Tel: 7676775624 | Mail: info@yellowandred.in

Language: EN KAN

    Follow us :


ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ

Posted date: 05 Oct, 2020

Powered by:     Yellow and Red

ಅತ್ಯಾಚಾರ ಎಸಗಿ ಕೊಲೆಗೈದ ಪಾಪಿಗಳಿಗೆ ಗಲ್ಲು ಶಿಕ್ಷೆ ನೀಡಿ, ದಲಿತ ಸಂಘಟನೆಗಳ ಆಕ್ರೋಶ

ಚನ್ನಪಟ್ಟಣ:ಅ/05/20/ಸೋಮವಾರ.


ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆಗೈದ ಕ್ರೂರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಕುಟುಂಬದವರಿಗೂ ಮುಖ ತೋರಿಸದೆ ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಿದ ಪೋಲೀಸರನ್ನು ಬಂಧಿಸಬೇಕು. ಉತ್ತರ ಪ್ರದೇಶ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕು ಎಂದು ತಾಲ್ಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟ ಇಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ತಹಶಿಲ್ದಾರ್ ರವರ ಮೂಲಕ ಮನವಿ ಸಲ್ಲಿಸಿದರು.


ಕಾಂಗ್ರೆಸ್ ಮುಖಂಡ ಶರತ್ ಚಂದ್ರ ಮಾತನಾಡಿ ದಲಿತರು ಮತ್ತು ಹಿಂದುಳಿದ ವರ್ಗಗಳ ಜನರನ್ನು ಹತ್ತಿಕ್ಕುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಅದರಲ್ಲೂ ಉತ್ತರ ಪ್ರದೇಶದ ಸರ್ಕಾರವು ಒಡೆದಾಳುವ ನೀತಿ ಪ್ರದರ್ಶಿಸುತ್ತಿದೆ. ಹೀಗೆ ಮುಂದುವರೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.


ರೈತಸಂಘ ದ ಹಿರಿಯ ಮುಖಂಡ ಎಂ ರಾಮು ಮಾತನಾಡಿ ಜನ ತಪ್ಪು ಮಾಡಿದರೆ ಪೋಲಿಸರು ಕ್ರಮ ಕೈಗೊಳ್ಳುವಂತೆ, ಸರ್ಕಾರ ತಪ್ಪು ಮಾಡಿದರೆ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಇಲ್ಲವೇ ರಾಷ್ಟ್ರಪತಿ ಕ್ರಮ ಕೈಗೊಳ್ಳಬೇಕು. ಇವರೆಲ್ಲರೂ ಪ್ರಧಾನಿ ಮತ್ತು ಬಿಜೆಪಿ ಪಕ್ಷದ ಕೈಗೊಂಬೆಗಳಾಗಿದ್ದು ಸಾಮಾನ್ಯ ಜನರು ಪರಿತಪಿಸುವಂತೆ ಆಗಿದೆ. ಹೀಗೆ ಮುಂದುವರೆದರೆ ಸರ್ಕಾರವು ರೊಚ್ಚಿಗೆದ್ದ  ಜನರಿಂದಲೇ ಪತನವಾಗುವುದು ಸತ್ಯ ಎಂದರು.


ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಸೈಯದ್ ನವಾಜ್ ಮಾತನಾಡಿ ಇದು ರಾಮರಾಜ್ಯವಲ್ಲ ರಾವಣ ರಾಜ್ಯ ಆಗಿದೆ. ಇದು ಚಡ್ಡಿಗಳ ಸರ್ಕಾರ ಎಂದು ಜರಿದರು.

ದಲಿತ ಮುಖಂಡ ಜಯಂತ್ ಚಾಲುಕ್ಯ ಮಾತನಾಡಿ ಉತ್ತರ ಪ್ರದೇಶ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ದವಾದರೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯ ನಂತರ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಅಲ್ಲಿಯೂ ಘೋಷಣೆ ಕೂಗಿದರು. ಇದೆ ವೇಳೆ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ ಜಾತಿ ಧರ್ಮ ಬಿಟ್ಟು ಹೋರಾಟ ಮಾಡಬೇಕು. ಯಾವ ಹೆಣ್ಣಿಗೆ ಅನ್ಯಾಯವಾದರೂ ಎಲ್ಲರೂ ಸಿಡಿದೇಳಬೇಕು ಎಂದು ಕರೆ ನೀಡಿದರು.

ಸ್ವರಾಜ್ ಸಂಘಟನೆಯ ಸುಕನ್ಯಾ, ಅಕ್ಕೂರು ಶೇಖರ್, ಎ ಸಿ ವೀರೇಗೌಡ ಸೇರಿದಂತೆ ಅನೇಕ ದಲಿತ ಮುಖಂಡರು ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು.


ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ನಾಗೇಶ್ ರವರು ಈಗಾಗಲೇ ಸರ್ಕಾರವು ತನಿಖೆಯನ್ನು ಕೈಗೆತ್ತಿಕೊಂಡಿದೆ. ತಾಲ್ಲೂಕಿನ ಹೋರಾಟಗಾರರು ನೀಡಿರುವ ಮನವಿಯನ್ನು ನಾನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.


ಪ್ರತಿಭಟನೆಯಲ್ಲಿ ಕರವೇ ಸತ್ಯನಾರಾಯಣ ಮತ್ತು ಹೋ ಪು ಸಾಗರ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹನುಮಂತಯ್ಯ, ವೆಂಕಟೇಶ (ಶೇಟು), ಶ್ರೀನಿವಾಸ, ಕೋಟೆ ಸಿದ್ದರಾಮು, ಸಮತಾ ಸೈನ್ಯದ ಶಿವಕುಮಾರ್, ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑