ಚನ್ನಪಟ್ಟಣ:ನ/30/20/ಸೋಮವಾರ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಸಮಾಜದ ಸ್ವಾಸ್ಥ್ಯ ಕದಡಬಾರದು ಎಂಬ ಹಿನ್ನೆಲೆಯಲ್ಲಿ ತಾಲ್ಲೂಕಿನ ರೌಡಿ ಶೀಟರ್ ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡಿದ ಘಟನೆ ಇಂದು ನಡೆಯಿತು. ನೂತನ ವೃತ್ತ ನಿರೀಕ್ಷಕ ಡಿ ಶಿವಕುಮಾರ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಪೋಲೀಸ್ ಠಾಣೆಯ ಆವರಣದಲ್ಲಿ ರೌಡಿಗಳ ಪೆರೇಡ್ ನಡೆಸಿದ ಎಸ್ಐ ಶಿವಕುಮಾರ್ ಎಚ್ಚರಿಕೆ ನೀಡಿ ಕಳುಹಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಐವತ್ತಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದು ಕೆಲವು ಮಂದಿ ಕಾರಾಗೃಹದಲ್ಲಿದ್ದರೆ, ಕೆಲವು ಮಂದಿ ಕಾರಣಾಂತರಗಳಿಂದ ಗೈರುಹಾಜರಾಗಿದ್ದಾರೆ. ಅವರನ್ನು ಸಹ ಶೀಘ್ರವಾಗಿ ಕರೆದು ಎಚ್ಚರಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು. ಪೆರೇಡ್ ಗೆ ಬಂದಿದ್ದ ರೌಡಿ ಶೀಟರ್ ಗಳನ್ನು ಒಬ್ಬೊಬ್ಬರನ್ನೇ ಕರೆದು ಪೂರ್ವಾಪರ ವಿಚಾರಿಸಿ ಎಚ್ಚರಿಕೆ ನೀಡಿದರು.
ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಜಾಲಕ್ಕೆ ಸಿಕ್ಕಿಕೊಂಡಿದ್ದೀರಿ. ಇದು ನಿಮ್ಮ ಜೀವನವನ್ನು ಹಾಳು ಮಾಡುತ್ತದೆ. ಇದನ್ನು ಮುಂದುವರೆಸದೆ ರೌಡಿ ಪಟ್ಟದಿಂದ ಹೊರಬಂದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಇದೇ ವೇಳೆ ಕಿವಿಮಾತು ಹೇಳಿದರು.
ನೀವು ಚುನಾವಣೆಯಲ್ಲಿ ಮೂಗು ತೂರಿಸುವ, ಬೆದರಿಕೆ ಒಡ್ಡುವ ಕೆಲಸ ಮಾಡಬಾರದು. ಸಮಾಜದಲ್ಲಿ ಸ್ವಾಸ್ಥ್ಯ ಕೆಡುವ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸಬಾರದು. ನಿಮ್ಮ ಸಮಸ್ಯೆಗಳೇನಾದರೂ ಇದ್ದರೆ ಮುಕ್ತವಾಗಿ ನಮ್ಮ ಬಳಿ ತಿಳಿಸಿ.
ಕಾನೂನು ಕೈಗೆತ್ತಿಕೊಳ್ಳಲು ಅಥವಾ ಸಾರ್ವಜನಿಕರಿಗೆ ತೊಂದರೆ ಕೊಡುವುದು ಮಾಡಿದರೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು