ಇಂದು ಮರಾಠಿ ಪ್ರಾಧಿಕಾರ, ನಾಳೆ ತಮಿಳು, ತೆಲುಗು ಭಾಷೆಯ ಪ್ರಾಧಿಕಾರ ಮಾಡುತ್ತಾರೆ. ಕನ್ನಡಿಗರು ಈಗಲೇ ಎಚ್ಚರಗೊಳ್ಳಬೇಕು. ಕಕಜವೇ ರಮೇಶಗೌಡ
ಚನ್ನಪಟ್ಟಣ:ನ/17/20/ಮಂಗಳವಾರ.
ರಾಜ್ಯ ಸರ್ಕಾರವು ಮರಾಠಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಹಣ ನೀಡಿ ಪ್ರಾಧಿಕಾರ ರಚಿಸುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ. ಈ ಆದೇಶವನ್ನು ಈಗಲೇ ಹಿಂಪಡೆಯಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದರು.
ಅವರು ಇಂದು ನಗರದ ಕಾವೇರಿ ವೃತ್ತದಲ್ಲಿ ಸರ್ಕಾರಕ್ಕೆ 'ಥೂ ಥೂ' ಎಂದು ಉಗಿಯುವ ಚಳವಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ನೀಡಿದ್ದು, ಮರಾಠಿ ಪ್ರಾಧಿಕಾರ ರಚಿಸಲು ಐವತ್ತು ಕೋಟಿ ನೀಡಿರುವುದು ಕನ್ನಡಿಗರಿಗೆ ದ್ರೋಹ ಬಗೆದಂತಾಗಿದೆ. ಕರ್ನಾಟಕದಲ್ಲಿ ಮರಾಠಿ ಪ್ರಾಧಿಕಾರದ ಅವಶ್ಯಕತೆ ಏನಿದೆ ? ಮರಾಠರ ನಾಡಿನಲ್ಲಿ ಕನ್ನಡಿಗರಿಗೆ ಅಲ್ಲಿನ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆಯೇ ? ಇಲ್ಲವೆಂದಾದಲ್ಲಿ ಕರ್ನಾಟಕದಲ್ಲಿ ಮರಾಠಿ ಪ್ರಾಧಿಕಾರ ಏಕೆ ಬೇಕು ಎಂದು ಅವರು ಪ್ರಶ್ನಿಸಿದರು.
ಇಂದು ಮರಾಠಿ ಪ್ರಾಧಿಕಾರ ರಚನೆ ಮಾಡುತ್ತಾರೆ. ನಾಳೆ ದೇಶದ ಇನ್ನಿತರ ಭಾಷಿಗರ ಪ್ರಾಧಿಕಾರ ರಚನೆಮಾಡುತ್ತಾರೆ. ಎರಡು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸ ಉಳ್ಳ ಕನ್ನಡದ ಅಸ್ತಿತ್ವವನ್ನೇ ಅಲುಗಾಡಿಸಲು ಹೊರಟಿರುವುದು ಸರಿಯಿಲ್ಲ ಎಂದರು.
ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸಿದ ಪಾಲಿಕೆಯ ಮೇಲೆ ಬಾವುಟ ಹಾರಿಸಲು ಬಿಡದ ಮರಾಠಿಗರಿಗೆ ಮಣೆ ಹಾಕಿ, ಕನ್ನಡಿಗರಿಗೆ ಅನ್ಯಾಯ ಎಸಗುತ್ತಿರುವ ರಾಜ್ಯ ಸರ್ಕಾರವು ಈ ಆದೇಶವನ್ನು ತಕ್ಷಣವೇ ಹಿಂಪಡೆದು, ನಾಡಿನ ಸಮಸ್ತ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದರೆ ರಾಜ್ಯದ ಎಲ್ಲಾ ಕನ್ನಡ ಸಂಘಟನೆಗೊಳಗೂಡಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಾ ರಾಜಕುಮಾರ್ ಕಲಾಬಳಗದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗಿಯಾಗಬೇಕಿತ್ತು. ಬಾರದಿರುವುದು ಬೇಸರ ತರಿಸಿದೆ. ಮರಾಠಿ ಪ್ರಾಧಿಕಾರವನ್ನು ಸರ್ಕಾರ ರಚಿಸುವ ಮುನ್ನವೇ ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ವರದಿ ನೀಡಬೇಕಾದದ್ದು ಕಸಾಪ ದ ಕರ್ತವ್ಯ. ಈ ಕೂಡಲೇ ಅವರು ಎಚ್ಚೆತ್ತು, ವರದಿ ಸಲ್ಲಿಸಬೇಕು. ಜಾತಿ ಧರ್ಮ ನೋಡದೆ ಕನ್ನಡಿಗರೆಲ್ಲರೂ ಒಗ್ಗೂಡಿ ಹೋರಾಡಬೇಕೆಂದು ಅವರು ಕರೆ ನೀಡಿದರು.
ಇದಕ್ಕೂ ಮೊದಲು 'ಥೂ ಥೂ' ಎಂದು ಉಗುಳಿ ಆಕ್ರೋಶ ವ್ಯಕ್ತಪಡಿಸಿದರು. ಜಾನಪದ ಕಲಾವಿದ ಚೌಪು ಸ್ವಾಮಿ ಯವರು ಕ್ರಾಂತಿಗೀತೆ ಹಾಡುವ ಮೂಲಕ ಕನ್ನಡಿಗರನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಕಜವೇ ಯ ಜಿಲ್ಲಾಧ್ಯಕ್ಷ ಯೋಗೇಶಗೌಡ, ಬೆಂಕಿ ಶ್ರೀಧರ್, ಚೇತನ್ ಕೀಕರ್ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು