ಗಡಿ ಮತ್ತು ನಾಗರೀಕರನ್ನು ಕಾಯುವ ಪೋಲಿಸರಿಗೆ ಸರ್ವರೂ ಗೌರವ ನೀಡಬೇಕು; ಜಿಲ್ಲಾಧಿಕಾರಿ ಅರ್ಚನಾ
ಚನ್ನಪಟ್ಟಣ:ಅ:21/20/ಬುಧವಾರ. ಗಡಿಯನ್ನು ಮತ್ತು ನಾಗರೀಕರನ್ನು ಸದಾ ಕಾಯುವ ಪೋಲಿಸರಿಗೆ ಸಾರ್ವಜನಿಕರು ಗೌರವವನ್ನು ನೀಡಬೇಕು.
ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ, ದೇಶದ ಒಳಿತಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾರೆ, ಅಂತಹವರನ್ನು ಸದಾ ಸ್ಮರಿಸುವ ಕೆಲಸ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದರು.
ಅವರು ಇಂದು ನಗರದ ಪೋಲೀಸ್ ಮೈದಾನದಲ್ಲಿ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಗೌರವ ಸಲ್ಲಿಸಿ ಹಾಗೂ ಪೋಲೀಸ್ ಧ್ವಜವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಇದು ಕೇವಲ ವರ್ಷದಲ್ಲಿ ಒಂದು ದಿನ ನೆನೆಸುವ ಕೆಲಸವಾಗಬಾರದು, ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಆಂತರ್ಯವನ್ನು ಅರಿತು ಒಗ್ಗೂಡಿ ಕೆಲಸ ಮಾಡಬೇಕು, ಇದರಲ್ಲಿ ಸಾರ್ವಜನಿಕರ ಪಾತ್ರವು ಮಹತ್ತರವಾದುದು ಎಂದು ಅವರು ಅಭಿಪ್ರಾಯ ಪಟ್ಟರು.
ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಿರೀಶ್ ರವರು ಮಾತನಾಡಿ ಏಪ್ರಿಲ್ 02 ನೇ ದಿನಾಂಕದಂದು ಪೋಲೀಸ್ ಧ್ವಜ ದಿನಾಚರಣೆಯನ್ನು ಮಾಡಬೇಕಾಗಿತ್ತು. ಕೊರೊನಾ ಸಂಕಷ್ಟದಿಂದ ಆಚರಿಸಲಾಗಿರಲಿಲ್ಲ. ಇಂದು ಹುತಾತ್ಮರ ದಿನಾಚರಣೆಯ ಜೊತೆಯಲ್ಲಿ ಪೋಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಇಂದು ತಮ್ಮೆಲ್ಲರ ಸಮ್ಮುಖದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ದಿನ ಬಿಡುಗಡೆ ಮಾಡಿರುವ ಪೋಲೀಸ್ ಧ್ವಜವನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಿ ಪೋಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಹುತಾತ್ಮರಿಗೆ ಪೋಲೀಸ್ ವಾದ್ಯಗೋಷ್ಠಿಯ (ಬ್ಯಾಂಡ್) ಮೂಲಕ ನಮನ ಸಲ್ಲಿಸಲಾಯಿತು. ಆರ್ ಪಿ ಐ ಪೋಲಿಸರಿಂದ ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿ ಯವರು ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಉಪ ಪೋಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಡಿವೈಎಸ್ಪಿ ಗಳಾದ ಪುರುಷೋತ್ತಮ, ಓಂಪ್ರಕಾಶ್, ವೃತ್ತ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್ ಗಳು ಮತ್ತಿತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು