ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ
ಚನ್ನಪಟ್ಟಣ:ಜ/11/21/ಸೋಮವಾರ. ತಾಲ್ಲೂಕಿನ ಮೆಂಗಳ್ಳಿ, ಕೃಷ್ಣಾಪುರ, ಗರಕಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹಾಗೂ ಮೇಕೆಗಳನ್ನು ತಿಂದು ತೇಗಿದ ಚಿರತೆಯೊಂದು ನಿನ್ನೆ ತಡರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕಳೆದ ತಿಂಗಳು ಮೂರ್ನಾಲ್ಕು ದಿನಗಳ ಕಾಲ ನಿರಂತರವಾಗಿ ಮೆಂಗಳ್ಳಿ ಗ್ರಾಮಕ್ಕೆ ಚಿರತೆ ದಾಳಿ ಇಟ್ಟಿತ್ತು. ಅರಣ್ಯ ಇಲಾಖೆಯವರು ಬೋನು ಇಟ್ಟಿದ್ದರೂ ಸಹ ಬೋನಿನ ಬಳಿ ಸುಳಿಯದೇ ತಪ್ಪಿಸಿಕೊಂಡಿತ್ತು. ಈ ತಿಂಗಳ ಎತಡನೇ ವಾರದಲ್ಲಿ ಮುಸ್ಸಂಜೆಯ ವೇಳೆ ಕೃಷ್ಣಾಪುರ ಗ್ರಾಮದೊಳಗೆ ನುಗ್ಗಿದ ಚಿರತೆಯು ಮೇಕೆಗೆ ಬಾಯಿ ಹಾಕಿತ್ತು. ಕ್ಷಣಾರ್ಧದಲ್ಲಿ ಮೇಕೆ ತಪ್ಪಿಸಿಕೊಂಡಿತ್ತು.
ನಂತರ ಬೀದಿ ಬದಿಯಲ್ಲಿ ಕಟ್ಟಿ ಹಾಕಿದ್ದ ಹಸುವಿನ ಹಿಂದೊಡೆಗೆ ಬಾಯಿ ಹಾಕಿದ್ದು, ಜನರ ಗುಂಪು ಮತ್ತು ಸದ್ದು ಕೇಳಿ ಹಸುವನ್ನು ಬಿಟ್ಟು ಚಿರತೆ ಕಾಲ್ಕಿತ್ತಿತು. ಎಚ್ಚೆತ್ತ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ರವರು ಕೃಷ್ಣಾಪುರ ಗ್ರಾಮದಲ್ಲೂ ಒಂದು ಬೋನನ್ನು ಇರಿಸಿದ್ದರು. ಆ ಬೋನಿಗೆ ನಿನ್ನೆ ತಡರಾತ್ರಿ ಚಿರತೆ ಸಿಲುಕಿಕೊಂಡಿದೆ.
ಜನ ಮತ್ತು ಜಾನುವಾರುಗಳಿಗೆ ಭಯ ಹುಟ್ಟಿಸಿದ ಚಿರತೆಯನ್ನು ಹಿಡಿಯಲು ನಾವು ಮೆಂಗಳ್ಳಿ ಮತ್ತು ಕೃಷ್ಣಾಪುರ ಗ್ರಾಮದಲ್ಲಿ ಬೋನುಗಳನ್ನು ಇಟ್ಟಿದ್ದೆವು. ಹೊಸದಾಗಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ದೊಡ್ಡ ಅರಣ್ಯವೊಂದಕ್ಕೆ ಚಿರತೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ರವರು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು