ಮಹಾ ಮಳೆಗೆ ಮಕಾಡೆ ಮಲಗಿದ ರಾಗಿ ಬೆಳೆ
ಚನ್ನಪಟ್ಟಣ:ಅ/23/20/ಶುಕ್ರವಾರ. ಕಳೆದ ಮೂರು ತಿಂಗಳಿನಿಂದ ಕಷ್ಟಪಟ್ಟು ಬೆಳೆದ ರಾಗಿ ಬೆಳೆಯು ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯ ರಭಸಕ್ಕೆ ಮಕಾಡೆ (ನೆಲಕ್ಕೆ ಒರಗಿದೆ) ಮಲಗಿದೆ.
ಕೊರೊನಾ ಸೋಂಕಿನಿಂದ ಕಂಗೆಟ್ಟ ಅದೆಷ್ಟೋ ಮಂದಿ ನಗರಗಳಿಂದ ಊರಿಗೆ ಮರಳಿ ಬಂದಿದ್ದು, ತಾಲ್ಲೂಕಿನಾದ್ಯಂತ ಶೇಕಡಾ ಹತ್ತರಷ್ಟು ವ್ಯವಸಾಯ ವೃದ್ದಿಗೊಂಡಿತ್ತು. ನಗರದ ಕೆಲಸ ತೊರೆದು ಊರಲ್ಲಿ ಪಾಳು ಬಿಟ್ಟಿದ್ದ ಭೂಮಿಯಲ್ಲಿ ಅನೇಕ ರೀತಿಯ ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಲು ಹಾತೊರೆದಿದ್ದ ರೈತ ಮಕ್ಕಳಿಗೆ ಈ ಬಾರಿ ಮಳೆಯಿಂದ ಒಳ್ಳೆಯ ಬೆಳೆಯೇನೋ ಬಂದಿದೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ನಾಣ್ಣುಡಿಯಂತೆ, ಕಾಚಕ್ಕಿ ಕಟ್ಟಿದ ಸಂದರ್ಭದಲ್ಲಿ ಮಳೆ ಬಿರುಸಾಗಿ ಬಂದ ಕಾರಣ ಉದ್ದವಾಗಿ ಬೆಳೆದಿದ್ದ ರಾಗಿಯು ಭೂಮಿಗೆ ತಲೆಬಾಗಿಸಿದೆ.
ರಾಗಿಯು ಮನೆಗೆ ಬರುವ ಮೊದಲೇ ಭೂಮಿಯಲ್ಲಿ ಇದೇ ರಾಗಿ ಮೊಳಕೆಯೊಡೆಯುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಉತ್ತುಬಿತ್ತು, ರಸಗೊಬ್ಬರಕ್ಕಾಗಿ ದಿನಗಟ್ಟಲೆ ಕಾದು ಬೆಳೆದ ರಾಗಿಯು ಕಟಾವಿಗೆ ಮುಂಚೆಯೇ ನೆಲಕ್ಕೊರಗಿರುವುದರಿಂದ ರೈತ ಕಂಗಾಲಾಗಿದ್ದಾನೆ.
ಕೃಷಿ ಇಲಾಖೆಯವರು ತಡಮಾಡದೆ ಈಗಿನಿಂದಲೇ ಸಮೀಕ್ಷೆ ನಡೆಸಿ, ನೆಲ ಕಚ್ಚಿದ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಬೆಳೆ ನಷ್ಟ ಅನುಭವಿಸುತ್ತಿರುವ ರೈತರು ಆಗ್ರಹಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು