ಮಗಳ ಜನ್ಮ ದಿನಾಚರಣೆಯ ಅಂಗವಾಗಿ ಮಾಸ್ಕ್ ಹಾಗೂ ಸೋಪ್ ವಿತರಣೆ
ರಾಮನಗರ : ಸಾರ್ವಜನಿಕರು ಮಾಸ್ಕ್ ಧರಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಂ. ಶಿವನಂಜಯ್ಯ ತಿಳಿಸಿದರು.
ಸಂಶೋಧಕ ಎಸ್. ರುದ್ರೇಶ್ವರ ಹಾಗೂ ಶಿಕ್ಷಕಿ ಡಿ.ಆರ್. ನೀಲಾಂಬಿಕಾ ದಂಪತಿ ತಮ್ಮ ಮಗಳಾದ ಆರ್. ಯಶಿಕಾ ಜನುಮ ದಿನದ ಅಂಗವಾಗಿ ತಾಲ್ಲೂಕಿನ ಕೂಟಗಲ್ ಬಳಿಯ ಇರುಳಿಗರ ಕಾಲೋನಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಮಾಸ್ಕ್ ಹಾಗೂ ಸೋಪ್ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಅವರಿಗೆ ಸಹಕಾರ ನೀಡಿದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತದೆ. ಜನರು ಜಾಗೃತರಾಗಬೇಕು ಎಂದು ಅವರು ಹೇಳಿದರು.
ಜನರು ದೃತಿಗೆಡದೆ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿದರೆ ಕೋವಿಡ್ ಅನ್ನು ಹತೋಟಿಯಲ್ಲಿಡಬಹುದು. ಕೊರೊನಾ ಪಾಸಿಟಿವ್ ಬಂದರೆ ಯಾರೊಬ್ಬರೂ ಧೈರ್ಯಗೆಡಬೇಡಿ. ನೀವು ಆತ್ಮಸ್ಥೈರ್ಯದಿಂದ ಇದ್ದರೆ ಶೇ 50 ರಷ್ಟು ಕರೊನಾ ತನ್ನಿಂದ ತಾನೇ ನಿವಾರಣೆಯಾಗುತ್ತದೆ. ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ತಿಳಿಸಿದರು.
ಇರುಳಿಗ ಸಮುದಾಯದ ಮುಖಂಡ ಎಸ್. ರಾಜು ಮಾತನಾಡಿ ಸಂಶೋಧಕ ಎಸ್. ರುದ್ರೇಶ್ವರ ಹಲವು ವರ್ಷಗಳಿಂದಲೂ ನಿರ್ಲಕ್ಷಿತ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ತಮ್ಮ ಮಗಳ ಜನ್ಮ ದಿನದ ಅಂಗವಾಗಿ ಇರುಳಿಗ ಸಮುದಾಯದ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ಹಾಗೂ ಸೋಪ್ ವಿತರಣೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕೂಟಗಲ್ ಬಳಿ 30 ಕ್ಕೂ ಹೆಚ್ಚು ಇರುಳಿಗ ಕುಟುಂಬಗಳು ಈಗಲೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಚುನಾಯಿತ ಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಬಂದು ಭರವಸೆ ನೀಡುತ್ತಾರೆಯೆ ಹೊರೆತು ಇವರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಹ ಇರುಳಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ನಿವೃತ್ತ ಪ್ರಾಂಶುಪಾಲರಾದ ಬಿ.ಎಲ್. ಸರೋಜಮ್ಮ, ಅಮೃತ ವಿಕಲಚೇತನ ಟ್ರಸ್ಟಿನ ಕಾರ್ಯದರ್ಶಿ ಟಿ. ರಮೇಶ್, ಇರುಳಿಗ ಸಮುದಾಯದ ಮುಖಂಡ ಡಾ.ಕೆ.ವಿ. ಕೃಷ್ಣಮೂರ್ತಿ ಇದ್ದರು.
ಪ್ರತಿಕ್ರಿಯೆಗಳು