದ್ದ ನ್ನು ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಿರತರಾದ ಮರಿಗೌಡರು, ಕೇವಲ ಉದ್ಯಾನಗಳ ನಿರ್ವಹಣೆಗೆ ಸೀಮಿತವಾಗಿದ್ದ ಇಲಾಖೆಯನ್ನು ರೈತರ ಬಳಿಗೆ ಕೊಂಡೊಯ್ಯಲು ಮುಂದಾದರು. ರಾಗಿ, ಜೋಳ, ಭತ್ತದೊಂದಿಗೆ ಹಣ್ಣು-ತರಕಾರಿ ಸಹ ಗ್ರಾಮೀಣರ ಬದುಕಿಗೆ ಅನಿವಾರ್ಯ ಎನ್ನುವುದು ಮರಿಗೌಡರ ಮೊದಲ ಮಂತ್ರ. ಗ್ರಾಮಬದುಕಿಗೆ ಪೂರಕವಾಗಿ ತೋಟಗಾರಿಕೆ ನಡೆಯುವುದರಿಂದ ರೈತರ ಬದುಕನ್ನು ಹಸನುಗೊಳಿಸುವುದು ಅವರ ಗುರಿ. ಹಳ್ಳಿಗಳತ್ತ ಹೆಜ್ಜೆ ಹಾಕಿದ ‘ಉದ್ಯಾನ ಇಲಾಖೆ’ ರೈತ ರಲ್ಲಿ ಹಣ್ಣು-ತರಕಾರಿ ಬೆಳೆಗಳ ಅರಿವು ಮೂಡಿ ಸಲು ಮುಂದಾಯಿತು.


ನೋಡನೋಡುತ್ತಿದ್ದಂತೆ ರೈತರ ಮನೆ ಹಿತ್ತಲು-ಅಂಗಳಗಳಲ್ಲಿ ತರಕಾರಿ-ಹಣ್ಣು ಕಾಣತೊಡಗಿದವು. ಇಲಾಖೆಯು ಉಚಿತವಾಗಿ ಸಸಿಗಳನ್ನು ಸರಬರಾಜು ಮಾಡಿ, ಬೆಳೆಸುವ ವಿಧಾನ ಗಳನ್ನು ಹೇಳಿಕೊಡತೊಡಗಿತು. ಈ ಉಪಬೆಳೆಯನ್ನು ಸಂತೆಗಳಿಗೆ ಹೊತ್ತೊಯ್ದ ರೈತರ ಜೇಬಿಗೆ ಒಂದಿಷ್ಟು ಕಾಸು ಕೂಡಿತು. ರಾಜ್ಯದುದ್ದಕ್ಕೂ ಅನೇಕ ಪಾಳುಬಿದ್ದ ಜಮೀನುಗಳು ಹಣ್ಣು ಹಂಪಲು ಬೆಳೆಯುವ ಕ್ಷೇತ್ರಗಳಾಗಿ ಬೆಳವಣಿಗೆ ಕಂಡವು. ರಾಜ್ಯದ 1,800 ಎಕರೆಯಲ್ಲಿ 394 ತೋಟಗಾರಿಕಾ ಕ್ಷೇತ್ರಗಳನ್ನು ಕಟ್ಟಿ ಕೊಟ್ಟ ಹೆಗ್ಗಳಿಕೆ ಮರಿಗೌಡ ರದ್ದು! ಇದರಿಂದ ತಾಜಾ ಹಣ್ಣು - ತರಕಾರಿಗಳು ಕಡಿಮೆ ಬೆಲೆಯಲ್ಲಿ ಜನತೆಗೆ ಸಿಕ್ಕಿದರೆ, ಇಲಾಖೆಗೆ ಹೊಸ ತೊಂದು ಆದಾಯ ಮೂಲ ತೆರೆದುಕೊಂಡಿತು. ಕೃಷಿ ಚಮತ್ಕಾರಗಳನ್ನು ಎಡಬಿಡದೆ ಮಾಡುತ್ತಾ ಹೋದ ಮರಿಗೌಡರು ಜನರಲ್ಲಿ ಸಸ್ಯಪ್ರೀತಿಯನ್ನು ಬೆಳೆಸಿದರು.


ಅವರ ಪ್ರಯತ್ನದಿಂದಾಗಿ ಕೇಳರಿಯದ ಕುಗ್ರಾಮಗಳಲ್ಲೂ ತೋಟಗಾರಿಕಾ ಜಾಗೃತಿ ಕಂಡು ಬಂತು. ಯಾವ ಸಸ್ಯವೂ ನಿರುಪಯುಕ್ತವಲ್ಲ ಎಂಬುದನ್ನು ರೈತಾಪಿ ಜನರಿಗೆ ಮನ ದಟ್ಟು ಮಾಡಿಕೊಟ್ಟ ಅವರು, ರೈತರ ಮನೆ ಬಾಗಿಲಿಗೆ ಬೀಜ-ಸಸಿಗಳನ್ನು ತಲುಪಿಸಲು ಹಿಂದೆಮುಂದೆ ನೋಡಲಿಲ್ಲ.

ವಿದೇಶಗಳಲ್ಲಿ ಲಭ್ಯವಿದ್ದ ಹಣ್ಣು–ತರಕಾರಿಗಳನ್ನು ನಮ್ಮ ನೆಲದಲ್ಲಿ ಚಿಗುರೊಡೆಸಿದ ಕೀರ್ತಿ ಅವರದು. ಅವರು ತೋಟಗಾರರಿಗೆ ಮಾತ್ರ ಸಹಾಯ ಮಾಡಲಿಲ್ಲ, ಬಳಕೆದಾರರಿಗೆ ತಾಜಾ ಮಾಲು ಸಿಗುವಂತೆಯೂ ಮಾಡಿದರು. ನಾಡಿನ ಬೊಕ್ಕಸಕ್ಕೂ ಆದಾಯ ತಂದುಕೊಟ್ಟರು. ತೆಂಗು ತೋಪುಗಳು, ಪುಷ್ಪ ಕೃಷಿಯ ಬಯಲುಗಳು, ದ್ರಾಕ್ಷಿ ಹಂದರದ ತೋಟಗಳು, ತೋಟಗಾರರಿಗೆ ಪ್ರತ್ಯೇಕ ಸಹಕಾರ ಸಂಘಗಳು ಇವೆಲ್ಲ ಮರಿಗೌಡರ ಪ್ರಯೋಗಶೀಲತೆಯ ಫಲಿತಾಂಶಗಳೇ ಆಗಿವೆ.


ಬೆಂಗಳೂರಿನ ಕೆಂಪುತೋಟದಲ್ಲಿ ಸಸ್ಯಕ್ಷೇತ್ರವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಲು ಮರಿಗೌಡರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಹಳ್ಳಿಯ ರೈತರು ಬಿತ್ತನೆ ಬೀಜ–ಸಸಿಗಳಿಗಾಗಿ ಯಾವಾಗಲೂ ಲಾಲ್‌ಬಾಗ್‌ಗೆ ಬರುವುದು ಸರಿಯಲ್ಲವೆಂಬ ತೀರ್ಮಾನಕ್ಕೆ ಬಂದವರೇ – ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ತೋಟಗಾರಿಕಾ ಕ್ಷೇತ್ರಗಳನ್ನು ಸ್ಥಾಪಿಸುವ ಅಗಾಧವಾದ ಕಾರ್ಯವನ್ನು ಅಡೆತಡೆಗಳ ನಡುವೆಯೂ ಸಾಧಿಸಿ ತೋರಿಸಿದರು.

ಬೆರಳೆಣಿಕೆಯಷ್ಟು ಉದ್ಯಾನಗಳಿಗೆ ಸೀಮಿತವಾಗಿದ್ದ ಇಲಾಖೆಯನ್ನು ಬೇರುಮಟ್ಟಕ್ಕೆ ತಲುಪಿಸಿದ ಮರಿಗೌಡರು ಕಚೇರಿಗಳಿಗೆ – ಮೇಜುಗಳಿಗೆ ಅಂಟಿಕೊಳ್ಳುವ ಜಾಯಮಾನದವರಾಗಿರಲಿಲ್ಲ.


ಹಣ್ಣು ಮತ್ತು ತರಕಾರಿ ನಿರ್ದಿಷ್ಟ ಭೌಗೋಳಿಕ ಪರಿಸರಕ್ಕೆ ಮಾತ್ರ ಸೀಮಿತ ಎಂಬುದನ್ನು ಮರಿಗೌಡರು ನಂಬುತ್ತಿರಲಿಲ್ಲ. ಮಲೆನಾಡಿನಲ್ಲಿ ಮಾತ್ರ ಕಾಫಿ ಬೆಳೆಯುತ್ತದೆ ಎಂಬುದನ್ನು ಸುಳ್ಳು ಮಾಡಲು ಬಯಲುಸೀಮೆಯಲ್ಲೂ ಕಾಫಿ ಬೆಳೆಯನ್ನು ಯಶಸ್ವಿಯಾಗಿ ನಡೆಸುವ ಪ್ರಯತ್ನಗಳಿಗೆ ಉತ್ತೇಜನ ಕೊಟ್ಟರು ಹಾಗೂ ಈ ಪ್ರಯತ್ನಗಳಲ್ಲಿ ಯಶಕಂಡರು. ತೆಂಗು ಕರಾವಳಿಗೆ ಸೀಮತವಲ್ಲ ಎಂದ ಅವರು ಮೈಸೂರು, ಕೋಲಾರಗಳಿಗೂ ತೆಂಗನ್ನು ಹರಡಿದರು.

ತೋಟಗಾರರನ್ನು ಹುರಿದುಂಬಿಸಲು ಹಲವು ಪ್ರಾತ್ಯಕ್ಷಿಕೆಗಳನ್ನು ನಿರಂತರವಾಗಿ ಏರ್ಪಡಿಸುವುದು ಮರಿಗೌಡರಿಗೆ ಬಹು ಇಷ್ಟದ ಕೆಲಸವಾಗಿತ್ತು. ಕೆಲವು ಪ್ರದೇಶಗಳಲ್ಲಿ ನಿರ್ದಿಷ್ಟ ಬೆಳೆಗೆ ಸಂಬಂಧಿಸಿದ ಸಸ್ಯಕ್ಷೇತ್ರಗಳು ಶುರುವಾಗಲೂ ಕೂಡ ಇವರೇ ಕಾರಣ.


ಶುರುವಿಗೆ ದ್ರಾಕ್ಷಿ ಬೆಳೆಯ ಮೇಲೆ ಪೂರ್ಣ ದೃಷ್ಟಿ ಹರಿಸಿದ ಅವರು, ದ್ರಾಕ್ಷಿಯಲ್ಲಿ ಆಗ ಲಭ್ಯವಿದ್ದ ಮೂರು ತಳಿಗಳನ್ನು ಸಂಗ್ರಹಿಸಿದರು. ದ್ರಾಕ್ಷಿಗೆ ಮಾರುಕಟ್ಟೆ ಒದಗಿಸಲು *‘ಸಹಕಾರಿ ಸಂಘ ಮಾರಾಟ ಮಳಿಗೆ’* ಗಳನ್ನು ರೂಪಿಸಿದರು.

ಹಲಸು ಈಗ ವಿಶ್ವವ್ಯಾಪಿ ಬೇಡಿಕೆ ಇರುವ ಹಣ್ಣು. ಮರಿಗೌಡರ ದೂರದೃಷ್ಟಿಯ ಫಲವಾಗಿ, ಕೋಲಾರ ಸಮೀಪದ ತಮಕ ಗ್ರಾಮದಲ್ಲಿ ಇಡೀ ದೇಶದಲ್ಲಿ ಸಿಗುವ ಹಲಸು ತಳಿಗಳನ್ನು ಒಂದೆಡೆ ಒಟ್ಟು ಮಾಡಲಾಯಿತು. ತಮಕದ ನೆಲದಲ್ಲಿ ಹಲಸಿನ ಹತ್ತಾರು ಬಗೆಯ ಹೊಸತಳಿಗಳು ಹೊರಹೊಮ್ಮಲು ಮರಿಗೌಡರು ಕಾರಣ.

ಒಣ ಭೂಮಿ ಬೇಸಾಯಕ್ಕೆ ಒತ್ತು ಕೊಡಲಾರಂಭಿಸಿದ ಅವರು, ಒಣಬೆಳೆ ಅಭಿವೃದ್ಧಿಯಿಂದ ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಆದಾಯ ಸಿಗುವುದೆಂಬುದನ್ನು ತೋರಿಸಿಕೊಡಲು ರಾಜ್ಯದ ತುಂಬಾ ಒಣ ಬೇಸಾಯ ಕ್ಷೇತ್ರಗಳನ್ನು ತಲೆ ಎತ್ತುವಂತೆ ಮಾಡಿದರು. ಇಂತಹ ಕ್ಷೇತ್ರಗಳಲ್ಲಿ ಪ್ರಯೋಗಗಳಿಗೆ, ತರಬೇತಿಗಳಿಗೆ, ತೋಟಗಾರರ ತರಬೇತಿ ಸಲಹೆಗಳಿಗೆ ಅವಕಾಶ ಮಾಡಿಕೊಟ್ಟರು. ತೋಟಗಾರಿಕೆಗೆ ಬುನಾದಿ ಹಾಕಿಕೊಟ್ಟ ಈ ಕ್ಷೇತ್ರಗಳು ನಾಲ್ಕೈದು ದಶಕಗಳ ನಂತರವೂ ಜನಪ್ರಿಯ ಕ್ಷೇತ್ರಗಳಾಗಿ ಉಳಿದಿವೆ.


ಚಾಮರಾಜನಗರದ ಬಾಗಲಿ, ಕೋಲಾರ, ಶ್ರೀನಿವಾಸಪುರದ ಹೊಗಳಗೆರೆ, ಕೊರಟಗೆರೆಯ ದೊಡ್ಡಸಗ್ಗರೆ, ಮಂಡ್ಯ ಜಿಲ್ಲೆಯ ಮಲ್ಲಸಂದ್ರ ಇಂತಹ ಕ್ಷೇತ್ರಗಳಿಗೆ ಕೆಲವು ನಿದರ್ಶನಗಳು.

ಪಶ್ಚಿಮ ಘಟ್ಟಗಳಲ್ಲಿ ಕೋಕೋ ಬೆಳೆಗೆ ನಾಂದಿ ಹಾಡಿದ್ದು ಮರಿಗೌಡರ ಮತ್ತೊಂದು ಸಾಧನೆ. ಅದಕ್ಕೆಂದೇ ಚಾರ್ಮುಡಿಯಲ್ಲಿ ಒಂದು ಕ್ಷೇತ್ರವನ್ನು ಆರಂಭಿಸಿದ ಅವರು, ಕಡಲತಟದಲ್ಲಿದ್ದ ಗೋಡಂಬಿಯನ್ನು ಬಯಲು ಸೀಮೆಗೆ ತಂದರು. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಸಸ್ಯಕ್ಷೇತ್ರಗಳನ್ನು ಶುರು ಮಾಡಿ, ನರ್ಸರಿಗಳನ್ನು ತೆರೆದು, ರೈತರಿಗೆ ಬೀಜ–ಸಸಿ ಸಿಗುವಂತೆ ಮಾಡಿದರು.

ತೋಟಗಾರರಿಗೆ ಅಗತ್ಯವಾದ ಬೀಜ–ಸಸಿಯನ್ನು ಸರ್ಕಾರದ ಸಸ್ಯಕ್ಷೇತ್ರಗಳಿಂದಲೇ ಪೂರೈಸಲು ಅಸಾಧ್ಯವೆಂಬುದನ್ನು ಅರಿತ ಮರಿಗೌಡರು ಉತ್ತಮ ಖಾಸಗಿ ಸಂಸ್ಥೆಗಳಿಗೂ ಪ್ರೋತ್ಸಾಹ ನೀಡಿದರು. ಇದರಿಂದಾಗಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ *‘ಇಂಡೋ – ಅಮೆರಿಕನ್ ಹೈಬ್ರಿಡ್ ಸೀಡ್ಸ್’* ನಂತಹ ಸಂಸ್ಥೆ ನೆಲೆ ನಿಲ್ಲಲು ಸಾಧ್ಯವಾಯಿತು.

ಬೆಂಗಳೂರಿನ ಬೃಹತ್ ಶ್ವಾಸಕೋಶ ಲಾಲ್‌ಬಾಗ್ ಬಹುಬಗೆಯಿಂದ ಅಭಿವೃದ್ಧಿಗೊಳ್ಳಲು ಮರಿಗೌಡರ ಶ್ರಮ ಉಲ್ಲೇಖನೀಯ. ನೂರು ಎಕರೆಗಳಷ್ಟಿರುವ ಕೆಂಪುತೋಟವನ್ನು 240 ಎಕರೆಗಳಿಗೆ ಹಬ್ಬಿಸಲು ಅವರು ಮುಖ್ಯಕಾರಣ.


ಉದ್ಯಾನವಾಗಿ ಖ್ಯಾತಿಪಡೆದ ಲಾಲ್‌ಬಾಗ್ ಅನ್ನು ತೋಟಗಾರರ ಸಮೂಹಕ್ಕೂ ಗಮನ ಸೆಳೆಯುವಂತೆ ಮಾಡಿದ ಅವರು, ಫಲಪುಷ್ಪ ಪ್ರದರ್ಶನಗಳಿಗೆ ಮೆರುಗು ತಂದರು. *‘ಸಸ್ಯ ಸಂತೆ’*ಗಳನ್ನು ಸಂಘಟಿಸಿದರು.

ಸಹಕಾರಿ ತತ್ವದ ಆಧಾರದ ಮೇಲೆ ಹಾಪ್‌ಕಾಮ್ಸ್ ನಂತಹ ನಿತ್ಯೋಪಯೋಗಿ ಪದಾರ್ಥಗಳ ಮಾರುವ ಮಾರಾಟ ಜಾಲವನ್ನು ನಾಡಿನೆಲ್ಲೆಡೆ ಹರಡಲು ನಾಂದಿ ಹಾಡಿದ್ದು ಅವರೇ.

ಶಾಲಾ ದಿನಗಳಲ್ಲಿಯೇ ಕವಿ ಕುವೆಂಪು ಅವರ ಒಡನಾಟ ಹೊಂದಿದ್ದ ಮರಿಗೌಡರು, ತೋಟಗಾರಿಕಾ ವಲಯದಲ್ಲಿ ಮಾಡಿದ ಸಾಧನೆಯನ್ನು *ಕುವೆಂಪು ತಮ್ಮ ಜೀವನ ವೃತ್ತಾಂತ ‘ನೆನಪಿನ ದೋಣಿ’ಯಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲ; ‘ದೇವಾಲಯವೀ ಹೂವಿನ ತೋಟಂ’ – ‘ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’* ರೀತಿಯ ಅರ್ಥಪೂರ್ಣ ಧ್ಯೇಯವಾಕ್ಯಗಳನ್ನು ಲಾಲ್‌ಬಾಗ್‌ಗಾಗಿ ರಚಿಸಿಕೊಟ್ಟಿದ್ದಾರೆ.

ಒಳ್ಳೆಯ ಮಾತುಗಾರರಾಗಿ ರೈತಾಪಿ ಜನರ ಮನ ತಲುಪಿದ ಮರಿಗೌಡರು ಅನುಭವದಿಂದಲೇ ಹಲವು ಕೃತಿಗಳನ್ನು  ಬರೆದು ಓದುಗರನ್ನು ಮುಟ್ಟಿದ್ದಾರೆ.

ಕಾನೂನು ಕಾಯ್ದೆಗಳಿಗೆ ಕಾಯದೆ, ರೈತರ ಹಿತಾಸಕ್ತಿಗೆ ಸ್ಪಂದಿಸಿದ ಡಾ. ಎಂ.ಎಚ್. ಮರಿಗೌಡರಿಗೆ ನಮ್ಮಯ ನಮನಗಳು....


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑