ನವೆಂಬರ್ 2 ನೇ ತಾರೀಖಿನಂದು ರೈತಸಂಘದಿಂದ ನಾಲ್ಕು ತಾಲ್ಲೂಕು ಕಛೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನೆ
ಚನ್ನಪಟ್ಟಣ: ಅ:23/21. ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಚಾರ, ಲಂಚಗುಳಿತನ ಮತ್ತು ಭ್ರಷ್ಟಚಾರದಿಂದ ಕೂಡಿರುವ ಆಡಳಿತ ವೈಫಲ್ಯವನ್ನು ಖಂಡಿಸುವುದಕ್ಕಾಗಿ ನವೆಂಬರ್ 2 ನೇ ತಾರೀಖಿನ ಮಂಗಳವಾರದಂದು ನಾಲ್ಕು ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ತಾಲ್ಲೂಕು ಕಛೇರಿಗಳ ಮುಂಭಾಗ ಬೆಳಿಗ್ಗೆ 11:00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಜೆ ಸಿ ರಸ್ತೆಯಲ್ಲಿರುವ ರೈತಸಂಘದ ತಾಲ್ಲೂಕು ಕಛೇರಿಯಲ್ಲಿ ಇಂದು ಕರೆದಿದ್ದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ವಿಭಾಗೀಯ ಉಪಾಧ್ಯಕ್ಷ ಕೆ ಮಲ್ಲಯ್ಯ ನವರು ಚರ್ಚಿಸಿ ತೀರ್ಮಾನ ತೆಗೆದುಕೊಂಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲ್ಲೂಕುಗಳಲ್ಲಿ ತಾಲ್ಲೂಕು ಆಡಳಿತಗಳು ಜಿಡ್ಡುಗಟ್ಟಿವೆ. ಪ್ರತಿಯೊಂದು ಸಣ್ಣಪುಟ್ಟ ಕೆಲಸಕ್ಕೂ ಲಂಚದ ಬೇಡಿಕೆಯನ್ನು ಅಧಿಕಾರಿಗಳು ಇಡುತ್ತಿದ್ದಾರೆ. ಭ್ರಷ್ಟಚಾರ ವ್ಯಾಪಕವಾಗಿ ಹರಡಿಕೊಂಡಿದೆ. ತಾಲ್ಲೂಕು ಆಡಳಿತಗಳಲ್ಲಿನ ವೈಫಲ್ಯಗಳು ಎದ್ದುಕಾಣುತ್ತಿವೆ. ಜನಸಾಮಾನ್ಯರಿಗೆ ತೊಂದರೆಗಳಾಗುತ್ತಿವೆ. ಇವುಗಳನ್ನೆಲ್ಲಾ ಜಿಲ್ಲಾಡಳಿತದ ಗಮನಕ್ಕೆ ತರಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಹುತೇಕ ದಾಖಲೆಗಳಲ್ಲಿ ಅಕ್ಷರಗಳು ಮತ್ತು ಪದಗಳು ಬದಲಾವಣೆಯಾಗುತ್ತಿವೆ. ದಾಖಲೆ ನೀಡಿ, ಖುದ್ದುನಿಂತು ಬರೆಸಿದರೂ ಸಹ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಪ್ಪು ಬರೆಯುತ್ತಾರೆ. ಅವರಿಗೆ ಅಕ್ಷರ ಜ್ಞಾನವಿಲ್ಲವೋ ಅಥವಾ ಬೇಕಂತಲೇ ತಪ್ಪು ಮುದ್ರಿಸುತ್ತಾರೋ ಎಂಬುದನ್ನು ಅವರೇ ತಿಳಿಸಬೇಕಾಗಿದೆ. ಉದಾಹರಣೆಗೆ ತಮ್ಮಣ್ಣ ಎಂಬುದನ್ನು ಅವರು ತಿಮ್ಮಣ್ಣ ಎಂದು ಟೈಪಿಸುತ್ತಾರೆ. ಮತ್ತೆ ಅದನ್ನು ತಿದ್ದುಪಡಿ ಮಾಡಿಸಲು ನಾವು ವರ್ಷಾನುಗಟ್ಟಲೆ ಅಲೆಯಬೇಕಾಗಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮುನಿರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್ ಸಿ ಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಕೆ ಎನ್ ರಾಜು, ರಾಜ್ಯ ಕಮಿಟಿಯ ಗೌರವ ಆಹ್ವಾನಿತ ರವಿ, ತಿಮ್ಮೇಗೌಡ, ಸಿದ್ದೇಗೌಡ, ತಾಲ್ಲೂಕು ಅಧ್ಯಕ್ಷ ರಾಮೇಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು