Tel: 7676775624 | Mail: info@yellowandred.in

Language: EN KAN

    Follow us :


ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು

Posted date: 29 Jul, 2021

Powered by:     Yellow and Red

ಕಾಡಾನೆ ದಾಳಿ, ವ್ಯಕ್ತಿ ಸಾವು. ರೊಚ್ಚಿಗೆದ್ದ ಗ್ರಾಮಸ್ಥರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು

ಚನ್ನಪಟ್ಟಣ: ಬೆಳೆಹಾನಿಗಷ್ಟೇ ಸೀಮಿತವಾಗಿದ್ದ ಆನೆಗಳು ಈಗ ಮನುಷ್ಯನ ಪ್ರಾಣ ತೆಗೆಯುವ ಹಂತಕ್ಕೆ ಹೋಗಿದ್ದು,  ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಅನೆಯೊಂದು ದಾಳಿ ನಡೆಸಿ, ಸಾಯಿಸಿರುವ ಘಟನೆ ತಾಲೂಕಿನ ಗಡಿಭಾಗವಾದ ದೊಡ್ಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಸತೀಶ್(35) ಮೃತ ದುರ್ಧೈವಿ. ಈತ ಗ್ರಾಮದ ಹೊರವಲಯದಲ್ಲಿರುವ ತನ್ನ ಮಾವಿನತೋಟದಲ್ಲಿ ಬೇಲಿ ಕತ್ತರಿಸುವ ಕೆಲಸದಲ್ಲಿ ಮಗ್ನನಾಗಿದ್ದ ವೇಳೆ ಹಠಾತ್ತನೇ ದಾಳಿ ನಡೆಸಿದ ಆನೆಯೊಂದು ತನ್ನ ಸೊಂಡಿಲಿನಿಂದ ಹೊಡೆದು ಸಾಯಿಸಿದೆ.


ಈ ವೇಳೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇತರೆ ರೈತರು ಚೀರಾಟದ ನಂತರ ಆನೆ ಸ್ಥಳದಿಂದ ಕಾಲ್ಕಿತ್ತಿದೆ. ಒಟ್ಟು ನಾಲ್ಕು ಆನೆಗಳು ಬಂದಿದ್ದು, ಅದರಲ್ಲಿ ಒಂದು ಪುಂಡಾನೆ ದಾಳಿ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ಸತೀಶ್ ಕೃಷಿ ಚಟುವಟಿಕೆ ಮಾಡಿಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.


*ಅಧಿಕಾರಿಗಳ ದೌಡು:*

ಈ ವೇಳೆ ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಮೃತನ ಸಾವಿಗೆ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಹೊಣೆ. ಈ ಭಾಗದಲ್ಲಿ ನಿತಂತರವಾಗಿ ಅನೆಗಳು ಉಪಟಳ ನೀಡುತ್ತಿವೆ. ಈ ಬಗ್ಗೆ ಅರಿವಿದ್ದರೂ ಅಗತ್ಯಕ್ರಮ ಕೈಗೊಳ್ಳಲು ವಿಫಲವಾಗಿರುವುದೇ ಈ ಘಟನೆಗೆ ಕಾರಣ. ಮೃತ ರೈತನ ಸಾವಿಗೆ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯೇ ಹೊಣೆ ಹೊರಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.


ತಾಲ್ಲೂಕಿನ ರೈತಸಂಘದ ಮುಖಂಡರು ತಮ್ಮ ಆಕ್ರೋಶವನ್ನು ಅಧಿಕಾರಿಗಳ ಮೇಲೆ‌ ತೂರಿದರು. ನೀವು ಕೊಡುವ ಪರಿಹಾರ ನಮಗೆ ಬೇಡ. ಸರ್ಕಾರ ಕೊಡುವ ದುಪ್ಪಟ್ಟು ಪರಿಹಾರ ನಾವುಗಳು ಸೇರಿ ಕೊಡುತ್ತೇವೆ. ಅಧಿಕಾರಿಗಳು ಮತ್ತು ಮಂತ್ರಿಗಳು ಬಂದು ಸಾಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಅವರದೇ ರೀತಿಯಲ್ಲಿ ಎಲ್ಲಾ ಬಂದೋಬಸ್ತ್ ಮಾಡಿಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆದರೂ ಎರಡು ಸಾವಿರಕ್ಕೂ ಹೆಚ್ಚು ಮಂದಿ ಜನರು ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಹತ್ತಾರು ಅನೆಗಳು ಬೀಡುಬಿಟ್ಟಿವೆ. ರಾತ್ರಿ ಸಮಯದಲ್ಲಿ ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಟ್ಟು ರೈತರ ಬೆಳೆನಾಶಪಡಿಸುತ್ತಿವೆ. ಅರಣ್ಯ ಇಲಾಖೆಯವರು ಅನೆಗಳನ್ನು ಓಡಿಸುವ ಕಾರ್ಯಾಚರಣೆಯನ್ನು ನೆಪಮಾತ್ರಕ್ಕೆ ನಡೆಸುತ್ತಾರೆ. ಇಂದು ನಡೆದಿರುವ ರ್ದುಘಟನೆಗೆ ಇಲಾಖೆಯೇ ನೇರಹೊಣೆ ಹೊರಬೇಕು. ಸ್ಥಳಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಬೇಕು. ಮೃತನ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಬೇಕು ಎಂದು ನೆರೆದಿದ್ದ ಜನರು ಆಗ್ರಹಿಸಿದರು.


ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಲ್ಲೇ ಅರಣ್ಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದರು. ತಹಸೀಲ್ದಾರ್ ಎಲ್.ನಾಗೇಶ್, ಡಿಎಫ್‍ಒ ದೇವರಾಜು, ಆರ್‍ಎಫ್‍ಓ ದಿನೇಶ್, ಗ್ರಾಮಾಂತರ ಪಿಎಸ್‍ಐ ಎಚ್.ಎಂ.ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು ಮೃತನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.


ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಮಾತುಕತೆ ನಡೆಸಿ, ಇಲಾಖೆಯಿಂದ ಸಿಗಬಹುದಾದ ಸಂಪೂರ್ಣ ನೆರವು ನೀಡುವಂತೆ ಸೂಚಿಸಿದರು. ಅದರಂತೆ ಮೃತನ ಕುಟುಂಬಕ್ಕೆ 7.5 ಲಕ್ಷ ಪರಿಹಾರಧನ ಹಾಗೂ 5 ವರ್ಷಗಳ ಕಾಲ ಪ್ರತಿತಿಂಗಳು 2 ಸಾವಿರ ಮಾಶಾಸನವನ್ನು ಘೋಷಿಸಲಾಯಿತು. ಶೀಘ್ರವಾಗಿ 2 ಲಕ್ಷ ಬಿಡುಗಡೆಗೊಳಿಸಲು ಸಹ ತೀರ್ಮಾನ ತೆಗೆದುಕೊಂಡ ನಂತರ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.


*ಪ್ರಾಣಕ್ಕೂ ಕುತ್ತು ತಂದ ಗಜರಾಯ:*

ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಅನೆದಾಳಿಯ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಅದರಲ್ಲೂ ತೆಂಗಿನಕಲ್ಲು ಹಾಗೂ ಕಬ್ಬಾಳು ವಲಯದ ಅರಣ್ಯ ಪ್ರದೇಶದಲ್ಲಿ ಅನೆದಾಳಿ ದಿನನಿತ್ಯದ ಸಮಸ್ಯೆಯಾಗಿ ಹೋಗಿದೆ. ಇಷ್ಟು ದಿನ ಬೆಳೆನಾಶಕ್ಕೆ ಸಿಮೀತವಾಗಿದ್ದ ಈ ದಾಳಿ ಮಾನವನ ಪ್ರಾಣಹಾನಿಗೂ ವಿಸ್ತರಿಸಿದೆ. ಕೆಲವರ್ಷಗಳ ಹಿಂದೆ ತಾಲೂಕಿನ ಹನಿಯೂರು-ರಾಮೇಗೌಡನದೊಡ್ಡಿ ಬಳಿ ದಾರಿಹೋಕರೊಬ್ಬರನ್ನು ಅನೆಯೊಂದು ತುಳಿದು ಸಾಯಿಸಿತ್ತು. ಕಳೆದ ವರ್ಷ ಕನ್ನಿದೊಡ್ಡಿ ಗ್ರಾಮದ ಬಳಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ಇದೀಗ ದೊಡ್ಡನಹಳ್ಳಿ ಗ್ರಾಮದಲ್ಲಿ ರೈತನೊಬ್ಬನನ್ನು ಬಲಿಪಡೆದುಕೊಂಡಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑