Tel: 7676775624 | Mail: info@yellowandred.in

Language: EN KAN

    Follow us :


ಉತ್ತರಪ್ರದೇಶದಲ್ಲಿ ನಡೆದ ರೈತರ ಹತ್ಯಾಕಾಂಡ ಖಂಡಿಸಿ ಪಂಜಿನ ಮೆರವಣಿಗೆ

Posted date: 09 Oct, 2021

Powered by:     Yellow and Red

ಉತ್ತರಪ್ರದೇಶದಲ್ಲಿ ನಡೆದ ರೈತರ ಹತ್ಯಾಕಾಂಡ ಖಂಡಿಸಿ ಪಂಜಿನ ಮೆರವಣಿಗೆ

ರಾಮನಗರ:ಅ/08/21. ಉತ್ತರ ಪ್ರದೇಶದ ಲಖೀಂಪುರ ಖೇರಿಯ ರೈತರ ಹತ್ಯಾಕಾಂಡ ಪ್ರಕರಣ ಖಂಡಿಸಿ ಹಾಗೂ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ಶುಕ್ರವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿದರು.

ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭಗೊಂಡ ಪಂಜಿನ ಮೆರವಣಿಗೆ ಮೈಸೂರು - ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಹಳೇ ಬಸ್ ನಿಲ್ದಾಣ ವೃತ್ತಕ್ಕೆ ತಲುಪಿತು. ಅಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ಪ್ರತಿಭಟಿಸಿದ ನಂತರ ಮೆರವಣಿಗೆ ಎಂ.ಸಿ.ರಸ್ತೆ ಮೂಲಕ ವಾಟರ್ ಟ್ಯಾಂಕ್ ತಲುಪಿತು.


ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ವಾಟರ್ ಟ್ಯಾಂಕ್ ವೃತ್ತದವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ಗ್ರಾಮಾಂತರ, ಯುವ ಕಾರ್ಯಕರ್ತರು ಹಾಗೂ ಕಿಸಾನ್ ಘಟಕದ ಪ್ರತಿನಿಧಿಗಳು ಒಳಗೊಂಡಂತೆ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರೈತರ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮಗಳಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.


ಈ ವೇಳೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕೇಂದ್ರ ಸರಕಾರದ ಸಚಿವರೊಬ್ಬರ ಪುತ್ರ ಹಗಲಿನಲ್ಲಿಯೇ ರೈತರ ಮೇಲೆ ಕಾರು ಹರಿಸಿ, ಹಲವರ ಸಾವಿಗೆ ಕಾರಣರಾಗಿರುವ ಘಟನೆ, ಅಫಘಾನಿಸ್ತಾನದ ತಾಲಿಬಾನ್‌ಗೆ ಕಡಿಮೆ ಇಲ್ಲ. ಕೇಂದ್ರ ಸರಕಾರಕ್ಕೂ ತಾಲಿಬಾನ್ ಸರಕಾರಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದರು.

ರೈತರ ಮೇಲೆ ವಾಹನ ಚಲಾವಣೆ ಮಾಡಿದ್ದಾರೆ. ಆದರೂ, ಪ್ರಧಾನಿ ನರೇಂದ್ರ ಮೋದಿ ಅವರು, ಈ ತನಕ ಅನುಕಂಪವಾಗಲಿ ಸಾಂತ್ವನದ ಮಾತುಗಳನ್ನಾಗಲಿ ಹೇಳಿಲ್ಲ. ಯಾರು ಸಾವನ್ನಪ್ಪಿದರೂ ಪ್ರಧಾನಿಗೆ ಚಿಂತೆ ಇಲ್ಲ. ಅವರ ಸರಕಾರ ಮಾತ್ರ ಚೆನ್ನಾಗಿರಬೇಕೆಂಬ ನಿಲುವು ಹೊಂದಿದ್ದಾರೆ. ಹಾಗಾಗಿ ಕೇಂದ್ರ ನೀತಿಯನ್ನು ವಿರೋಧಿಸಿ ಜನತೆಯ ಗಮನ ಸೆಳೆಯುವುದಕ್ಕಾಗಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಉತ್ತರ ಪ್ರದೇಶದ ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ, ಅವರ ಮಗ ಮತ್ತು ಸಂಬಂಧಿಗಳು ದುಷ್ಕೃತ್ಯದಲ್ಲಿ ಪಾಲ್ಗೊಂಡು ಗುಂಡಾಗಳಂತೆ ವರ್ತಿಸಿದ್ದಾರೆ. ದೇಶದಲ್ಲಿ 10 ತಿಂಗಳಿನಿಂದ ರೈತರು ಮಾರಕ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೂ, ಪ್ರಧಾನಿ ಮೋದಿ ರೈತರ ಬಳಿ ಬಂದಿಲ್ಲ. ಇದು ರೈತರ ಬಗೆಗೆ ಅವರು ಹೊಂದಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಕಟುವಾಗಿ ಟೀಕಿಸಿದರು.


ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೋದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯರಾದ ದೀಪಿಂದರ್ ಸಿಂಗ್ ಅವರನ್ನು ಬಂಧಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಆರೋಪಿಸಿದರು.


ನಗರಸಭೆ ಸದಸ್ಯ ಕೆ.ಶೇಷಾದ್ರಿ ಮಾತನಾಡಿ, ರೈತರ ಹತ್ಯಾಕಾಂಡ ದೇಶದ ಘೋರ ದುರಂತ. ಅನ್ನದಾತರನ್ನ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ಬಿಜೆಪಿಯು ರೈತ ವಿರೋಧಿ ಎಂಬುದು ಮತ್ತೆ ಸಾಬೀತಾಗಿದೆ. ದೇಶಕ್ಕೆ ಅನ್ನ ನೀಡುವ ರೈತರು ನ್ಯಾಯಕ್ಕಾಗಿ ಹೋರಾಟ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೈಯದ್ ಜಿಯಾವುಲ್ಲಾ, ಮಾಜಿ ಶಾಸಕ ಕೆ.ರಾಜು, ಮುಖಂಡರಾದ ಕೆ.ರಮೇಶ್ ,ಗಾಣಕಲ್ ನಟರಾಜು, ಎ.ಬಿ.ಚೇತನ್ ಕುಮಾರ್ , ಎಲ್ .ಚಂದ್ರಶೇಖರ್ , ಪಾರ್ವತಮ್ಮ, ಕುಮಾರ್ ಮತ್ತಿತರರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑