Tel: 7676775624 | Mail: info@yellowandred.in

Language: EN KAN

    Follow us :


ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ‌ ಇಂದು ಲಸಿಕೆ

Posted date: 16 Jan, 2021

Powered by:     Yellow and Red

ಪ್ರಥಮ ಬಾರಿಗೆ ತಾಲ್ಲೂಕಿನ ಇಗ್ಗಲೂರು ಮತ್ತು ನಗರ ಸಾರ್ವಜನಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ‌ ಇಂದು ಲಸಿಕೆ

ಚನ್ನಪಟ್ಟಣ:ಜ/16/21/ಶನಿವಾರ. ವಿಶ್ವವನ್ನೇ ಗಾಬರಿ ಹುಟ್ಟಿಸಿ, ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ಬಲಿ ಪಡೆದ  ಕೊರೊನಾ ಮಾರಿಗೆ ಭಾರತದಲ್ಲಿ ಕೋವ್ಯಾಕ್ಷಿನ್ ಲಸಿಕೆ ಕಂಡುಹಿಡಿದಿದ್ದು, ಅದರಲ್ಲೂ ವರ್ಷ ತುಂಬುವ ಮೊದಲೇ ಕಂಡುಹಿಡಿದಿರುವುದು ಸಾರ್ವಜನಿಕರಿಗೆ ನೆರವಾಗಿದೆ.


ರಾಮನಗರ ಜಿಲ್ಲೆಗೆ ನಿನ್ನೆ ದಿನ ಕೋವ್ಯಾಕ್ಷಿನ್ ಲಸಿಕೆ ತಲುಪಿತು. ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಕೋವ್ಯಾಕ್ಷಿನ್ ಬಂದಿದ್ದು, ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಇಗ್ಗಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರೊನಾ ವಾರಿಯರ್ಸ್‌ ಗಳಿಗೆ ಇಂದು‌ ಲಸಿಕೆ‌ ನೀಡಲಾಗುತ್ತಿದೆ.


ನಗರದ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ ವಿಜಯನರಸಿಂಹ ನೇತೃತ್ವದಲ್ಲಿ, ಡಾ ಅಮರೇಶ್ ರವರಿಗೆ ಪ್ರಥಮವಾಗಿ ಕೋವ್ಯಾಕ್ಷಿನ್ ಲಸಿಕೆ ನೀಡಲಾಯಿತು. ಒಟ್ಟು ನೂರು ಮಂದಿ ವಾರಿಯರ್ಸ್‌ ಗೆ ಲಸಿಕೆ ನೀಡಲು ಸಜ್ಜಾಗಿದ್ದೇವೆ. ಲಸಿಕೆ ನೀಡಿದ ಪ್ರತಿ ಸಿಬ್ಬಂದಿಗೂ ಅರ್ಧ ಗಂಟೆಗೂ ಹೆಚ್ಚು ಕಾಲ ನಿಗಾದಲ್ಲಿರಿಸಿದ್ದು, ಇದುವರೆಗೂ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗಿಲ್ಲ. ಸಂಜೆ ನಾಲ್ಕು ಗಂಟೆಯ ತನಕವೂ ಲಸಿಕೆ‌ ನೀಡಲಿದ್ದೇವೆ‌ ಎಂದು ಡಾ ವಿಜಯನರಸಿಂಹ ತಿಳಿಸಿದರು.


ತಾಲ್ಲೂಕಿನ ಇಗ್ಗಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ರಾಜು ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‌ ಗಳಿಗೆ ಲಸಿಕೆ ನೀಡಲಾಯಿತು. ಮಧ್ಯಾಹ್ನ ಒಂದು‌ ಗಂಟೆ ವೇಳೆಗೆ ಇಪ್ಪತೈದು ಮಂದಿ ಸಿಬ್ಬಂದಿಗಳಿಗೆ ಲಸಿಕೆ ನೀಡಿದ್ದೇವೆ. ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ. ಒಟ್ಟು ಐವತ್ತು ಮಂದಿ ವಾರಿಯರ್ಸ್‌ಗಳಿಗೆ ಇಂದು ಲಸಿಕೆ ನೀಡುತ್ತೇವೆ ಎಂದು ಅವರು ತಿಳಿಸಿದರು.


ಇಂದು ನೀಡುವ ಲಸಿಕೆಯು ರೋಗ ನಿರೋಧಕ ಹೆಚ್ಚಿಸುವ ಲಸಿಕೆಯಾಗಿದ್ದು, ಇಂದು ಲಸಿಕೆ ನೀಡಿದ ಒಂದು ತಿಂಗಳ ನಂತರ ಮತ್ತೊಂದು ಲಸಿಕೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಎರಡೂ ಲಸಿಕೆ ಪಡೆಯಲೇ ಬೇಕು ಎಂದು ಬಲ್ಲ ಮೂಲಗಳು ತಿಳಿಸಿವೆ.


ಎರಡೂ ಕಡೆಯೂ ಪೋಲೀಸ್ ಸಿಬ್ಬಂದಿಗಳು ರಕ್ಷಣೆ ನೀಡಿದರು. ಇಗ್ಗಲೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಗ್ರಾಮಾಂತರ ಪೋಲೀಸ್ ಠಾಣೆಯ ಉಪ ನಿರೀಕ್ಷಕ ಶಿವಕುಮಾರ್, ಗ್ರಾಮ ಪಂಚಾಯತಿ ಪಿಡಿಓ, ಆರೋಗ್ಯ ಸಿಬ್ಬಂದಿಗಳು‌ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑