ದಿನೇದಿನೇ ಹೆಚ್ಚುತ್ತಿರುವ ಕೊರೊನಾ; ರಸ್ತೆಗಿಳಿದು ಜಾಗೃತಿ ಮೂಡಿಸಿ ದಂಡ ವಸೂಲಿಗಿಳಿದ ತಾಲ್ಲೂಕು ಆಡಳಿತ
ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ, ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸದಿರುವುದರಿಂದ, ತಾಲ್ಲೂಕು ಆಡಳಿತವು ನೆನ್ನೆ ನಗರ ಹಾಗೂ ಗ್ರಾಮೀಣ ಭಾಗಕ್ಕೆ ತೆರಳಿ ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು ಹಾಗೂ ವ್ಯಾಪಾರ ಸ್ಥಳಗಳಿಗೆ ಭೇಟಿ ನೀಡಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದರು.
ಕೊರೊನಾದ ಎರಡನೆಯ ಅಲೆಯು ಶೇ 25 ಅನುಪಾತದಲ್ಲಿ ಏರಿಕೆಯಾಗಿದ್ದು, ಸಾರ್ವಜನಿಕರು ಕೊರೊನಾ ಮಾರ್ಗಸೂಚಿಗಳನ್ನು ಉದಾಸೀನ ಮಾಡುತ್ತಿರುವುದರಿಂದ ಮತ್ತಷ್ಟು ಏರಿಕೆಯಾಗುತ್ತಿದೆ. ಆದ್ದರಿಂದ ಸ್ವತಃ ನಾವೇ ಖುದ್ದು ರಸ್ತೆಗಿಳಿದು ಎಲ್ಲಾ ವಾಹನಗಳನ್ನು ತಪಾಸಿಸಿ, ಮಾಸ್ಕ್ ಹಾಕದವರಿಗೆ ಜಾಗೃತಿ ಮೂಡಿಸಿ, ದಂಡ ವಿಧಿಸುತ್ತಿರುವುದಾಗಿ ತಾಲ್ಲೂಕು ದಂಡಾಧಿಕಾರಿ ನಾಗೇಶ್ ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸದಿರುವುದರಿಂದ ಸದರಿ ವ್ಯಾಪಾರ ಸ್ಥಳಗಳಲ್ಲಿ ಹೆಚ್ಚು ಜನ ಕೂಡುವುದರಿಂದ ಕೊರೊನಾವು ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಹಾಗಾಗಿ ತಾಲ್ಲೂಕು ಆಡಳಿತದ ಜೊತೆ ನಗರಸಭಾ ಸಿಬ್ಬಂದಿಯು ಜೊತೆಗೂಡಿ, ಜಾಗೃತಿ ಮೂಡಿಸಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ ಎಂದು ನಗರಸಭಾ ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.
ಗ್ರಾಮಾಂತರ ವೃತ್ತ ನಿರೀಕ್ಷಕ ಶಿವಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಗುಂಪು ಗೂಡುವುದು ಹೆಚ್ಚಾಗಿದೆ, ಅಂಗಡಿ ಹೋಟೆಲ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನಸಂದಣಿ ಇದೆ, ಯಾರೂ ಸಹ ಕೊರೊನಾ ಮಹಾಮಾರಿಯ ಬಗ್ಗೆ ಅರಿವು ಮಾಡಿಕೊಳ್ಳದೆ, ಉದಾಸೀನ ಮಾಡುತ್ತಿದ್ದಾರೆ. ಕೊರೊನಾದ ಬಗ್ಗೆ ಸ್ಪಷ್ಟವಾಗಿ ಜಾಗೃತಿ ಮೂಡಿಸುವ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಸೋಂಕಿನ ಅರಿವು ಮೂಡಿಸುವ ಸಲುವಾಗಿ ಮಾಸ್ಕ್ ಧರಿಸದ, ಗ್ರಾಮೀಣ ಜನರಿಗೆ ದಂಡ ವಿಧಿಸಲಾಗುತ್ತಿದೆ. ಇಂದು ಅಕ್ಕೂರು, ಕೋಡಂಬಹಳ್ಳಿ ಮತ್ತು ಇಗ್ಗಲೂರು ಗ್ರಾಮಗಳಲ್ಲಿ ಜಾಗೃತಿ ಮತ್ತು ದಂಡ ವಿಧಿಸುವ ಪ್ರಕ್ರಿಯೆಯನ್ನು ತಾಲ್ಲೂಕು ಆಡಳಿತದ ಜೊತೆಗೂಡಿ ನಿರ್ವಹಿಸುತ್ತಿದ್ದೇವೆ ಎಂದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ, ನಗರಸಭೆಯ ಸಿಬ್ಬಂದಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು