ಮೂರು ದಿನಗಳ ರಜೆಯ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಭರಾಟೆ
ಚನ್ನಪಟ್ಟಣ:ಅ/27/20/ಮಂಗಳವಾರ. ತಿಂಗಳ ಕೊನೆಯ ಶನಿವಾರ, ಭಾನುವಾರ ದ ಜೊತೆಗೆ ಆಯುಧ ಪೂಜೆ, ಸೋಮವಾರ ವಿಜಯದಶಮಿ ಹೀಗೆ ಸಾಲುಸಾಲು ರಜೆಗಳ ಹಿನ್ನೆಲೆಯಲ್ಲಿ ಕೊರೊನಾವನ್ನು ಲೆಕ್ಕಿಸದೇ ದಸರಾ ಪ್ರಯುಕ್ತ ಮೈಸೂರು ಸೇರಿದಂತೆ ಅನೇಕ ಕಡೆ ಪ್ರವಾಸ ಹೊರಟಿದ್ದ ಬೆಂಗಳೂರಿಗರು ನಿನ್ನೆ ಸಂಜೆ ವಾಪಾಸ್ಸಾಗುತ್ತಿದ್ದುದರಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೆಚ್ಚು ವಾಹನಗಳು ರಸ್ತೆಗಿಳಿದಿದ್ದರಿಂದ ಮಂದಗತಿಯಲ್ಲಿ ಸಾಗಿದ್ದವು.
ದಸರಾ ಹಬ್ಬವು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆಗೊಂಡರೂ, ಸರ್ಕಾರವು ಇತ್ತೀಚಿಗೆ ಮುಕ್ತವಾಗಿ ಓಡಾಡಲು ಹಸಿರು ನಿಶಾನೆ ನೀಡಿದ್ದರಿಂದ ಇನ್ನೂ ಜೀವಂತವಿರುವ ಕೊರೊನಾ ವನ್ನು ಲೆಕ್ಕಿಸದೇ ಮೈಸೂರು ದಸರಾ ಸೇರಿದಂತೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಿಗೆ ಸಾರ್ವಜನಿಕರು ಅದರಲ್ಲೂ ಬೆಂಗಳೂರು ನಿವಾಸಿಗಳು ಲಗ್ಗೆ ಇಟ್ಟಿದ್ದರು.
ಬೆಂಗಳೂರು ಮೈಸೂರು ರಸ್ತೆಯು ಅಗಲೀಕರಣಗೊಳ್ಳುತ್ತಿದ್ದು ಕೆಲವು ಕಡೆ ಒಂದೇ ದಾರಿಯಲ್ಲಿ ಎರಡೂ ಬದಿಯ ವಾಹನಗಳು ಸಂಚರಿಸಿದರೆ, ಅಗಲೀಕರಣಗೊಂಡಿರುವ ರಸ್ತೆಯಲ್ಲಿ ವಾಹನಗಳ ಮೀಟರ್ ನೂರು ಕಿಮೀ ದಾಟುತ್ತಿದೆ. ನಗರಗಳಲ್ಲಿ ರಸ್ತೆಗಳು ಕಿರಿದಾಗಿರುವುದು ಮತ್ತು ಅಲ್ಲಲ್ಲೇ ಸಂಚಾರಿ ದೀಪಗಳು ಇರುವುದರಿಂದ ಒತ್ತೊತ್ತಾಗಿ ನಿಂತು ನಗರ ಬಿಡುವುದರೊಳಗಾಗಿ ಸಹಸ್ರಾರು ವಾಹನಗಳು ಮಂದಗತಿಯಲ್ಲಿ ಸಾಗಿದವು.
ನಗರದ ನ್ಯಾಯಾಲಯದ ಸಂಕೀರ್ಣದ ಎದುರು ಇರುವ ಸಿಗ್ನಲ್ ನಲ್ಲಿ ತಡೆದರೆ ದೊಡ್ಡಮಳೂರು ಗ್ರಾಮದವರೆಗೆ ಮತ್ತು ಷೇರು ಹೋಟೆಲ್ ಬಳಿಯ ಸಿಗ್ನಲ್ ನಲ್ಲಿ ತಡೆದಾಗ ಪೂರ್ವ ಮತ್ತು ಗ್ರಾಮಾಂತರ ಪೋಲಿಸ್ ಠಾಣೆಯ ವರೆಗೂ ವಾಹನಗಳು ನಿಲ್ಲುತ್ತಿದ್ದರಿಂದ ನಗರದ ಒಳ ಮತ್ತು ಹೊರ ಹೋಗುವ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಹರಸಾಹಸ ಪಡುವಂತಾಗಿತ್ತಾದರೂ ಸಂಚಾರಿ ಪೋಲಿಸರ ಮುನ್ನೆಚ್ಚರಿಕೆ ಕ್ರಮದಿಂದ ಯಾವುದೇ ತೊಂದರೆಯಾಗಲಿಲ್ಲ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು