ಗೊಂದಲದ ಗೂಡಾದ ವೀಕೆಂಡ್ ಕರ್ಫ್ಯೂ, ತಾಲ್ಲೂಕು ಆಡಳಿತಕ್ಕಿಲ್ಲಾ ಮಾಹಿತಿ !? ಅನಗತ್ಯ ಓಡಾಟ ಬಿಟ್ಟು ಎಲ್ಲವೂ ಯಥಾಸ್ಥಿತಿ ಡಿ ಸಿ ಹೇಳಿಕೆ
ತಾಲ್ಲೂಕಿನ ನಾಲ್ಕು ಸ್ಥಂಭಗಳೆನಿಸಿಕೊಂಡ ತಹಶಿಲ್ದಾರ್, ಉಪ ಪೋಲಿಸ್ ಅಧೀಕ್ಷಕ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಗರಸಭೆ ಪೌರಾಯುಕ್ತ ಯಾರಿಗೂ ಸಹ ರಾತ್ರಿ ಒಂಭತ್ತು ಗಂಟೆಯಾದರೂ ವಾರಾಂತ್ಯ ನಿಷೇಧಾಜ್ಞೆ ಬಗ್ಗೆ ಮಾಹಿತಿ ಇಲ್ಲದಿರುವುದು ತಾಲ್ಲೂಕಿನ ನಾಗರೀಕರು ಮತ್ತು ವ್ಯಾಪಾರಸ್ಥರಿಗೆ ನಿಷೇಧಾಜ್ಞೆ ಬಗ್ಗೆ ಗೊಂದಲದ ಗೂಡಾಗಿದೆ.
ತಹಶಿಲ್ದಾರ್ ನಾಗೇಶ್, ಡಿವೈಎಸ್ಪಿ ರಮೇಶ್, ಇಓ ಚಂದ್ರ ಮತ್ತು ಕಮೀಷನರ್ ಶಿವನಂಕಾರಿಗೌಡ ರಿಗೆ ಕರೆ ಮಾಡಿ ವಿಚಾರಿಸಿದಾಗಲೆಲ್ಲಾ ನಮಗೂ ಯಾವುದೇ ಮಾಹಿತಿ ಇಲ್ಲ. ಕೇಳಿ ತಿಳಿಸುತ್ತೇವೆ ಎಂದು ಹೇಳುತ್ತಾರೆಯೇ ವಿನಹ ಸ್ಪಷ್ಟ ಮಾಹಿತಿ ಹೇಳದಿರುವುದರಿಂದ, ತಾಲ್ಲೂಕಿನ ಎಲ್ಲಾ ವರ್ಗದವರೂ ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ ನಡೆಸುತ್ತಿದ್ದು, ಬೆಳಿಗ್ಗೆ ಏನು ಮಾಡಬೇಕು, ಪೋಲೀಸರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದರ ಬಗ್ಗೆ ಜಿಜ್ಞಾಸೆ ಗೆ ಬಿದ್ದಿದ್ದಾರೆ.
ಶುಕ್ರವಾರ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಿಗ್ಗೆ ಐದು ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂಬ ಸರ್ಕಾರದ ಮಾಹಿತಿ ಬಿಟ್ಟರೆ, ಯಾವರೀತಿ ಜಾರಿಯಲ್ಲಿರುತ್ತದೆ ಎಂಬ ವಿವರ ಇಲ್ಲ. ಈ ಹಿಂದಿನಂತೆ ಬೆಳಿಗ್ಗೆ 6 ರಿಂದ 10 ಗಂಟೆಯ ತನಕ ಅಥವಾ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯುತ್ತವೆಯೇ ? ಇಲ್ಲಾ ಸಂಪೂರ್ಣವಾಗಿ ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯ ತನಕ ಯಾವುದೇ ರೀತಿಯ ವ್ಯವಹಾರ ಮತ್ತು ಸಂಚಾರ ಇರುವುದಿಲ್ಲವಾ ? ಎಂಬುದು ಗೊತ್ತಾಗದೆ ಒದ್ದಾಡುತ್ತಿದ್ದು, ತಾಲ್ಲೂಕು ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊನೆಗೆ ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ರವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಜಿಲ್ಲಾದ್ಯಂತ ಅನಗತ್ಯ ಸಂಚಾರ ಮತ್ತು ಗುಂಪುಗೂಡುವಿಕೆ ಹೊರತು ಪಡಿಸಿ, ಯಥಾಸ್ಥಿತಿ ಇರುತ್ತದೆ. ವೀಕೆಂಡ್ ನಲ್ಲೂ ಸಹ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿರುತ್ತವೆ ಎಂದು ಮಾಹಿತಿ ನೀಡಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು