ಅಂತರರಾಷ್ಟ್ರೀಯ ಮಟ್ಟದ ಉದ್ಯಮಕ್ಕೆ ನಗರದ ಅಂಚೆ ಕಛೇರಿಯಲ್ಲಿ ಪಾರ್ಸೆಲ್ ಕೇಂದ್ರ ಉದ್ಘಾಟನೆ
ಅಂಚೆ ಇಲಾಖೆಯು ಈ ಮೊದಲು ಕೇವಲ ಅಂಚೆ ಪತ್ರಗಳನ್ನು ಮಾತ್ರ ವಿತರಿಸುತ್ತಿತ್ತು. ಬದಲಾವಣೆಯ ಪರ್ವದಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ಇಲಾಖೆಯೂ ಸಹ ಹಲವು ಸೇವೆಗಳನ್ನು ಒದಗಿಸುತ್ತಲಿದೆ. ಈ ಸಂಬಂಧ ಚನ್ನಪಟ್ಟಣ ಅಂಚೆ ಕಛೇರಿಯಲ್ಲಿ ಇಂದು ಅಂತರರಾಷ್ಟ್ರೀಯ ಮಟ್ಟದ ಹಲವಾರು ರೀತಿಯ ಜನಪಯೋಗಿ ಪಾರ್ಸೆಲ್ಗಳನ್ನು ಬುಕ್ಕಿಂಗ್ ಮಾಡುವ ಕೇಂದ್ರವನ್ನು ತೆರೆದಿದ್ದೇವೆ. ಈ ನಗರವು ಬೊಂಬೆಗಳಿಗೆ ಪ್ರಸಿದ್ದಿಯಾಗಿದ್ದು, ಹಲವಾರು ಬೊಂಬೆ ತಯಾರಕರು ಹಾಗೂ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ರಾಮನಗರ ಜಿಲ್ಲೆಯಲ್ಲಿ ಪ್ರಥಮ ಆದ್ಯತೆಯನ್ನು ಈ ನಗರದ ಅಂಚೆ ಕಛೇರಿಗೆ ನೀಡಲಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಸೆಕ್ರೇಟರಿ ಪ್ರದೀಪ್ತ ಕುಮಾರ್ ಬಿಸಾಯ್ ಅವರು ತಿಳಿಸಿದರು.
ಅವರು ಇಂದು ನಗರದ ಅಂಚೆ ಕಛೇರಿಯ ಆವರಣದಲ್ಲಿ ಭಾರತೀಯ ಅಂಚೆ ಮೂಲಕ ಅಂತರರಾಷ್ಟ್ರೀಯ ಪಾರ್ಸೆಲ್ಗಳ ಬುಕ್ಕಿಂಗ್ ಕೇಂದ್ರವನ್ನು ಉದ್ಘಾಟಿಸಿ, ಮಾತನಾಡಿದರು.
ಕರ್ನಾಟಕ ಕೇಂದ್ರ ಅಂಚೆಯ ಮುಖ್ಯ ಕಾರ್ಯದರ್ಶಿಯಾದ ಶಾರದಾ ಸಂಪತ್ ಅವರು ಮಾತನಾಡಿ, ಅಂಚೆ ಇಲಾಖೆಯಲ್ಲಿ ಭಾರತೀಯ ಅಂಚೆ ಮುಖ್ಯವಾಗಿ ಲಾಜಿಸ್ಟಿಕ್ಸ್ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಅಂಚೆ ಕಛೇರಿಯು ಬೃಹತ್ ವ್ಯಾಪಾರಿಗಳ ಗ್ರಾಹಕರಿಗಾಗಿ ತುರ್ತಾಗಿ ತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಸಣ್ಣ ವ್ಯಾಪಾರಿಗಳಿಗೆ ರಫ್ತುದಾರರ ಸಹಯೋಗದೊಂದಿಗೆ ಕೊಳ್ಳಲು ಹಾಗು ಕೊಡಲು ಅನುಕೂಲವಾಗುವಂತೆ ಕೆಲವು ಕಾರ್ಯವಿಧಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸ್ಥಳೀಯ ವ್ಯಾಪಾರಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ಬೆಂಗಳೂರಿನ ಅಂಚೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಶುಯೇಲಿ ಬರ್ಮನ್ ಮಾತನಾಡಿ, ಅಂಚೆ ಕಛೇರಿ ಸಿಬ್ಬಂದಿಯು ಗ್ರಾಹಕರಿಗೆ ವಿಳಾಸ, ಪ್ಯಾಕೇಜಿಂಗ್, ನಿಷೇಧ ಮತ್ತು ಅಂತರಾಷ್ಟ್ರೀಯ ಮಿಂಚಂಚೆಗೆ ಸಂಬಂಧಿಸಿದ ನಿರ್ಬಂಧಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ವ್ಯಾಪಾರ ಸುಂಕದ ಪರವಾನಗಿಯನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆಕಛೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಎಂದರು.
ಅಂತರರಾಷ್ಟ್ರೀಯ ಅಂಚೆ ವಹಿವಾಟು ಮತ್ತು ಪಾರ್ಸೆಲ್ ಬುಕ್ಕಿಂಗ್ ವಿಚಾರಣೆ ಮತ್ತು ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗೆ 080-26600590 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ರಾಮನಗರ ಕೈಗಾರಿಕಾ ಅಂಚೆ ಇಲಾಖೆಯ ಜಂಟಿ ನಿರ್ದೇಶಕ ಎಲ್.ನಾಗರಾಜು ಹಾಗೂ ಚನ್ನಪಟ್ಟಣ ಅಂಚೆ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.
ಈ ಸಂದರ್ಭದಲ್ಲಿ ಅಂಬಾಡಹಳ್ಳಿ ಪೋಸ್ಟ್ ಮಾಸ್ಟರ್ ಹೆಚ್.ಎಸ್ ಮಂಜುರವರು, ಎಲ್ಲಾ ವಿಭಾಗಗಳಲ್ಲೂ ಹೆಚ್ಚಿನ ಸೇವೆ ಸಲ್ಲಿಸಿರುವುದರಿಂದ 5 ಸ್ಟಾರ್ ಆವಾರ್ಡ್ ಅನ್ನು ನೀಡಿ ಗೌರವವಿಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು