ಅನ್ನದಾಸೋಹಕ್ಕೆ ಆದ್ಯತೆ ನೀಡಿ, ನಿರಾಶ್ರಿತರ ಹೊಟ್ಟೆ ತುಂಬಿಸುತ್ತಿರುವ ಸಿ ಪಿ ಯೋಗೇಶ್ವರ್
ಸಂಕಷ್ಟ ಸಮಯ, ಬಿಜೆಪಿ ಸಹಾಯ ಎಂಬ ಉದ್ಘೋಷದೊಂದಿಗೆ ನಗರದಲ್ಲಿ ಹಮ್ಮಿಕೊಂಡಿರುವ ಅನ್ನದಾಸೋಹವನ್ನು ಸಚಿವ ಸಿ ಪಿ ಯೋಗೇಶ್ವರ್ ರವರು ಖುದ್ದು ನಿಂತು, ಆಸ್ಥೆವಹಿಸಿ ಮಾಡುತ್ತಿದ್ದಾರೆ.
ಇತ್ತೀಚೆಗೆ ನಗರದ ಸಾತನೂರು ರಸ್ತೆಯಲ್ಲಿರುವ ಎಲ್ ಎನ್ ಕಲ್ಯಾಣ ಮಂಟಪದಲ್ಲಿ ಅನ್ನದಾಸೋಹಕ್ಕೆ ಚಾಲನೆ ನೀಡಿದ್ದು, ನಂತರವೂ ಸಹ ಬಂದು, ವೀಕ್ಷಿಸಿ ಸಲಹೆ ಸೂಚನೆ ಕೊಟ್ಟು ಹೋಗುತ್ತಿರುವುದು ಅವರ ಬಡವರ ಬಗೆಗಿನ ಕಾಳಜಿ ತೋರಿಸುತ್ತಿದೆ.
ಶನಿವಾರ ಮತ್ತು ಭಾನುವಾರ ಎರಡು ದಿನವೂ ಸಹ ಅವರು ಅಡುಗೆ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿ,ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸುವುದರ ಜೊತೆಗೆ, ಪ್ರತಿನಿತ್ಯದ ಅಡುಗೆಗೆ ಬೇಕಾದ ವಸ್ತುಗಳ ಬಗ್ಗೆ ವಿಚಾರಿಸಿ, ಯಾವುದು ಕೊರತೆಯಾಗದಂತೆ ನೋಡಿಕೊಳ್ಳಬೇಕು.ಕೊರೊನಾ ಸಮಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬುದೇ ಉದ್ದೇಶವಾಗಿದೆ ಎಂಬುದು ಅವರ ಬೆಂಬಲಿಗರ ಮಾತಾಗಿದೆ.
ಕೊರೊನಾ ಎಂಬ ಮಹಾಮಾರಿ ಎಂಬ ರೋಗವು ಜಗತ್ತಿನಾದ್ಯಂತ ಹರಡಿದೆ. ಅದೇ ರೀತಿ ನಮ್ಮ ಚನ್ನಪಟ್ಟಣ ತಾಲ್ಲೂಕಿನಲ್ಲಿಯೂ ಹರಡಿದೆ. ಕೊರೊನಾ ಸೋಂಕನ್ನು ಶಾಶ್ವತವಾಗಿ ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿವೆ. ರಾಜ್ಯ ಸರ್ಕಾರವು ಲಾಕ್ಡೌನ್ ಘೋಷಿಸಿರುವುದರಿಂದ,ಬಡತನ ರೇಖೆಗಿಂತ ಕೆಳಗಿರುವವರು, ಭಿಕ್ಷುಕರು, ನಿರಾಶ್ರಿತರು ಮತ್ತು ವಲಸಿಗರು ಯಾವುದೇ ಕಾರಣಕ್ಕೂ ಹಸಿವಿನಿಂದ ಬಳಲಬಾರದು ಎಂಬುದೇ ಅವರ ಕಾಳಜಿಯಾಗಿದೆ ಎಂದು ಅವರ ಅಭಿಮಾನಿಗಳ ಅನಿಸಿಕೆಯಾಗಿದೆ.
ಕಳೆದ ವರ್ಷದ ಲಾಕ್ಡೌನ್ ನಲ್ಲಿ ಇಣುಕಿ ನೋಡದ ಸಿ ಪಿ ಯೋಗೇಶ್ವರ್ ರವರು ಈ ಬಾರಿಯ ಲಾಕ್ಡೌನ್ ನಲ್ಲಿ ಮಾತ್ರ ಬಡವರ ಹಸಿವು ನೀಗಿಸಲು ನಿಂತಿರುವುದು ಆಶ್ಚರ್ಯಕರವಾದರೂ ಸತ್ಯವಾಗಿದೆ. ಕಳೆದ ಲಾಕ್ಡೌನ್ ನ ಸಂದರ್ಭದಲ್ಲಿ ಕುಮಾರಸ್ವಾಮಿ ಯವರು ನಗರದ ಬಡವರ ಪಾಲಿಗೆ ದೈವವಾಗಿದ್ದರು. ಆದರೆ ಈ ಬಾರಿ ಅವರು ಛಾನ್ಸ್ ತೆಗೆದುಕೊಳ್ಳುವ ಮುಂಚೆಯೇ ಯೋಗೇಶ್ವರ್ ಮುನ್ನುಗ್ಗಿರುವುದರಲ್ಲಿ ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯ ಜೊತೆಗೆ ವಿಧಾನಸಭೆ ಚುನಾವಣೆ ಗಿಮಿಕ್ ಇದೆ ಎಂಬುದು ಅವರ ವಿರೋಧಿ ಬಣ ಮತ್ತು ಪಕ್ಷಗಳ ಅಂಬೋಣಾ.
ರಾಜಕೀಯ ಮೇಲಾಟ ಏನೇ ಇರಲಿ, ಹಸಿದವರಿಗೆ ಅನ್ನ ಹಾಕುವ ಈ ಕೈಂಕರ್ಯಕ್ಕೆ ಅದರಲ್ಲೂ ಲಾಕ್ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗೆ ಅನ್ನ ಹಾಕುವ ಕೈಗೆ ಎಲ್ಲರೂ ಸಾಥ್ ನೀಡಬೇಕಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು