Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

Posted date: 28 Sep, 2021

Powered by:     Yellow and Red

ಚನ್ನಪಟ್ಟಣದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಚನ್ನಪಟ್ಟಣ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ರೈತ ಸಂಘಟನೆಗಳು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಜನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ್ ಬಂದ್ ತಾಲೂಕಿನಲ್ಲಿ ಪ್ರತಿಭಟನೆ ಮತ್ತು ರ‍್ಯಾಲಿಗೆ ಮಾತ್ರ ಸೀಮಿತವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಅಂಗಡಿ ಮಳಿಗೆಗಳು, ಎಲ್ಲಾ ಮಾರುಕಟ್ಟೆ, ಬ್ಯಾಂಕ್ ಮತ್ತು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.


ವಾಹನ ಸಂಚಾರ ಸಹ ಸಹಜವಾಗಿತ್ತು. ಬಂದ್ ಅಂಗವಾಗಿ ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಗಾಂಧಿ ಸ್ಮಾರಕ ಭವನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿಭವನ ದಿಂದ ಬೈಕ್ ರ್ಯಾಲಿ ಹೊರಟ ಪ್ರತಿಭಟನಾಕಾರರು ಎಂಜಿ ರಸ್ತೆ ಮಾರ್ಗವಾಗಿ ಪೇಟೆ ಬೀದಿ, ಡೂಂಲೈಟ್ ಸರ್ಕಲ್, ಷೇರು ಹೋಟೆಲ್‌ ಸರ್ಕಲ್, ಸಾತನೂರು ಸರ್ಕಲ್, ಬಸ್ ನಿಲ್ದಾಣ, ಹೈವೇ ರಸ್ತೆಯ ಮೂಲಕ ಚಿಕ್ಕಮಳೂರು, ಕೋಟೆ, ಜೆಸಿ ರಸ್ತೆ ಮತ್ತು ಡಿ ಟಿ ರಾಮು ವೃತ್ತ ದ ಕಡೆಯಿಂದ ಗಾಂಧಿಭವನ ತಲುಪಿದರು. ಇದೇ ವೇಳೆ ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.


 ಪ್ರತಿಭಟನೆಯಲ್ಲಿ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಸಿ.ಕೃಷ್ಣಯ್ಯ, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ಉಪಾಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ಸತ್ಯನಾರಯಣ.ಎಂ.ಎನ್, ಮುಖಂಡ ಶಂಭೂಗೌಡ ನಾಗವಾರ, ಕದಂಬಸೇನೆ ಅಧ್ಯಕ್ಷ ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ ವೆಂಕಟೇಶ್(ಶೇಠು), ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್, ಕಾಂಗ್ರೆಸ್ ಮುಖಂಡರಾದ ಶರತ್ ಚಂದ್ರ, ಸಯ್ಯದ್ ನವಾಜ್ ಹಷ್ಮಿ ಇನ್ನೂ ಮುಂತಾದವರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹೆಚ್ಚುವರಿ ಪೊಲೀಸರನ್ನು ನಗರದಲ್ಲಿ ನಿಯೋಜಿಸಲಾಗಿತ್ತು. ಬಂದ್ ಆಚರಣೆ ವೇಳೆ ನಾಗರೀಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑