Tel: 7676775624 | Mail: info@yellowandred.in

Language: EN KAN

    Follow us :


ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ: ಡಾ ಮುನಿರಾಜಪ್ಪ

Posted date: 03 Oct, 2021

Powered by:     Yellow and Red

ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ: ಡಾ ಮುನಿರಾಜಪ್ಪ

ರಾಮನಗರ: ಜಾಗತೀಕರಣ, ಉದಾರೀಕರಣದಿಂದಾಗಿ ಪ್ರಸ್ತುತ ಶಿಕ್ಷಣ ಕ್ಷೇತ್ರವು ಹಣ ಮಾಡುವ ವ್ಯಾಪಾರವಾಗಿದೆ ಎಂದು ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಜಾನಪದ ಲೋಕದ ದೊಡ್ಡಮನೆಯಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜಿನ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಹಮ್ಮಿಕೊಂಡಿರುವ ‘ಸಮುದಾಯ ಜೀವನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಿಕ್ಷಕ ವೃತ್ತಿ ಖಂಡಿತವೂ ಹಣ ಗಳಿಸುವುದಕ್ಕೆ ದಾರಿಯಲ್ಲ. ಅದೊಂದು ಪವಿತ್ರ ಕಾರ್ಯ. ಇದು ಒಂದು ನೌಕರಿ ಮಾತ್ರ ಎಂದು ಭಾವಿಸಿದವರು ಖಂಡಿತ ಆ ಭಾವನೆಯನ್ನು ದೂರವಿರಿಸಿ, ಪುಣ್ಯ ಕಾರ್ಯ ಎಂದೇ ಭಾವಿಸಬೇಕು ಎಂದು ತಿಳಿಸಿದರು.

ಚಿಕ್ಕಮಕ್ಕಳ ಮನಃಸ್ಥಿತಿಯನ್ನು ಬದಲಾಯಿಸುವ ಶಕ್ತಿ ಕೇವಲ ಶಿಕ್ಷಕನಿಗೆ ಮಾತ್ರ ಇದೆ. ಕೇವಲ ಅಕ್ಷರ ಕಲಿಸಿವುದು, ಅಂಕಗಳನ್ನು ನೀಡುವುದು ಮಾತ್ರವಲ್ಲ, ಮಕ್ಕಳ ಮನಸ್ಸಿನಲ್ಲಿ ದುರಾಸೆಗಳು ಮೂಡದಂತೆ ತಿದ್ದಿ ತೀಡುವುದೇ ಶಿಕ್ಷಕನ ಕೆಲಸ ಎಂದು ತಿಳಿಸಿದರು.


`ಗುರುಬ್ರಹ್ಮ, ಗುರುರ್ವಿಷ್ಣು, ಗುರುದೇವೋ ಮಹೇಶ್ವರ, ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀಗುರುವೇ ನಮಃ ಎಂಬುದು ಯಾರೋ ತಿಳಿಯದವರು ಸೃಷ್ಟಿಸಿದ ಪದವಲ್ಲ. ಬದಲಿಗೆ, ಗುರುವಿನಲ್ಲಿ ಇರಬಹುದಾದ ಗುಣಗಳನ್ನು ಬಿಂಬಿಸುವ ಈ ಪದದಲ್ಲಿ ಅಪಾರ ಅರ್ಥ ಅಡಗಿದೆ. ಇದನ್ನು ಅರ್ಥ ಮಾಡಿಕೊಂಡೇ ಶಿಕ್ಷಕ `ಗುರುವಿನ ಪರಮ ಪವಿತ್ರ ಸ್ಥಾನ ಅಲಂಕರಿಸಬೇಕು. ಸಮಾಜಕ್ಕೂ, ನಿಮಗೂ ಕಲಿಸಿದ ಗುರುವಿನ ಋಣಸಂದಾಯ ಮಾಡುವತ್ತ ಶಿಕ್ಷಕರಾಗುವವರು ಆಲೋಚಿಸಬೇಕು ಎಂದು ತಿಳಿಸಿದರು.


ಸ್ವರ್ಗ, ನರಕಗಳ ಕಲ್ಪನೆಯೇ ಈಗ ದೂರವಾಗಿದೆ. ದೈವದ ಬಗ್ಗೆ ಭಕ್ತಿ, ಭಯವೂ ಇಲ್ಲವಾಗಿದೆ. ಭಯ ಇಲ್ಲದ್ದರಿಂದ ಏನೆಲ್ಲ ಘಟಿಸುತ್ತಿದೆ. ಜಗತ್ತು  ಬದಲಾಗಿದೆ. ಮಳೆ- ಬೆಳೆ ಕಡಿಮೆ ಯಾಗಿದೆ. ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಮನುಷ್ಯನಲ್ಲಿನ ದುರಾಸೆ ಪ್ರತಿಫಲವೇ ಈ ಅನಾಹುತಗಳಿಗೆ ಮೂಲ ಕಾರಣ. ಮುಂದಿನ ಪೀಳಿಗೆಗೆ ಇದನ್ನು ಮನವರಿಕೆ ಮಾಡುವ ತುರ್ತು ಇದೀಗ ಇದೆ ಎಂದು ಅವರು ಹೇಳಿದರು.


ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಂ. ದೇವರಾಜಪ್ಪ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಜತೆಗೆ ಸಮುದಾಯದ ಜತೆ ಬೆರೆಯುವ ಪ್ರಾಯೋಗಿಕ ಅನುಭವ ಅವಶ್ಯಕ. ವಿದ್ಯಾರ್ಥಿಗಳು ಅದರಲ್ಲೂ ಪ್ರಶಿಕ್ಷಣಾರ್ಥಿಗಳು ಕೇವಲ ಓದುವುದು ಮತ್ತು ಬರೆಯುವುದರಲ್ಲಿ ಎಷ್ಟೇ ಉನ್ನತ ಮಟ್ಟದಲ್ಲಿದ್ದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ. ಜತೆಗೆ ಸಮುದಾಯದ ಜತೆ ಹೊಂದಿಕೊಳ್ಳುವ ಪ್ರಾಯೋಗಿಕ ಅನುಭವ ಬಹಳ ಮುಖ್ಯ ಎಂದು ತಿಳಿಸಿದರು.

ಸಮಯ ಮತ್ತು ಸಮುದಾಯಗಳು ಮೌಲ್ಯಾಧಾರಿತ ಚಲನ ಕ್ರಿಯೆಗಳು. ಇವುಗಳ ಜೊತೆ ನಿಕಟ ಸಂಪರ್ಕ ಬೇಕು. ವಿದ್ಯಾರ್ಥಿಗಳಿಗೆ ಕರ್ತವ್ಯ ಪ್ರಜ್ಞೆ ಅತ್ಯವಶ್ಯ. ಕರ್ತವ್ಯ ಮರೆತವರ ಜೀವನ ಮುಂದಿನ ದಿನಗಳಲ್ಲಿ ನಿರರ್ಥಕವಾಗುವುದರಲ್ಲಿ ಸಂದೇಹ ಬೇಡ. ಸಮುದಾಯದ ಸಮಸ್ಯೆಗಳ ಮನವರಿಕೆಯ ಜತೆಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ತಿಳಿಸಿದರು.


ಕಾಲೇಜಿನ ಪ್ರಾಚಾರ್ಯ ಡಾ.ಇ.ಬಿ. ರಾಜೇಶ್ ಮಾತನಾಡಿ ಶಿಕ್ಷಕರು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ. ಶಿಕ್ಷಕರ ವೃತ್ತಿಗಾಗಿ ತರಬೇತಿ ಪಡೆಯುತ್ತಿರುವ ನೀವು ಯಾವುದೇ ಭ್ರಮೆಗಳಲ್ಲಿ ಮುಳುಗದೆ ಅಧ್ಯಯನ ಶೀಲರಾಗಿ ಮಕ್ಕಳಿಗೆ ಉತ್ತಮವಾಗಿ ಬೋಧಿಸಬೇಕು. ಶಿಸ್ತು ಸಂಯಮವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಬೋಧನೆಯನ್ನು ಮಾಡಬೇಕು. ನಿಗದಿಪಡಿಸಿದ ಪಠ್ಯವನ್ನು ಬೋದಿಸುವ ಜತೆಗೆ ಮಕ್ಕಳನ್ನು ಪಠ್ಯೇತರ ಚಟುವಟಿಗಳಲ್ಲಿಯೂ ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಬೇಕು ಎಂದು ಅವರು ಹೇಳಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑