ಕ್ರೀಡೆ ಮೈಮನಸ್ಸನ್ನು ಸದೃಢಗೊಳಿಸುತ್ತದೆ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್.
ನಮ್ಮ ಕೆಲಸದ ಒತ್ತಡದ ನಡುವೆ, ಕ್ರೀಡೆ ನಮ್ಮ ಮೈಮನಕ್ಕೆ ಉತ್ಸಾಹ ಒದಗಿ ಸಬಲ್ಲದು. ದಿನನಿತ್ಯದ ಜಂಜಾಟಗಳಲ್ಲಿ ಬಳಲುವ ನಾವು ಕನಿಷ್ಠ ತಿಂಗಳಿಗೆ ಎರಡು ಬಾರಿಯಾದರೂ ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ, ರೋಗ ರುಜಿನಗಳು ಬರದಂತೆ ತಡೆದು ಉಲ್ಲಸಿತರಾಗಿರಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ ಅವರು ಅಭಿಪ್ರಾಯ ಪಟ್ಟರು.
ಅವರು ಇಂದು ಇಲ್ಲಿನ ಜಿಲ್ಲಾ ಪೊಲೀಸ್ ಶಸಸ್ತ್ರ ಮೀಸಲು ಪಡೆ ಮೈದಾನ ದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೦೨೦ರ ವಾರ್ಷಿಕ ಕ್ರೀಡಾ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ಕೋವಿಡ್ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗವಾಗಿ ಹರಡಿದ್ದು, ಇದನ್ನು ನಿಯಂತ್ರಣಕ್ಕೆ ತರಲು ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಾಗಿರುವುದಿಲ್ಲ. ಪೊಲೀಸ್ ಇಲಾಖೆ ಸೇರಿ ದಂತೆ ಸರ್ಕಾರದ ಇನ್ನಿತರ ಇಲಾಖೆಗಳು ಒಗ್ಗೂಡಿ, ಕೆಲಸ ಮಾಡಿದ್ದರಿಂದಲೇ ಕೋವಿಡ್ನಂತಹ ಸಾಂಕ್ರಾಮಿಕ ರೋಗವನ್ನು ತಹ ಬಂದಿಗೆ ತರಲು ಸಾಧ್ಯವಾಯಿತು. ಆರೋಗ್ಯ ಇಲಾಖೆಯ ಜೊತೆ ಅತಿ ಹೆಚ್ಚು ಕೈ ಜೋಡಿಸಿದ ಇಲಾಖೆಯೆಂದರೆ ಅದು ಪೊಲೀಸ್ ಇಲಾಖೆ. ಇಂತಹವರಿಗೆ ಅವರ ಕ್ರೀಡಾ ಮನೋಭಾವವು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ ಎಂದರು.
ಸರ್ಕಾರದ ಇಚ್ಛೆಯನುಸಾರ ಪೊಲೀಸರು, ಜನ ಸ್ನೇಹಿಯಾಗಿ ರೂಪುಗೊಂಡಿದ್ದಾರೆ. ಇನ್ನು ಮುಂದೆಯೂ ಸಹ ಪೊಲೀಸರು, ಜನಸ್ನೇಹಿಯಾಗಿಯೇ ಮುಂದುವರಿಯುತ್ತಾರೆ. ಅವರ ಜವಾಬ್ದಾರಿ ವಿಸ್ತಾರವಾಗಿ ಹಬ್ಬುತ್ತಿದೆ. ಇಂತಹ ಒತ್ತಡದ ಕೆಲಸ ನಿರ್ವಹಿಸುವ ಪೊಲೀಸರಿಗೆ ಇಂತಹ ಕ್ರೀಡಾ ಕೂಟಗಳು ಅತ್ಯವಶ್ಯವಾಗಿವೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್ ಅವರು ಉದ್ಘಾಟಿಸಿ, ಸ್ವಾಗತಿಸಿದರು. ಕ್ರೀಡಾ ಕೂಟದಲ್ಲಿ ಮೊದಲಿಗೆ, ವೇದಿಕೆಯ ಗಣ್ಯರಿಗೆ ಪೊಲೀಸರಿಂದ ಪಥಸಂಚಲನ ನಡೆಸಿ, ಗೌರವ ರಕ್ಷೆ ನೀಡಲಾಯಿತು. ನಂತರ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಲಾಯಿತು.
ಇದೇ ಸಮಯದಲ್ಲಿ ಕ್ರೀಡಾ ಪಟುಗಳಿಗೆ ವಚನ ಬೋಧಿಸಲಾಯಿತು. ಕ್ರೀಡಾ ಕೂಟದಲ್ಲಿ ಮಹಿಳೆಯರ ಒಂದು ತಂಡ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಪುರುಷ ಮತ್ತು ಮಹಿಳೆಯರಿಗೆ ೧೦೦ ಮೀಟರ್ ಓಟ, ೪೦೦ಘಿ ೧೦೦ ರಿಲೇ ಓಟ, ಹಗ್ಗಜಗ್ಗಾಟ, ತಂಡಗಳ ಪಥ ಸಂಚಲನ, ಜರುಗಿತು.
ಕಾರ್ಯಕ್ರಮದಲ್ಲಿ ಚನ್ನಪಟ್ಟಣ, ಕನಕಪುರ ಉಪ ಪೊಲೀಸ್ ಅಧೀಕ್ಷಕ ಕೆ.ಎನ್ ರಮೇಶ್ ನಿರೂಪಣೆ ಮಾಡಿದರು. ಮಾಗಡಿ ಡಿವೈಎಸ್ಪಿ ಓಂಪ್ರಕಾಶ್, ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ಎಲ್ಲಾ ಠಾಣೆಗಳ ವೃತ್ತ ನಿರೀಕ್ಷಕರುಗಳು, ಉಪನಿರೀಕ್ಷಕರುಗಳು ಮತ್ತು ಸಿಬ್ಬಂದಿಗಳು ಹಾಗೂ ಚನ್ನಪಟ್ಟಣ ನಗರಸಭೆಯ ಪೌರಾಯುಕ್ತ ಶಿವನಾಂಕಾರಿಗೌಡ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು