ಕೊರೊನಾ ಸೋಂಕಿತ ಸಂಪರ್ಕಿತರನ್ನು ಪತ್ತೆ ಹಚ್ಚಲು ನಗರದ 31 ವಾರ್ಡ್ ಗಳಿಗೆ ತಲಾ 4 ಮಂದಿ ತಂಡ ರಚನೆ ಪೌರಾಯುಕ್ತ
ತಾಲ್ಲೂಕಿನ ಕೊರೊನಾ ಸೋಂಕಿತರನ್ನು ಗಮನಿಸಿದಾಗ ನಗರದಲ್ಲಿ, ಹೆಚ್ಚು ಮಂದಿ ಕೊರೊನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಮಾವಿನ ಹಣ್ಣಿನ ಕಾಲವಾದ್ದರಿಂದ ನಗರ ಪ್ರದೇಶದ ಒಳಗಿರುವ ಎಪಿಎಂಸಿಯಲ್ಲಿ ಹೊರ ರಾಜ್ಯದ ವ್ಯಾಪಾರಸ್ಥರು ಬರುತ್ತಿರುವ ಕಾರಣ ಜೊತೆಗೆ ನಗರಸಭಾ ಚುನಾವಣಾ ಪ್ರಚಾರದಲ್ಲಿ, ಸರ್ಕಾರದ ಮಾರ್ಗಸೂಚಿ ಇದ್ದರೂ ಸಹ ಹೆಚ್ಚು ಜನರು ಗುಂಪು ಗೂಡಿ ಪ್ರಚಾರ ನಡೆಸುತ್ತಿರುವುದರಿಂದ ಸೋಂಕು ಹೆಚ್ಚುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಾಲ್ಕು ಜನರ ಒಂದು ತಂಡವನ್ನು ರಚಿಸಲಾಗಿದೆ ಎಂದು ನಗರಸಭಾ ಪೌರಾಯುಕ್ತ ಶಿವನಂಕಾರಿಗೌಡ ತಿಳಿಸಿದರು.
ಅವರು ಇಂದು ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಿಕೆಗೆ ಮಾಹಿತಿ ನೀಡಿದರು.
ನಗರದಾದ್ಯಂತ ಇರುವ 31 ವಾರ್ಡ್ಗಳಲ್ಲಿಯೂ ಸಹ ತಲಾ ನಾಲ್ಕು ಮಂದಿಯ ತಂಡವನ್ನು ರಚಿಸಲಾಗಿದೆ. ತಂಡದಲ್ಲಿ ಇಬ್ಬರು ಶಿಕ್ಷಕರು, ಓರ್ವ ಅಂಗನವಾಡಿ ಕಾರ್ಯಕರ್ತೆ, ಮತ್ತೋರ್ವ ಆಶಾ ಕಾರ್ಯಕರ್ತೆಯರು ಇರುತ್ತಾರೆ. ಇವರು ಕೊರೊನಾ ಸೋಂಕಿತರು ಪತ್ತೆಯಾದ ನಂತರ, ಸೋಂಕಿತರ ಸಂಪರ್ಕಕ್ಕೆ ಬಂದಿರುವ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ಅವರ ಮಾಹಿತಿಯನ್ನು ಆ್ಯಪ್ನಲ್ಲಿ ದಾಖಲಿಸಿ, ಅವರನ್ನು ಮನವೊಲಿಸಿ, ಹೋಂ ಕ್ವಾರಂಟೈನ್ ಮಾಡುವ ಕೆಲಸವನ್ನು ವಹಿಸಲಾಗಿದೆ.
ಇದಲ್ಲದೆ, 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು, ಕೋವಿಡ್ ನಿಯಮ ಉಲ್ಲಂಘಿಸಿದರೆ, ಸಂಬಂಧಿಸಿದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ, ಅಂತಹವರ ಮೇಲೆ ಕ್ರಮಗೊಳ್ಳಲು ಈ ಒಂದು ತರಬೇತಿಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
*ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ತರಬೇತಿಯಲ್ಲಿ ಯೇ ಸಾಮಾಜಿಕ ಅಂತರ ಕಣ್ಮರೆಯಾಗಿದ್ದು ದುರಂತ. ಇಂದಿನ ಪರಿಸ್ಥಿತಿಗೆ 50 ಜನ ಕೂರುವ ಸಭಾಂಗಣದಲ್ಲಿ 150 ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಹಾಗೂ ತರಬೇತುದಾರರು ಇದ್ದರು. ಬಹುತೇಕ ಮಂದಿ ಮಾಸ್ಕ್ ಧರಿಸಿದ್ದರೂ ಸಹ ಮೂಗು ಮತ್ತು ಬಾಯಿಯ ಕೆಳಗೆ ಧರಿಸಿದ್ದು ಕಂಡು ಬಂತು. ಅಧಿಕಾರಿ ವರ್ಗ ಇಂತಹ ಸಭೆಯನ್ನು ನಡೆಸುವಾಗ, ಕಟ್ಟುನಿಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸದಿರುವುದು ದುರದೃಷ್ಟಕರ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು