ಕೂಡ್ಲೂರು ಕೆರೆ ಕೋಡಿ ಬಳಿ ಚಿರತೆ ಪ್ರತ್ಯಕ್ಷ. ಜನರ ಆತಂಕ. ಅರಣ್ಯ ಇಲಾಖೆ ನಿರ್ಲಕ್ಷ್ಯ
ತಾಲ್ಲೂಕಿನ ಕೂಡ್ಲೂರು ಕೆರೆ ಕೋಡಿಯ ಬಳಿ ಚಿರತೆಯೊಂದು ಸುಳಿದಾಡುತಿದ್ದು, ಸುತ್ತ ಮುತ್ತ ಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶನಿವಾರ ಮತ್ತು ಭಾನುವಾರ ರಾತ್ರಿ ವೇಳೆಯಲ್ಲಿ ಚಿರತೆ ಓಡಾಡುತ್ತಿರವುದನ್ನು, ಕೆರೆಯ ಸನಿಹದಲ್ಲಿ ಇರುವ ಹಸುಗಳ ಫಾರಂ ಮಾಲೀಕರು ನೋಡಿ ಗಾಬರಿಗೊಂಡು ಅರಣ್ಯ ಇಲಾಖೆಗೆ ಕರೆ ಮಾಡಿ ದೂರು ನೀಡಿದ್ದಾರೆ.
ಕೂಡ್ಲೂರು ಕೆರೆಯ ಸುತ್ತಮುತ್ತ ನಗರವು ಸೇರಿದಂತೆ ಮಸಿಗೌಡನ ದೊಡ್ಡಿ, ನೀಲಕಂಠನಹಳ್ಳಿ, ಗೋವಿಂದೇಗೌಡನದೊಡ್ಡಿ, ಚನ್ನಂಕೇಗೌಡನದೊಡ್ಡಿ, ವಾಲೆ ತೋಪು, ಶ್ರೀರಾಮಪುರ ಸೇರಿದಂತೆ ಹಲವಾರು ಗ್ರಾಮಗಳಿದ್ದು, ಕೆಲವರು ತಂತಮ್ಮ ತೋಟಗಳಲ್ಲೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಕೆರೆ ಕೋಡಿ ತಡಿಯಲ್ಲಿಯೇ ಹಸುಗಳ ಎರಡು ಫಾರಂ ಗಳು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕೋಳಿ ಫಾರಂಗಳಿರುವುದರಿಂದ ವಾಸನೆಗೆ ಬಂದಿರಬಹುದು ಎನ್ನಲಾಗಿದೆ.
ಕಳೆದ ಎರಡು ದಿನಗಳ ಹಿಂದೆಯೇ ಚಿರತೆ ಬಂದಿದ್ದು, ದೂರಿನ ಮೇರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳ ಮಹಜರಿಗಾಗಿ ಬಂದಿದ್ದು, ಹೆಜ್ಜೆ ಗುರುತುಗಳನ್ನು ಪತ್ತೆಹಚ್ಚಿ ಗುರುತು ಮಾಡಿ ಹೋಗಿದ್ದು, ಮೂರು ದಿನಗಳಾದರೂ ಬೋನು ಇಟ್ಟಿಲ್ಲದಿರುವುದರಿಂದ ಸಾರ್ವಜನಿಕರು ಪ್ರಾಣಭಯದಿಂದ ಓಡಾಡುವಂತಾಗಿದೆ. *ಅದರಲ್ಲೂ ಮುಂಜಾನೆ ಮತ್ತು ಮುಸ್ಸಂಜೆಗಳಲ್ಲಿ, ವಾಯುವಿಹಾರಕ್ಕೆ ಬರುವವರು ಭೀತಿಗೊಂಡಿದ್ದಾರೆ.* ಯಾವುದೇ ಮೆಳೆ, ಗಾಳಿಗೆ ಸುಂಯ್ ಎಂದರೂ ಹೃದಯ ಬಾಯಿಗೆ ಬಂದಂತಾಗುತ್ತದೆ ಎಂದು ವಾಕಿಂಗ್ ಟೀಂ ನವರ ಅಳಲಾಗಿದೆ.
ನಮ್ಮ ವ್ಯಾಪ್ತಿಯಲ್ಲಿ ನಾಲ್ಕು ಬೋನುಗಳಿದ್ದು, ವಿರೂಪಾಕ್ಷಪುರ ಸೇರಿದಂತೆ ನಾಲ್ಕು ಕಡೆ ಇಟ್ಟಿದ್ದೇವೆ. ಎಲ್ಲಾ ಕಡೆಯೂ ಸ್ಥಳೀಯರು ಇನ್ನೂ ಸ್ವಲ್ಪ ದಿವಸಗಳಿರಲಿ ಎಂದು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ನೀಲಕಂಠನಹಳ್ಳಿ ಬಳಿ ಇಡಲು ತಡವಾಗಿದೆ. ಮಂಗಳವಾರ ಬೋನನ್ನು ಸೂಕ್ತ ಜಾಗದಲ್ಲಿಟ್ಟು, ಚಿರತೆಯನ್ನು ಸೆರೆಹಿಡಿದು ಅಭಯಾರಣ್ಯಕ್ಕೆ ಬಿಡಲಾಗುವುದು.
ದಿನೇಶ್, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು