ಕೊರೊನಾ ನಿಯಮ ಪಾಲನೆಯೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ. ತಹಶಿಲ್ದಾರ್ ನಾಗೇಶ್
- ಚನ್ನಪಟ್ಟಣ:ಅ:25/21. ಕೊರೊನಾ ನಿಯಮ ಪಾಲಿಸಿಕೊಂಡು ನಗರದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾಧ್ಯವಾದಷ್ಟು ಅದ್ದೂರಿಯಾಗಿ ನವೆಂಬರ್ 1 ನೇ ತಾರೀಖಿನಂದು ನಾಡಹಬ್ಬವಾದ ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಗುವುದು ಎಂದು ದಂಡಾಧಿಕಾರಿ ನಾಗೇಶ್ ತಿಳಿಸಿದರು.
ಅವರು ಸೋಮವಾರ ಸಂಜೆ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕನ್ನಡ ಪರ ಸಂಘಟನೆಗಳು ಮತ್ತು ಅಧಿಕಾರಿಗಳ ಜೊತೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಮಾತನಾಡಿದರು.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರರಿಗೆ, ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಕನ್ನಡ ಪರ ತೊಡಗಿಸಿಕೊಂಡಿರುವ ಮಾಧ್ಯಮದವರಿಗೆ, ಕನ್ನಡ ಕಾಯಕ ಮಾಡುವ ಮತ್ತಿತರ ಸಾಧಕರಿಗೆ ನಾಡಹಬ್ಬದ ಪ್ರಯುಕ್ತ ವೇದಿಕೆಯ ಮೇಲೆ ಗಣ್ಯರ ಸಮಕ್ಷಮ ಸನ್ಮಾನಿಸಲು ತೀರ್ಮಾನಿಸಲಾಗಿದೆ ಎಂದರು.
ವಿವಿಧ ಶಾಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲೆಮರೆಕಾಯಿಯಂತೆ ಇದ್ದುಕೊಂಡೇ ಕನ್ನಡ ಪರ ಸಾಧನೆಗೈದಂತಹವರನ್ನು ಗುರುತಿಸಲು ಸಹ ತಿಳಿಸಲಾಗಿದೆ. ಎರಡು ದಿನಗೊಳಗಾಗಿ ಅಂತಹ ಸಾಧಕರ ಹೆಸರನ್ನು ಸೂಚಿಸಬಹುದಾಗಿದೆ. ಪ್ರೋಟೋಕಾಲ್ ಪ್ರಕಾರ ಶಾಸಕರಾದಿಯಾಗಿ ಎಲ್ಲರಿಗೂ ಆಹ್ವಾನ ನೀಡಲಾಗುತ್ತದೆ. ಅಂದು ತಾಲ್ಲೂಕಿನ ಎಲ್ಲಾ ನೆಲ-ಜಲ ಮತ್ತು ಕನ್ನಡಪರ ಹೋರಾಟದ ಸಂಘಟನೆಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಪುರ ಠಾಣೆಯ ಉಪನಿರೀಕ್ಷಕಿ ಮಮತಾ, ತಾಲ್ಲೂಕು ಸರ್ಕಾರಿ ನೌಕರರ ಅಧ್ಯಕ್ಷ ಚಂದ್ರಶೇಖರ, ಟಿಪಿಇಓ ಶಿವಣ್ಣ, ಶಿಕ್ಷಕ ರಾಜಶೇಖರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು