ಸಾರ್ವಜನಿಕ ಆಸ್ಪತ್ರೆಯಲ್ಲಿಲ್ಲ ಕೊರೊನಾ ಮುಂಜಾಗ್ರತಾ ಕ್ರಮ. ಗುಂಪುಗುಂಪಾಗಿ ನಿಂತ ರೋಗಿಗಳು
ಚನ್ನಪಟ್ಟಣ:ಅ/12/20/ಸೋಮವಾರ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ಗುಂಪುಗುಂಪಾಗಿ ಚಿಕಿತ್ಸೆಗಾಗಿ ನಿಂತಿರುವುದು ಕೊರೊನಾ ಮತ್ತಷ್ಟು ಹರಡಲು ಅನುವು ಮಾಡಿಕೊಟ್ಟಂತಾಗಿದೆ. ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುವ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕಂಡು ಕಾಣದಂತೆ ರೋಗಿಗಳನ್ನು ತಮ್ಮಷ್ಟಕ್ಕೆ ಬಿಟ್ಟು ಓಡಾಡುವುದು ಕೊರೊನಾ ಹೆಚ್ಚಾಗಲು ವೈದ್ಯಕೀಯ ಸಿಬ್ಬಂದಿಗಳೇ ಕಾರಣ ಎನ್ನಲಡ್ಡಿಯಿಲ್ಲ.
ರೋಗಿಗಳು ಸಹ ಕೊರೊನಾ ರೋಗವನ್ನು ತುಂಬಾ ಹಗುರವಾಗಿ ತೆಗೆದುಕೊಂಡಿರುವಂತೆ ಕಾಣಿಸುತ್ತದೆ. ಕನಿಷ್ಠ ಪಕ್ಷ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ಹೋಗುವ ಬದಲು, ನಾಮುಂದು ತಾಮುಂದು ಎಂಬಂತೆ ಒಬ್ಬರ ಮೇಲೊಬ್ಬರು ಬೀಳುವಂತೆ ನಿಂತು, ಚಿಕಿತ್ಸೆ ಪಡೆಯಲು ಮುಂದಾಗುತ್ತಿರುವುದು ಕೊರೊನಾ ಜೊತೆಗೆ ಮತ್ತಷ್ಟು ರೋಗಗಳನ್ನು ತಾವಾಗಿಯೇ ಆಹ್ವಾನ ಮಾಡಿಕೊಳ್ಳುತ್ತಿರುವುದು ಅವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅನೇಕ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸೀಮಿತಗೊಳಿಸಿದ್ದು, ಶುಲ್ಕವು ದುಬಾರಿಯಾಗಿರುವುದರಿಂದ ಬಡ ರೋಗಿಗಳು ಸಾರ್ವಜನಿಕ ಆಸ್ಪತ್ರೆಗೆ ಎಡತಾಕುವುದು ಸರ್ವೇಸಾಮಾನ್ಯ. ಬಡರೋಗಿಗಳೇ ಹೆಚ್ಚು ಬರುವುದರಿಂದ ಅವರಿಗೆ ಸಾಮಾನ್ಯ ಜ್ಞಾನ ಕಡಿಮೆ ಎಂದು ಭಾವಿಸಿದರೂ ಸಹ ಇವರಿಗೆ ತಿಳುವಳಿಕೆ ನೀಡಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವ ಕಾಯಕ ಆಸ್ಪತ್ರೆಯ ಸಿಬ್ಬಂದಿಗಳದಾಗಿದ್ದರೂ ಯಾರೂ ಸಹ ಮುಂದಾಗದಿರುವುದು ದುರ್ದೈವ ಎನ್ನಬಹುದು.
ಸೋಮವಾರ ಹೊರರೋಗಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಎಲ್ಲಾ ರೋಗಗಳಿಗೆ ಸಂಬಂಧಿಸಿದ ಓಪಿಡಿ ಗಳು ಆಜೂಬಾಜಿನಲ್ಲೇ ಇರುವುದರಿಂದಲೂ ರೋಗಿಗಳು ಒಂದೇ ಕಡೆ ನಿಲ್ಲುವಂತಾಗಿದೆ.
ಡಿ ಗ್ರೂಪ್ ನೌಕರರೊಬ್ಬರನ್ನು ಓಪಿಡಿಗಳ ಮುಂದೆ ಕಾವಲು ಹಾಕುವ ಮೂಲಕ ಕಡ್ಡಾಯ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಳ್ಳಲು ಮುನ್ನೆಚ್ಚರಿಕೆ ವಹಿಸಲಾಗುವುದು.
*ಡಾ ವಿಜಯನರಸಿಂಹ. ಅಧೀಕ್ಷಕರು, ಸಾರ್ವ ಆಸ್ಪತ್ರೆ. ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು