ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣಾದ ಕೊರೊನಾ ಸೋಂಕಿತ
ಚನ್ನಪಟ್ಟಣ:ಆ/26/20/ಬುಧವಾರ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತಾಲೂಕಿನ ಹೊನ್ನನಾಯಕನಹಳ್ಳಿ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದ ಜಾಗೃತಿ ಪುಟ್ಟಸ್ವಾಮಿ (೩೬) ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ತಾಲೂಕಿನ ಹೊಟ್ಟಿಗನಹೊಸಹಳ್ಳಿ ಗ್ರಾಮದ ಈತನಿಗೆ ನಾಲ್ಕು ದಿನಗಳ ಹಿಂದೆ ಕರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ತಾಲೂಕಿನ ಹೊನ್ನಾನಾಯಕಹಳ್ಳಿ ಗ್ರಾಮದಲ್ಲಿರುವ ತಾಲೂಕು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿಂದೆ ಪ್ರಥಮ ಸಂಪರ್ಕಿತರಾದ ಶಂಕಿತರನ್ನು ಮಾತ್ರ ಹೊನ್ನನಾಯಕನಹಳ್ಳಿ ಹಾಸ್ಟೆಲ್ ನಲ್ಲಿ ದಾಖಲಿಸಿಕೊಳ್ಳುತ್ತಿದ್ದು, ಇತ್ತೀಚಿಗೆ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು.
ಈತ ಸೋಂಕಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ರಾತ್ರಿ ಊಟವಾದ ನಂತರ ಮನೆಯವರ ಬಳಿ ದೂರವಾಣಿ ಮೂಲಕ ಮಾತನಾಡಿ, ಸಹ ಸೋಂಕಿತರು ನಿದ್ರೆಗೆ ಜಾರಿದ ನಂತರ ತಡರಾತ್ರಿ ಕೋವಿಡ್ ಆಸ್ಪತ್ರೆಯಲ್ಲೆ ನೇಣಿಗೆ ಶರಣಾಗಿದ್ದಾನೆ.
*ಜಾಗೃತಿ ಮೂಡಿಸುತ್ತಿದ್ದವನೇ ಜಾಗೃತಿಯಾಗಲಿಲ್ಲ;*
ಮೃತ ಪುಟ್ಟಸ್ವಾಮಿ ಜಾನಪದ ಕಲಾವಿದನಾಗಿದ್ದು, ಜಾಗೃತಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ. ತನ್ನ ಸಂಸ್ಥೆಯ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿ ಪುಟ್ಟಸ್ವಾಮಿ ಎಂದೇ ಹೆಸರುವಾಸಿಯಾಗಿದ್ದ. ಸಮಾಜಕ್ಕೆ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕರೊನಾಗೆ ಹೆದರಿ ಆತ್ಮಹತ್ಯೆ ಗೆ ಶರಣಾಗಿರುವುದು ದುರಂತ ಎನ್ನಬಹುದಾಗಿದೆ.
ಮೃತನು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಸ್ವಗ್ರಾಮ ಹೊಟ್ಟಿಗನಹೊಸಹಳ್ಳಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು