ಅವ್ಯವಸ್ಥೆಯಿಂದ ಕೂಡಿದ ಸುಳ್ಳೇರಿ ಗ್ರಾಮದ ಬೀದಿ
ಚನ್ನಪಟ್ಟಣ:ಅ/07/21. ತಾಲೂಕಿನ ಸುಳ್ಳೇರಿ ಗ್ರಾಮದ ಮೇಗಲಬೀದಿಯ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ಈ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಅವ್ಯವಸ್ಥೆಯ ಆಗರವಾಗಿರುವ ಈ ರಸ್ತೆಯ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಗ್ರಾಪಂ ಆಗಲಿ ಅಥವಾ ಪಂಚಾಯತ್ರಾಜ್ ಇಲಾಖೆಯಾಗಲಿ ಗಮನಹರಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಅತಿ ದೊಡ್ಡ ಬೀದಿ ಎನಿಸಿರುವ ಈ ಬೀದಿಯಲ್ಲಿ 70 ಕ್ಕೂ ಹೆಚ್ಚು ವಾಸದ ಮನೆಗಳಿವೆ. ಅಲ್ಲದೆ, ಈ ಬೀದಿಯ ಮೂಲಕ ಟ್ರಾಕ್ಟರ್, ಸರಕುಸಾಗಾಣಿಕಾ ಮಿನಿಟೆಂಪೋಗಳು ಸೇರಿದಂತೆ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಈ ರಸ್ತೆ ಕೆಸರು ಬಗ್ಗಡವಾಗಿ ಪರಿಣಮಿಸಿರುವ ಕಾರಣ ಈ ರಸ್ತೆಯಲ್ಲಿ ನಡೆದಾಡುವುದೇ ದುಸ್ಥರ ಎಂಬ ಸ್ಥಿತಿ ನಿರ್ಮಾಣ ಗೊಂಡಿದೆ. ಇನ್ನು ದ್ವಿಚಕ್ರವಾಹನ ಸವಾರರು ಕೆಸರು ರಸ್ತೆಯಲ್ಲಿ ಬಿದ್ದು ಕೈಕಾಲು ಮುರಿದು ಕೊಳ್ಳುವ ಪರಿಸ್ಥಿತಿ ನಿರ್ಮಾಣ ಗೊಂಡಿದೆ.
ಕೆಲದಿನಗಳಿಂದ ಸುರಿದ ಮಳೆಯಿಂದಾಗಿ ರಸ್ತೆ ಅವ್ಯವಸ್ಥೆ ಮತ್ತಷ್ಟು ಹೆಚ್ಚಾಗಿದ್ದು, ರಸ್ತೆಗೆ ಕಾಲಿರಿಸಿದರೆ ಜಾರಿ ಬೀಳುವಂತಾಗಿದೆ. ಇಷ್ಟೊಂದು ಅವ್ಯವಸ್ಥೆಯಿಂದ ರಸ್ತೆ ಕೂಡಿದ್ದರೂ ಯಾರೂ ಇದನ್ನು ಸರಿಪಡಿಸುವತ್ತ ಗಮನಹರಿಸದಿರುವುದು ವಿಪರ್ಯಾಸವೇ ಸರಿ. ಪ್ರತಿನಿತ್ಯ ಹೆಚ್ಚು ಜನಸಂಚಾರ ಇರುವ ರಸ್ತೆಯ ಬಗ್ಗೆ ಗ್ರಾಪಂ ಉದಾಸೀನ ಮಾಡುತ್ತಿರುವುದು ಯಾಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಇನ್ನಾದರೂ ಗ್ರಾಪಂ ಆಗಲಿ ಅಥವಾ ಪಂಚಾಯತ್ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ, ಇಲ್ಲ ಕ್ಷೇತ್ರ ಶಾಸಕರಾಗಲಿ ಇತ್ತ ಗಮನಹರಿಸಿ ಕೆಸರು ಬಗ್ಗಡವಾಗಿರುವ ಈ ರಸ್ತೆಯನ್ನು ಸರಿಪಡಿಸಲಿ ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ಮೇಗಲಬೀದಿಯ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯನ್ನು ಸರಿಪಡಿಸಲು ಯಾರೂ ಮುಂದಾಗಿಲ್ಲ. ಇಲ್ಲಿನ ನಿವಾಸಿಗಳ ಪರದಾಟ ದೇವರಿಗೆ ಪ್ರೀತಿ ಎಂಬಂತಾಗಿದ್ದು, ಇನ್ನಾದರೂ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ರಸ್ತೆಯ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗಲಿ.
ಎಸ್.ಎಂ.ರಾಜು, ನಿವೃತ್ತ ಮುಖ್ಯಶಿಕ್ಷಕರು, ಸುಳ್ಳೇರಿ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು