ತಾಲ್ಲೂಕಿನ ಭೈರಾಪಟ್ಟಣ ತೋಟಗಾರಿಕಾ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಮಾವು ಸಂಸ್ಕರಣಾ ಘಟಕ ಶೀಘ್ರವಾಗಿ ಸ್ಥಾಪನೆ. ಅಧ್ಯಕ್ಷ ನಾಗರಾಜು ಭರವಸೆ
ಮಾವು ಸಂಸ್ಕರಣಾ ಘಟಕಕ್ಕೆ 15 ಎಕರೆ ಭೂಮಿಯನ್ನು ಸರ್ಕಾರ ನೀಡಿದೆ. ಸದ್ಯ ಐದು ಎಕರೆಯಲ್ಲಿ ಶೀಘ್ರವಾಗಿ ಕಾರ್ಯಾರಂಭ ಮಾಡುತ್ತೇವೆ. ಘಟಕದಲ್ಲಿ ಉನ್ನತ ದರ್ಜೆಯ ಉಪಕರಣಗಳನ್ನು ಜೋಡಿಸಿ, ರಫ್ತು ಮಾಡಲು ಅಣಿಗೊಳಿಸಲಾಗುತ್ತದೆ. ಈ ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಅಶ್ವಥ್ ನಾರಾಯಣ ರವರು ಶೀಘ್ರವಾಗಿ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಕೆ ವಿ ನಾಗರಾಜು ತಿಳಿಸಿದರು.
ಅವರು ಶುಕ್ರವಾರ ತಾಲ್ಲೂಕಿನ ಭೈರಾಪಟ್ಟಣ ಗ್ರಾಮದ ಸಸ್ಯಕ್ಷೇತ್ರದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ವತಿಯಿಂದ ಹಣಕಾಸು ನೀಡಿದ್ದಾರೆ. ಈಗಾಗಲೇ ಈ ಸ್ಥಳಕ್ಕೆ ಇಂಜಿನಿಯರ್ ಗಳು, ಆರ್ಕಿಟೆಕ್ಚರ್ ಗಳು ಬಂದು ವೀಕ್ಷಿಸಿ, ನೀಲಿ ನಕ್ಷೆಯನ್ನು ತಯಾರು ಮಾಡಿದ್ದಾರೆ. ಶೋಭಾ ಕರಂದ್ಲಾಜೆ ರವರು ಸಹ ಇದರ ಹಿಂದೆ ಮಾರ್ಗದರ್ಶನ ನೀಡುವುದರ ಜೊತೆಗೆ ಉನ್ನತ ಮಟ್ಟದಲ್ಲಿ, ಯಾವುದೇ ಲೋಪದೋಷಗಳಾಗದಂತೆ ಕಾರ್ಯಾರಂಭ ಮಾಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಅವರು ತಿಳಿಸಿದರು. ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಈಗ ಕೆಲಸವನ್ನು ಪ್ರಾರಂಭಿಸುತ್ತೇವೆ. ನಂತರ ಉಪ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಮಾರುಕಟ್ಟೆಗೆ ಸಂಬಂಧಿಸಿದಂತೆ ಸಂಸ್ಥೆಯ ವತಿಯಿಂದ ವೆಬ್ಸೈಟ್ ರೂಪಿಸಿ, ಗ್ರಾಹಕರು ಬುಕ್ ಮಾಡಿದರೆ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಬೆಂಗಳೂರು ಸೇರಿದಂತೆ ಹಲವಾರು ಕಡೆ ಇರುವ ಅಪಾರ್ಟ್ಮೆಂಟ್ ಗಳಲ್ಲಿ ಕೊಂಡುಕೊಳ್ಳಲು ಉತ್ಸುಕರಾಗಿದ್ದಾರೆ. ಅವರಿಗೂ ಸಹ ಉತ್ತಮ ತಳಿಯ ಹಣ್ಣುಗಳನ್ನು ಕೊಡುವ ಮೂಲಕ ಮಾರುಕಟ್ಟೆ ವಿಸ್ತರಿಸಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು, ಮಾವಿನಲ್ಲಿ ಇತ್ತೀಚೆಗೆ ವಿವಿಧ ರೀತಿಯ ಉನ್ನತ ಪೋಷಕಾಂಶಗಳಿರುವ ತಳಿಗಳು ಬಂದಿವೆ. ಈ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ನಮ್ಮ ಸಂಸ್ಥೆಯ ಧ್ಯೇಯವಾಗಿದೆ.
ರೈತರಿಗೆ ಈಗಾಗಲೇ ಸಬ್ಸಿಡಿಯಲ್ಲಿ ಕ್ರೇಟ್ ಮತ್ತು ಮೋಹಕ ಬಲೆಗಳನ್ನು ನೀಡಿದ್ದೇವೆ. ರೈತರಿಗೆ ತರಬೇತಿ ನೀಡಲಾಗುತ್ತಿದೆ. ಇಸ್ರೇಲ್ ಮಾದರಿಯ ಒತ್ತು ಮಾವು ಬೆಳೆಯಲು ಪ್ರೋತ್ಸಾಹ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ.
ಮಣ್ಣಿನ ಆರೋಗ್ಯ ಮತ್ತು ಔಷಧ ಸಿಂಪಡಣೆಯಿಂದ ಆರೋಗ್ಯಯುತ ಹಣ್ಣನ್ನು ಕೊಡುವುದು ಸಂಸ್ಥೆಯ ಉದ್ದೇಶವಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ತೋಟಗಾರಿಕಾ ನಿರ್ದೇಶಕ ಗುಣವಂತ, ತೋಟಗಾರಿಕ ಉಪ ನಿರ್ದೇಶಕ ಮುನೇಗೌಡ, ಸಹಾಯಕ ನಿರ್ದೇಶಕ ವಿವೇಕ್ ಮತ್ತು ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ರಾಂಪುರ ಧರಣೀಶ್ ಕುಮಾರ್ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು