Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

Posted date: 22 Jul, 2021

Powered by:     Yellow and Red

ರಾಜ್ಯ ರೈತ ಸಂಘದ ಇಬ್ಬರ ದುರ್ಮರಣ. ಜಿಲ್ಲೆಯಲ್ಲಿ ಆತಂಕದ ಛಾಯೆ

ರಾಮನಗರ.ಜು.22: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಕಾರ್ಯಾಧ್ಯಕ್ಷ ಹೆಚ್ ಮೊಗೇನಹಳ್ಳಿ ಗ್ರಾಮದ ಎಂ ರಾಮು ರವರು ಮತ್ತು ಮೂಲತಃ ಕನಕಪುರ ದ ಹಾಲಿ ಹಾಸನ ಜಿಲ್ಲೆಯ ಆಲೂರು ಗ್ರಾಮದ ನಿವಾಸಿ ಜಿ ಟಿ ರಾಮಸ್ವಾಮಿ ರವರು ನವಲಗುಂದದಲ್ಲಿ 21 ರ ಬುಧವಾರ ನಡೆದ ರೈತ ಹುತಾತ್ಮರ ದಿನಾಚರಣೆ ಮುಗಿಸಿ, ಜಿ.ಟಿ ರಾಮಸ್ವಾಮಿ ಯವರ ಜೊತೆ ಚಿಕ್ಕಮಗಳೂರು ಮಾರ್ಗವಾಗಿ ಹಾಸನ ಜಿಲ್ಲೆ ಆಲೂರು ಗ್ರಾಮದಲ್ಲಿರುವ ರಾಮಸ್ವಾಮಿಯವರ ಜಮೀನಿಗೆ ಬರುತ್ತಿದ್ದ ಸಂದರ್ಭದಲ್ಲಿ ಇಂದು ಮುಂಜಾನೆ ಚಿಕ್ಕಮಗಳೂರು ಟ್ರಾಫಿಕ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತವಾಗಿದ್ದು,  ರಾಮಸ್ವಾಮಿಯವರು ಸ್ಥಳದಲ್ಲೇ ಮೃತಪಟ್ಟರೆ, ಎಂ.ರಾಮು ಅವರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತರಾಗಿದ್ದಾರೆ. ಮೊತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಶ್ರೀಯುತ ರಾಮು ರವರು ಸೌಮ್ಯ ಸ್ವಭಾದ ವ್ಯಕ್ತಿಯಾಗಿದ್ದರು. 80 ರ ದಶಕದಲ್ಲಿ ರೈತ ಸಂಘಟನೆ ವೇಗವಾಗಿ ಕ್ರಮಿಸುತ್ತಿದ್ದ ಸಂದರ್ಭದಲ್ಲಿ ಶ್ರೀಯುತರು ಸ್ವ ಆಸಕ್ತಿಯಿಂದ ತಮ್ಮ ಭಾಗದಲ್ಲಿಯೂ ರೈತ ಸಂಘಟನೆಯನ್ನು ಚುರುಕು ಗೊಳಿಸಬೇಕು ಎಂದು ಮುಂದೆ ಬಂದವರು.

ಅದಕ್ಕೂ ಮೊದಲು ಅವರು ತೆಂಗು ಬೆಳೆಗಾರರ ಸಂಘದ ಪದಾಧಿಕಾರಿಯಾಗಿ, ತೆಂಗು ಬೆಳೆಗಾರರ ಸಮಸ್ಯೆಯನ್ನು ಮುಂದು ಮಾಡಿ, ಹೋರಾಟ ಮಾಡುತ್ತಿದ್ದರು. ಈ ಹೋರಾಟಕ್ಕೆ ಮತ್ತಷ್ಟು ಶಕ್ತಿ ಒದಗಬೇಕು ಎಂದರೆ, ತಾವು ಆಗ ಅಸ್ಥಿತ್ವಕ್ಕೆ ಬಂದಿದ್ದ  ಪ್ರೊ.ನಂಜುಂಡ ಸ್ವಾಮಿ, ರುದ್ರಪ್ಪ , ಸುಂದರೇಶ್, ರವಿವರ್ಮಕುಮಾರ್ ಹಾಗೂ ರೇವಣ ಸಿದ್ದಯ್ಯ ಅವರ ಸಂಘಟನೆಯ ಜೊತೆ ಸೇರಿಕೊಂಡು ತಮ್ಮ ತಾಲ್ಲೂಕಿನಲ್ಲಿ ಸಮಸ್ಯೆಗೆ ಒಳಗಾಗಿರುವ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಸಂಘಟನೆಯ ಜೊತೆ ತೊಡಗಿಸಿಕೊಂಡವರು.


ಇವರು ತಾಲ್ಲೂಕು ರೈತ ಸಂಘದ ಪದಾಧಿಕಾರಿ ಯಾಗಿ, ಜಿಲ್ಲಾ ರೈತ ಸಂಘದ ಪದಾಧಿಕಾರಿಯಾಗಿ ಅದೇ ರೀತಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಯಾಗಿ ವಿವಿಧ ಹಂತಗಳಲ್ಲಿ ರೈತರ ಸಮಸ್ಯೆಗಳನ್ನು ಮನಸ್ಸಿಗೆ ತುಂಬಿಕೊಂಡು ಹೋರಾಟದ ನೆಲೆ ಕಂಡುಕೊಂಡವರು.

ನಾಯಕರು ಹೇಳಿದ್ದನ್ನ ಸೂಕ್ಷ್ಮವಾಗಿ ಗಮನಿಸಿ ಕೊಂಡು, ಅದನ್ನು ಕೆಳ ಹಂತದ ರೈತ ಸಮುದಾಯಕ್ಕೆ ಪ್ರಾಮಾಣಿಕವಾಗಿ ಮುಟ್ಟಿಸುವ ಒಂದು ಗುಣವನ್ನು ಹೊಂದಿದ್ದರು. ಹಲವು ಸಂದರ್ಭಗಳಲ್ಲಿ ಅರ್ಥವಾಗದ ವಿಷಯಗಳನ್ನು ನಾಯಕರ ಬೆನ್ನು ಬಿದ್ದು ಕೇಳಿ ತಿಳಿದು ಕೊಳ್ಳುವ ಚಾಕಚಕ್ಯತೆಯು ಅವರಲ್ಲಿ ಇತ್ತು. ಹಾಗಾಗಿ ಅವರನ್ನು ರಾಜ್ಯಮಟ್ಟದ ನಾಯಕರು ಗುರುತಿಸುವ ಮಟ್ಟಿಗೆ ಬೆಳೆದುಕೊಂಡಿದ್ದರು.


ಕನಕಪುರ ತಾಲ್ಲೂಕಿನಲ್ಲಿ ನಡೆದ ಗ್ರಾನೈಟ್ ತಡೆ ಹೋರಾಟ, ಚನ್ನಪಟ್ಟಣ ತಾಲ್ಲೂಕಿನಲ್ಲಿ ನಡೆದ ಗ್ರಾನೈಟ್ ತಡೆ ಹೋರಾಟ, ಮದ್ಯಪಾನ ನಿಷೇಧ ಚಳವಳಿ, ನೀರಾ ಚಳವಳಿ ಸೇರಿದಂತೆ ಅನೇಕ ಚಳವಳಿಗಳಲ್ಲಿ ಪಾಲ್ಗೊಂಡು ಮೈ ತುಂಬಾ ಕೇಸುಗಳನ್ನು ಹೊದ್ದಿಕೊಂಡಿದ್ದೂ ಉಂಟು.

ಈ ರೀತಿಯಲ್ಲಿ ಅರ್ಪಿಸಿಕೊಂಡು, ಮನೆ ಮಠವನ್ನು ಬಿಟ್ಟು ಸಂಘಟನೆಯೊಂದಕ್ಕೆ ಮೈಯೊಡ್ಡಿದ ರಾಮು ಆಗರ್ಭ ಶ್ರೀಮಂತರೇನು ಅಲ್ಲ, ಬಂದಿದ್ದನ್ನೇ ಉಪಯೋಗಿಸಿ ಕೊಂಡು ಸಂಘಟನೆಗೆ ಚಾಲನೆ ನೀಡಿದವರು. ಸರಳ ಮದುವೆ ಹಾಗೂ ಇನ್ನಿತರೆ ಜನಾಂದೋಲನಗಳಲ್ಲಿ ಪಾಲ್ಗೊಳ್ಳುತ್ತಿದ್ದ ಓರ್ವ ನಿಷ್ಠ ಹಾಗೂ ನಿಷ್ಠುರ ವ್ಯಕ್ತಿಯಾಗಿದ್ದರು.


ಜಿ ಟಿ ರಾಮಸ್ವಾಮಿಯವರು ಮೂಲತಃ ಕನಕಪುರ ದವರಾಗಿದ್ದು ಗುರಿಕಾರ್ ಕುಟುಂಬದ ಕುಡಿ. ಇವರು ಭಾರತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತ ನಂತರ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ, ಹಿರಿಯ ಅಧಿಕಾರಿಯಾಗಿದ್ದರು. ಅಲ್ಲಿ ನಿವೃತ್ತಿ ಹೊಂದಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡ ಜಿ ಟಿ ರಾಮಸ್ವಾಮಿಯವರು ಪಿ ಜಿ‌ ಆರ್ ಸಿಂಧ್ಯಾ ರವರ ವಿರುದ್ಧ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಅವರಿಗೆ ಟಿಕೆಟ್ ನಿರಾಕರಿಸಿತ್ತು.


ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ‌ ಅವರು ರೈತ ಸಂಘದತ್ತ ಮುಖಮಾಡಿದರು. ಹಂತಹಂತವಾಗಿ ಸಂಘದಲ್ಲಿ ಗುರುತಿಸಿಕೊಂಡ ಅವರು ರಾಜ್ಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಹಾಸನ ಜಿಲ್ಲೆಯ ಆಲೂರು ಗ್ರಾಮದಲ್ಲಿ ತಮ್ಮ ಮಾವನವರ ಮನೆಯಲ್ಲಿ ವಾಸವಾಗಿದ್ದರು. 22-07 ರ ಸಂಜೆಯ ವೇಳೆಗೆ ಆಲೂರು ಗ್ರಾಮದ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.


ಎಂ ರಾಮು ರವರ ಸಾವಿನಿಂದ ರೈತ ಸಂಘ ಓರ್ವ ಶಕ್ತ ಸಂಘಟ ಕನನ್ನು ಕಳೆದುಕೊಂಡಂತೆ ಆಗಿದೆ. ಎಲ್ಲರನ್ನೂ ಕೂಡಿಕೊಂಡು ಸಮಾಜಮುಖಿಯಾಗಿ ಆಲೋಚಿಸುವ ಒಂದು ಗುಣ, ಅವರ ಬಗ್ಗೆ ವಿಶೇಷ ಭಾವನೆಯನ್ನು ಮೂಡಿಸುತ್ತಿತ್ತು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಬಯಲುಸೀಮೆ, ರೈತ ಸಂಘದ ಹಲವು ಪ್ರಮುಖರು, ಕಾರ್ಯಕರ್ತರು, ಸ್ನೇಹಿತರು ಆಶಿಸಿದ್ದಾರೆ. ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ಪತ್ರದ ಮೂಲಕ ಸಂತಾಪ ಸೂಚಿಸಿದ್ದಾರೆ. ರಾಮು ರವರ ಅಂತ್ಯ ಕ್ರಿಯೆಯು 23-07 ರ ಶುಕ್ರವಾರ ಮುಂಜಾನೆ 10 ಗಂಟೆಗೆ ಸ್ವಗ್ರಾಮ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ ಜರುಗಲಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑