Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ: ಹೆ ಚ್ಡಿ ಕುಮಾರಸ್ವಾಮಿ (H D Kumaraswamy)

Posted date: 26 Feb, 2021

Powered by:     Yellow and Red

ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ: ಹೆ ಚ್ಡಿ ಕುಮಾರಸ್ವಾಮಿ (H D Kumaraswamy)

ಚನ್ನಪಟ್ಟಣ:ಫೆ.26/21/ಶುಕ್ರವಾರ. ಮಂತ್ರಿ ಆದವನು ರಾಜ್ಯ ನೋಡಲಿ, ಚನ್ನಪಟ್ಟಣ ಅಭಿವೃದ್ಧಿ ಮಾಡಲು ಜನ ನನ್ನನ್ನು ಆರಿಸಿ ಕಳುಹಿಸಿದ್ದಾರೆ. ನಾನು ಬಂಡೆಯನ್ನು ಒಡೆದು ದುಡ್ಡು ಮಾಡಿಲ್ಲ ಅಥವಾ ಕೆರೆ ತುಂಬಿಸುತ್ತೇನೆ ಎಂದೂ  ದುಡ್ಡು ಮಾಡಿಲ್ಲ. ಅತ್ತ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಹೋರಾಟದಲ್ಲಿ ತೊಡಗಿದ್ದಾರೆ. ಇತ್ತ ಚನ್ನಪಟ್ಟಣ ಕೈ ಬಿಟ್ಟು ಹೋಗುತ್ತಿದೆ ಎಂದು ಇಲ್ಲಸಲ್ಲದ ಆರೋಪವನ್ನು ಇವನು ಮಾಡುತ್ತಿದ್ದಾನೆ. ಇವನಿಂದ ರಾಜಕಾರಣವನ್ನು ನಾನು ಕಲಿಯಬೇಕಾಗಿಲ್ಲ. ಮಂಗಳೂರಿನಲ್ಲಿ ಅಲ್ಲಿಯ ಸಮಸ್ಯೆ ಬಗ್ಗೆ ಮಾತನಾಡಬೇಕೇ ವಿನಃ ಚನ್ನಪಟ್ಟಣ ಸಮಸ್ಯೆ ಬಗ್ಗೆ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಸಚಿವ ಸಿ ಪಿ ಯೋಗೇಶ್ವರ್‌ಗೆ ಹಿಗ್ಗಾ ಮುಗ್ಗಾ ತರಾಟೆಗೆ ಕ್ಷೇತ್ರದ ಶಾಸಕ ಹೆಚ್ಡಿ ಕುಮಾರಸ್ವಾಮಿ ತೆಗೆದುಕೊಂಡರು.


ಅವರು ಇಂದು ಶತಮಾನೋತ್ಸವ ಭವನದಲ್ಲಿ ಉದ್ಯೋಗ ಮೇಳ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು.


ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತದೆ. ಅವನು ಲಘುವಾಗಿ ಮಾತನಾಡಿದರೆ ನನಗೆ ಕ್ಷೇತ್ರದಲ್ಲಿ ಅನುಕಂಪ ಹೆಚ್ಚಾಗಿ ಮತದಾರರು ಹೆಚ್ಚಾಗುತ್ತಾರೆ. ಎಲೆಕ್ಷನ್ ಟೈಮಲ್ಲಿ ಇನ್ನೂರು ಮುನ್ನೂರು ರೂಪಾಯಿ ದುಡ್ಡು ಕೊಟ್ಟು ಗೆಲ್ಲೋದೆ ಎಲೆಕ್ಷನ್ ಎಂದು ಅವನು ತಿಳಿದಿದ್ದಾನೆ.

ದೇವೇಗೌಡರು ಇಗ್ಗಲೂರು ಡ್ಯಾಮ್ ಕಟ್ಟದೇ ಹೋಗಿದ್ದರೆ, ನೀರನ್ನು ಎಲ್ಲಿಂದ ತರುತ್ತಿದ್ದ?, ಡ್ಯಾಮ್ ಕಟ್ಟುವ ಸಂದರ್ಭದಲ್ಲಿ ಇವನು ಹುಟ್ಟಿದ್ದನೋ, ಇಲ್ಲವೋ ಗೊತ್ತಿಲ್ಲ, ಆದರೆ ಇಂದು ಆಧುನಿಕ ಭಗೀರಥ ಅಂತೆ ಇವನು. ಬೆಟ್ಟಿಂಗ್ ದಂಧೆ, ಇಸ್ವೀಟ್ ದಂಧೆಯಿಂದ ದುಡ್ಡು ತಂದು ನನ್ನ ಸರ್ಕಾರ ಬೀಳಿಸಿದರು. ಇಂತಹವನಿಂದ ಅಭಿವೃದ್ಧಿಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ ಎಂದು ಕಿಡಿಕಾರಿದರು.


ರಾಜಕೀಯಕ್ಕೆ ನೆನ್ನೆ ಮೊನ್ನೆ ಬಂದಿರುವ ಬಚ್ಚಾ ನೀನು, ನೀನು ಬರುವ ಮೊದಲೇ ನಾನು ಚನ್ನಪಟ್ಟಣ ಕ್ಷೇತ್ರದಲ್ಲಿ ಪರಿಚಿತನಾಗಿದ್ದೆ. ಈ ಕ್ಷೇತ್ರದ ಜನ ನಮಗೆ ಪ್ರೀತಿ ಕೊಟ್ಟಿದ್ದಾರೆ. ಹಾಗಾಗಿ ಇವನಿಗೆ ಕ್ಷೇತ್ರವು ಕೈ ಬಿಟ್ಟು ಹೋಗುವ ಭಯ ಕಾಡುತ್ತಿದೆ. ಹಾಗಾಗಿ ಮನಸ್ಸಿಗೆ ಬಂದಂತೆ ಏಕ ವಚನದಲ್ಲಿ ಮತ್ತು ಏರು ಧ್ವನಿಯಲ್ಲಿ ಮಾತನಾಡಿದ್ದಾನೆ ಎಂದರು.


ಹುಣಸೂರು ಕ್ಷೇತ್ರಕ್ಕೆ ಸೀರೆ ತೆಗೆದು ಕೊಂಡು ಹೋಗಿ ಉಗಿಸ್ಕೊಂಡು ಬಂದಿದ್ದಾನೆ. ಇವನ ಬಗ್ಗೆ ಅಲ್ಲೊಬ್ಬ (ಹೆಚ್.ವಿಶ್ವ ನಾಥ್) ಪುಂಖಾನು ಪುಂಖವಾಗಿ ದಾಖಲೆಗಳ ಸಮೇತ ಆರೋಪ ಮಾಡುತ್ತಿದ್ದಾನೆ. ನಾನು ಜನರ ಪ್ರೀತಿಯಿಂದ ಗೆದ್ದು ಬಂದವನು, ಇವನ ಹಾಗೆ ಹಿಂಬಾಗಿಲಿ ನಿಂದ ಬಂದು ಮಂತ್ರಿಯಾದವನಲ್ಲ, ಇವನಂತಹ ಮಂತ್ರಿಯನ್ನು ಅದೆಷ್ಟೋ ಮಂದಿಯನ್ನು ನಾನು ಮಾಡಿದ್ದೇನೆ  ಎಂದು ಹಂಗಿಸಿದರು.


*ಇಂದು ೩೦೦ ಜನರಿಗೆ ಉದ್ಯೋಗ*

ಶತಮಾನೋತ್ಸವ ಭವನದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉದ್ಘಾಟನೆ ಮಾಡಿ ಮಾತನಾಡಿದ ಹೆಚ್ಡಿಕೆ ಮೊದಲಿಗೆ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದ ಐದುನೂರಕ್ಕೂ ಹೆಚ್ಚು  ಉದ್ಯೋಗಾಂಕ್ಷಿಗಳಲ್ಲಿ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರಿದರು.

ಇಂದು ಕಂಪನಿಯವರು ಮತ್ತು ಏಜೆನ್ಸಿಗಳು ಉದ್ಯೋಗ ಮೇಳ ನಡೆಸುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಉದ್ಯೋಗಕ್ಕಾಗಿ ನನ್ನ ಮನೆಯ ಬಳಿ ಬರುವ ಆಕಾಂಕ್ಷಿಗಳನ್ನು ನೋಡಿ ಅನುಭವ ಹೊಂದಿದ್ದೇನೆ ಎಂದರು.

ಉದ್ಯೋಗ ಕೊಡಿಸುವುದಾಗಿ ಕೆಲವು ಮಧ್ಯವರ್ತಿಗಳು ಹಣ ಕೀಳುತ್ತಿದ್ದು, ಕೆಲಸ ವನ್ನು ಕೊಡಿಸದೆ ಮೋಸ ಮಾಡುವವರಿಂದ ದೂರವಿರಿ. ಆನ್ಲೈನ್ ಮೂಲಕ ಬರುವ ಜಾಹೀರಾತನ್ನು ನಂಬಿ ಹಣ ಹೂಡಬೇಡಿ ಎಂದು ಕಿವಿಮಾತು ಹೇಳಿದರು.


ಹುಬ್ಬಳ್ಳಿ ಧಾರವಾಡದಂತೆ ರಾಮನಗರ ಚನ್ನಪಟ್ಟಣ ಅವಳಿ ನಗರ ಮಾಡಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದರು.

ಹೊರಜಿಲ್ಲೆ ಮತ್ತು ಹೊರ ರಾಜ್ಯದಿಂದ ಬರುವ ರೈತರಿಗೆ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸೌಲಭ್ಯಗಳಿಲ್ಲ. ಅದನ್ನು ಹೈಟೆಕ್ ಮಾಡಿ ನಬಾರ್ಡನಿಂದ ೩೦ ಕೋಟಿ ಹಣ ಬಿಡುಗಡೆ ಮಾಡಿಸಲು ಹೋದರೆ ಅದರಲ್ಲೂ ರಾಜಕೀಯ ಮಾಡುತ್ತಾರೆ. ಇಡೀ ರಾಮನಗರ ಜಿಲ್ಲೆಯಿಂದಲೇ ನನ್ನನ್ನು ಎತ್ತಂಗಡಿ ಮಾಡಿಸಲು ಕಾದು ಕುಳಿತಿದ್ದಾರೆ ಎಂದು ಆರೋಪಿಸಿದರು.


 ಇಂದು ಇಲ್ಲಿ ಮುನ್ನೂರು ಮಂದಿಗೆ ಉದ್ಯೋಗ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಂಪನಿಗಳನ್ನು ಕರೆತಂದು, ೧೫೦೦ ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಲು ಯೋಜಿಸಲಾಗುವುದು ಎಂದು ಆಯೋಜಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಾಗೇಶ್, ಪೌರಾಯುಕ್ತ ಶಿವನಾಂಕಾರಿಗೌಡ,  ಬಿಇಓ ನಾಗರಾಜು, ಪುಟ್ಟಲಿಂಗಯ್ಯ, ಜಯಮುತ್ತು, ರಾಂಪುರ ರಾಜಣ್ಣ ಸೇರಿದಂತೆ ಹಲವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑