ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ ನಿಧನ
ಚನ್ನಪಟ್ಟಣ:ಆ/20/20/ಗುರುವಾರ. ತಾಲ್ಲೂಕಿನ ವಿಠಲೇನಹಳ್ಳಿ ಗ್ರಾಮದ ಹಿರಿಯ ಮಹಿಳಾ ರೈತ ಹೋರಾಟಗಾರ್ತಿ ಗುರುಲಿಂಗಮ್ಮ (92) ರವರು ಇಂದು ವಯೋಸಹಜ ಖಾಯಿಲೆಯಿಂದ ಮೃತರಾದರು.
ಶ್ರೀಯುತ ಗುರುಲಿಂಗಮ್ಮರವರು ಎಂಭತ್ತರ ದಶಕದಿಂದಲೂ ಹಿತ್ತಲಮನೆ, ಗ್ರಾನೈಟ್ ಹಾಗೂ ಮಹಿಳೆಯರ ಹಕ್ಕಿಗಾಗಿ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಅಂದಿನ ಧೀಮಂತ ರೈತ ನಾಯಕ ಪ್ರೊ ನಂಜುಂಡಸ್ವಾಮಿ ಹಾಗೂ ಸೋಮಲಿಂಗಯ್ಯ ರವರಿಗೆ ಆಪ್ತರಾಗಿದ್ದರು. ಆ ಭಾಗದ ಬಹುತೇಕ ಎಲ್ಲಾ ರೈತ ಹೋರಾಟಗಳಲ್ಲಿ ಭಾಗಿಯಾಗುವ ಮೂಲಕ ರೈತ ಸಂಘಟನೆಗೆ ಬಲ ನೀಡಿದ್ದರು.
ಬಹಳ ಮುಖ್ಯವಾಗಿ ರೈತರು ಮಾಡಿದ ಕೃಷಿ ಸಾಲಕ್ಕಾಗಿ ಬ್ಯಾಂಕ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಪೋಲಿಸರೊಟ್ಟಿಗೆ ರೈತರ ಮನೆಗಳನ್ನು ಜಫ್ತಿ ಮಾಡಲು ಬಂದಾಗ ಗುರುಲಿಂಗಮ್ಮನವರು ಮಹಿಳಾ ಧ್ವನಿಯಾಗಿ ಇತರರಿಗೆ ಮಾದರಿಯಾಗಿದ್ದರು. ಎಂಭತ್ತರ ದಶಕದಲ್ಲೇ ಮಹಿಳಾ ಹೋರಾಟಗಾರ್ತಿಯಾಗಿ ರೂಪುಗೊಂಡ ಗುರುಲಿಂಗಮ್ಮ ನವರು ರಾಜ್ಯದಾದ್ಯಂತ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಗ್ರಾಮಸ್ಥರ ಅಪ್ಪಣೆಯಿಲ್ಲದೆ ಅಧಿಕಾರಿಗಳಿಗೆ ಪ್ರವೇಶವಿಲ್ಲಾ ಎಂಬ ಅಂದಿನ ಹೋರಾಟಗಳಲ್ಲಿ, ಜಫ್ತಿಗೆ ಬಂದ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ ಜಫ್ತಿ ಮಾಡಿದ್ದ ಎಲ್ಲಾ ವಸ್ತುಗಳನ್ನು ರೈತರಿಗೆ ಹಿಂದುರುಗಿ ಕೊಡಿಸಿ, ರೈತರ ಕ್ಷಮೆ ಕೇಳುವಂತೆ ಮಾಡಿದ ದಿಟ್ಟ ಹೋರಾಟಗಾರ್ತಿ ಎಂದು ರೈತ ಮುಖಂಡ ರಾಮಕೃಷ್ಣ ನೆನಪಿಸಿಕೊಂಡರು.ಇಂತಹ ದಿಟ್ಟ ಹೋರಾಟಗಾರ್ತಿ ಗೆ ತಾಲ್ಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಸಂಘಸಂಸ್ಥೆಗಳಾಗಲಿ ಗುರುತಿಸದಿರುವುದು ಆಡಳಿತ ಹಾಗೂ ಸಂಘಸಂಸ್ಥೆಗಳೇ ದೋಖಾ ಮಾಡಿಕೊಂಡಂತಾಗಿವೆ ಎಂದು ಸಿ ಪುಟ್ಟಸ್ವಾಮಿ ತಿಳಿಸಿದರು.
ಮೃತರ ಒಬ್ಬ ಪುತ್ರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನೋರ್ವ ಪುತ್ರ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಸ್ವಗ್ರಾಮ ವಿಠಲೇನಹಳ್ಳಿ ಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಮರಣಕ್ಕೆ ಹಿರಿಯ ರೈತ ಹೋರಾಟಗಾರರಾದ ಸಿ ಪುಟ್ಟಸ್ವಾಮಿ, ಅನುಸೂಯಮ್ಮ, ಸು ತ ರಾಮೇಗೌಡ, ಹೊಂಬಾಳೇಗೌಡ, ಎಂ ರಾಮು, ಎಂ ಮಲ್ಲಯ್ಯ, ರಾಮಕೃಷ್ಣ ಸೇರಿದಂತೆ ಅನೇಕ ರೈತ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು