Tel: 7676775624 | Mail: info@yellowandred.in

Language: EN KAN

    Follow us :


ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

Posted date: 22 Sep, 2020

Powered by:     Yellow and Red

ಇ-ಅದಾಲತ್ ನಲ್ಲಿ 1290 ಪ್ರಕರಣ ಇತ್ಯರ್ಥ್ಯ : ನ್ಯಾಯಾಧೀಶೆ ಬಿ.ಜಿ. ರಮಾ

ರಾಮನಗರ:ಸೆ./22/ಮಂಗಳವಾರ. ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ಒಟ್ಟು 1,290 ಪ್ರಕರಣಗಳನ್ನು ರಾಜಿ - ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು. 


ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ರಾಮನಗರ ಜಿಲ್ಲೆಯಾದ್ಯಂತ ಇರುವ 18 ಬೆಂಚ್ ಗಳಲ್ಲಿ ಕಳೆದ ಶನಿವಾರ (ಸೆ. 19) ನಡೆದ ಮೆಗಾ ಇ-ಲೋಕ ಅದಾಲತ್ ನಲ್ಲಿ ವಿವಿಧ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸತ್ರ ನ್ಯಾಯಾಧೀಶರು ಮಾಹಿತಿ ನೀಡಿದರು. 


ಕೋವಿಡ್ -19 ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ದೇಶದಲ್ಲಿಯೇ ಪ್ರಥಮ ಬಾರಿಗೆ ಆನ್ ಲೈನ್ ಮೂಲಕ ಸಣ್ಣ ಪುಟ್ಟ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂದು ರಮಾ ಅವರು ವಿವರಿಸಿದರು.


*ಕ್ರಿಮಿನಲ್ ಪ್ರಕರಣಗಳೇ ಹೆಚ್ಚು:* ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಿದ 1,290 ಪ್ರಕರಣಗಳ ಪೈಕಿ 982 ಪ್ರಕರಣಗಳು ಕ್ರಿಮಿನಲ್ ಪ್ರಕರಣಗಳಾಗಿವೆ. 140 ಕ್ರಿಮಿನಲ್ ಕಾಂಪೌಡಬಲ್ ಪ್ರಕರಣಗಳಾಗಿದ್ದರೆ, 70 ಸಿವಿಲ್, 46 ವ್ಯಾಜ್ಯ ಪೂರ್ವ, 44 ಅಪಘಾತ ಪರಿಹಾರ, ನೆಗೋಷಿಯಬಲ್ ಆಕ್ಟ್ ನ 30 ಪ್ರಕರಣಗಳು, 6 ಬ್ಯಾಂಕ್ ನ ಹಣ ವಸೂಲಾತಿ ಪ್ರಕರಣ, 2 ಕೈಗಾರಿಕಾ ವಿವಾದದ ಪ್ರಕರಣಗಳು ಸೇರಿದಂತೆ ಇನ್ನಿತರ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಅವರು ತಿಳಿಸಿದರು. 


ಜಿಲ್ಲೆಯಲ್ಲಿ ಒಟ್ಟು 39,686 ಪ್ರಕರಣಗಳು ಬಾಕಿ ಇದ್ದು, ಇವುಗಳ ಪೈಕಿ 4,384 ಪ್ರಕರಣಗಳು ಹಾಗೂ ಇ-ಲೋಕ ಅದಾಲತ್ ಗಾಗಿ ನೊಂದಣಿ ಮಾಡಿಸಿಕೊಂಡಿದ್ದ ಪ್ರಕರಣಗಳನ್ನು ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದರು. 


ರಾಮನಗರ ಜಿಲ್ಲಾ ಹಾಗೂ ಎಲ್ಲಾ 18 ಅಧೀನ ನ್ಯಾಯಾಲಯಗಳಲ್ಲಿ ಆನ್ ಲೈನ್ ಮೂಲಕವೇ ಈ ಕಲಾಪವು ನಡೆದಿದ್ದು ವಿಶೇಷವಾಗಿತ್ತು. ನ್ಯಾಯಾಲಯದ ಕಲಾಪಗಳಲ್ಲಿ ವಕೀಲರು ಖುದ್ದಾಗಿ ಭಾಗವಹಿಸಿದ್ದರೆ, ಇನ್ನು ಕೆಲವರು ಆನ್ ಲೈನ್ ಮೂಲಕ ಭಾಗವಹಿಸಿದ್ದರು. ಅವಶ್ಯಕತೆ ಇದ್ದಂತಹ ಪ್ರಕರಣಗಳಲ್ಲಿ ಕಕ್ಷಿದಾರರನ್ನು  ಆನ್ ಲೈನ್ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸಲಾಯಿತು ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑