ಇಳಿ ವಯಸ್ಸಿನಲ್ಲಿ ಒಂದಾದ ಅಮರ ಪ್ರೇಮಿಗಳು
ಮೈಸೂರು: ಮೇಲುಕೋಟೆ. ನಲವತ್ತೈದು ವರ್ಷಗಳ ಹಿಂದೆ ಮೈಸೂರಿನ ಹೆಬ್ಬಾಳ ಗ್ರಾಮದಲ್ಲಿ ಅಕ್ಕಪಕ್ಕದಲ್ಲಿ ನೆಲೆಸಿದ್ದ ಯುವಕ-ಯುವತಿ ಪ್ರೀತಿಸಿ ಮದುವೆಯಾಗಬೇಕು ಎಂದು ಹಂಬಲಿಸುತ್ತಿದ್ದಾಗ, ಯುವತಿ ಮನೆಯವರು ಒಪ್ಪದೆ ಬೇರೋಬ್ಬನ ಜೊತೆ ಯುವತಿಗೆ ಮದುವೆ ಮಾಡಿಬಿಟ್ಟರು. ಆದರೆ ಇಪ್ಪತ್ತು ವರ್ಷದ ಯುವಕ ಮಾತ್ರ ಆಕೆಯ ನೆನಪಲ್ಲೇ ಅಮರ ಪ್ರೇಮಿಯಾಗಿಯೇ ಉಳಿದುಬಿಟ್ಟ. ಚಿಕ್ಕಣ್ಣ ಮತ್ತು ಜಯಮ್ಮ ಎಂಬ ಅಮರ ಪ್ರೇಮಿಗಳಿಗೆ ಪ್ರೇಮದೇವತೆಗಳು ನಿರಾಸೆ ಮಾಡಲಿಲ್ಲ. ತಡವಾಗಿ ತಥಾಸ್ತು ಎಂದಿದ್ದರಿಂದ ಇಂದು ಅರವತ್ತೈದರ ಇಳಿ ವಯಸ್ಸಿನಲ್ಲಿ ಹಸೆಮಣೆ ಏರಿ ಪ್ರೀತಿಗೆ ಅರ್ಥ ಕೊಟ್ಟಿದ್ದಾರೆ.
ಅರಮನೆ ನಗರಿ ಎಂದೇ ಹೆಸರಾದ ಸಾಂಸ್ಕೃತಿಕ ನಗರ ಮೈಸೂರಿನ ಹೆಬ್ಬಾಳ ದಲ್ಲಿ ಕಳೆದ ನಲವತ್ತೈದು ವರ್ಷಗಳ ಹಿಂದೆ ಇಪ್ಪತ್ತು ವರ್ಷಗಳ ಯುವಕ ಚಿಕ್ಕಣ್ಣ ಮತ್ತು ಜಯಮ್ಮ ಗಾಢವಾಗಿ ಪ್ರೀತಿಸುತ್ತಾರೆ. ಜಯಮ್ಮ ನ ಮನೆಯವರು ಚಿಕ್ಕಣ್ಣ ನಿಗೆ ಮದುವೆ ಮಾಡಿಕೊಡಲು ಸುತರಾಂ ಒಪ್ಪದೆ, ಬೇರೊಂದು ಗಂಡಿಗೆ ಮದುವೆ ಮಾಡಿಬಿಡುತ್ತಾರೆ. ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಚಿಕ್ಕಣ್ಣ ಮದುವೆಯಾಗದೆ ಅಮರ ಪ್ರೇಮಿಯಾಗಿಯೇ ಉಳಿದುಬಿಡುತ್ತಾನೆ. ಅದು ಬರೋಬ್ಬರಿ ನಲವತ್ತೈದು ವರ್ಷಗಳ ಕಾಲ.
ಜಯಮ್ಮ ಮದುವೆಯಾಗಿ ನಲವತ್ತೈದು ವರ್ಷಗಳು ಕಳೆದರೂ ಆಕೆಗೆ ಮಕ್ಕಳ ಭಾಗ್ಯ ದೊರೆಯಲಿಲ್ಲ. ಇತ್ತೀಚೆಗೆ ಆಕೆಯ ಪತಿ ಪರಲೋಕಕ್ಕೆ ಪಯಣ ಬೆಳೆಸಿಬಿಟ್ಟ. ಅತ್ತ ಪತಿಯೂ ಇಲ್ಲದೆ, ಇತ್ತ ಮಕ್ಕಳು ಇಲ್ಲದೆ ಜಯಮ್ಮ ಒಬ್ವಂಟಿಯಾಗಿ ಜೀವನ ಕಳೆಯಬೇಕಾಯಿತು. ಇದನ್ನೆಲ್ಲಾ ಕೇಳಿ, ನೋಡಿ ತಿಳಿದುಕೊಂಡ ಅಮರಪ್ರೇಮಿ ಚಿಕ್ಕಣ್ಣ ತನ್ನ ಕುಟುಂಬದವರ ಜೊತೆ ಮಾತನಾಡಿ ಆಕೆಯ ಮನವೊಲಿಸುತ್ತಾನೆ. ಕುಟುಂಬದವರೊಡಗೂಡಿ ತನ್ನ ಆರಾಧ್ಯದೈವ ಮೇಲುಕೋಟೆ ಚಲುವನಾರಾಯಣ ಸ್ವಾಮಿ ಸನ್ನಿಧಿಯಲ್ಲಿ, ಶ್ರೀನಿವಾಸ ಗುರೂಜಿಯವರ ಆಶ್ರಮದಲ್ಲಿ ಹಸೆಮಣೆ ಏರುವ ಮೂಲಕ ಪ್ರೇಮಕ್ಕೆ ಹೊಸಭಾಷ್ಯ ಬರೆದಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು