ಅಭ್ಯರ್ಥಿಗಳಿಗೆ ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ- ಗಂಗಾಧರ್
ರಾಮನಗರ, ಡಿ.04/21. ನಗರದ ಶಾಂತಿನಿಕೇತನ ಕಾಲೇಜಿನಲ್ಲಿ ದಿನಾಂಕ: 03.12.2021 ರಂದು ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್ ``ಸಿ” ತಾಂತ್ರಿಕೇತರ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಪರೀಕ್ಷೆಗೂ ಮುನ್ನ ಪರೀಕ್ಷಾ ಕೇಂದ್ರಕ್ಕೆ ಭೇಟಿನೀಡಿ ಕೋವಿಡ್–19 ರ ಸಂಬಂಧ ಕೈಗೊಂಡಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳ ಮೇಲ್ವಿಚಾರಣೆ ಮಾಡಿದರು.
ಅಭ್ಯರ್ಥಿಗಳನ್ನು ಕುರಿತು ಮಾತನಾಡುತ್ತಾ ಕೋವಿಡ್ ಸೋಂಕು ಹರಡದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ಧೈರ್ಯವಾಗಿ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಜೊತೆಗೆ ಕೋವಿಡ್-19 ರ 3ನೇ ಅಲೆ ನಿಯಂತ್ರಿಸಬೇಕಾದರೆ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳೆಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆಯಬೇಕು ಇದುವರೆಗೂ 1 ನೇ ಡೋಸ್ ಲಸಿಕೆ ಪಡೆಯದ, ಮತ್ತು 1 ಡೋಸ್ ಲಸಿಕೆ ಪಡೆದು 2ನೇ ಡೋಸ್ ಪಡೆಯದೇ ಇರುವವರಿಗೆ ಪ್ರೇರೇಪಿಸಿ ಲಸಿಕೆ ಪಡೆಯುವಂತೆ ಸಹಕರಿಸಲು ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಕೈಗಳ ಸ್ವಚ್ಛತೆ, ಜೊತೆಗೆ ವೈಯಕ್ತಿಕ, ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜ್ವರ, ನೆಗಡಿ, ಗಂಟಲು ನೋವು, ಇತ್ಯಾದಿ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಪ್ರಾಂಶುಪಾಲರಾದ ಮಾನಸ, ಪರೀಕ್ಷಾ ಕೇಂದ್ರದ ವೀಕ್ಷಕರಾದ ಚಿನ್ನಸ್ವಾಮಿ, ಅಶ್ವಿನಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ವೃಂದ, ಆರೋಗ್ಯ ನಿರೀಕ್ಷಣಾಧಿಕಾರಿ ಭರತ್, ಪೋಲಿಸ್ ಸಿಬ್ಬಂದಿಗಳಾದ ಸರೋಜಮ್ಮ, ಗಂಗಮಾರಯ್ಯ, ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ಅಭ್ಯರ್ಥಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು