ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ತೀಕ ಮಾಸದ ಪ್ರಯುಕ್ತ ಪ್ರತಿವರ್ಷ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಅದರಂತೆ ಶನಿವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಅಮ್ಮನ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಹೋಮ ಇನ್ನಿತರ ಪೂಜಾ ಕೈಕರ್ಯಗಳು ನೇರವೇರಿದವು.
ಲಕ್ಷ ದೀಪೋತ್ಸವದ ಪ್ರಯುಕ್ತ ಕ್ಷೇತ್ರಕ್ಕೆ ಎಡಿಜಿಪಿ ಭಾಸ್ಕರ್ ರಾವ್, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ, ದೇವಿಯ ದರ್ಶನ ಪಡೆದರು. ಕ್ಷೇತ್ರದಲ್ಲಿ ಪ್ರತಿವರ್ಷ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಇತ್ತೀಚೆಗೆ ಲೋಕಾಪರ್ಣೆಗೊಂಡ ವಿಶ್ವದ ಅತಿ ಎತ್ತರದ ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಇದೇವೇಳೆ ಪತ್ರಕರ್ತ ಗೋ.ರಾ ಶ್ರೀನಿವಾಸ್ ರವರ ಜಗನ್ಮಾತೆಯ ವಿಶ್ವರೂಪ ದರ್ಶನ ಪುಸ್ತಕವನ್ನು ಎಡಿಜಿಪಿ ಭಾಸ್ಕರ್ ರಾವ್ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಭಾಸ್ಕರ್ ರಾವ್, ಕ್ಷೇತ್ರದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ವಿಗ್ರಹದ ಮಾಹಿತಿ ತಿಳಿದು, ದೇವಿಯ ದರ್ಶನ ಮಾಡಬೇಕು ಎಂಬ ಆಶಯದಿಂದ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ದೇವಿಯ ಸೌಮ್ಯರೂಪದ ಮೂರ್ತಿ ನೋಡಿ ಮನಸ್ಸಿಗೆ ಆನಂದವಾಗಿದೆ ಎಂದು ತಿಳಿಸಿದರು.
*ದೀಪೋತ್ಸವಕ್ಕೆ ನಿಖಿಲ್ ಚಾಲನೆ:*
ಸಂಜೆ ನಡೆದ ದೀಪೋತ್ಸವ ಕಾರ್ಯಕ್ರಮಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು. ದೇವರ ದರ್ಶನ ಪಡೆದ ಅವರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆಯ ಸ್ವಕ್ಷೇತ್ರದಲ್ಲಿ ತಾಯಿ ಚಾಮುಂಡೇಶ್ವರಿ ಯ ಪುಣ್ಯಕ್ಷೇತ್ರ ಹಾಗೂ ದೇವಿಯ ಅತಿ ಎತ್ತರದ ಪಂಚಲೋಹ ಮೂರ್ತಿ ಇರುವುದು
ತುಂಬಾ ಸಂತಷದ ವಿಚಾರ. ಕ್ಷೇತ್ರಕ್ಕೆ ಇದು ನನ್ನ ಮೊದಲ ಭೇಟಿಯಾಗಿದ್ದು, ತಾಯಿಯ ವಿಗ್ರಹವನ್ನು ವರ್ಣಿಸಲು ಸಾಧ್ಯವಾಗುತ್ತಿಲ್ಲ. ದೇವಿಯ ಬಳಿ ಸರ್ವರಿಗೂ ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಚಿತ್ರನಟ ಶಿವರಾಂರವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಚಿಕ್ಕದಿಂದಲೂ ಅವರ ಸಿನಿಮಾ ನೋಡಿ ಬೆಳೆದವರು ನಾವು. ಪುನೀತ್ ಸರ್ ವರ ನಿಧನದ ನೋವು ಮಾಸುವ ಮೊದಲೇ ಶಿವರಾಂರವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ
.
*ಅಪ್ಪಾಜಿಗೌಡ ಗೆಲ್ಲಿಸುವ ಪಣ:*
ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಅಪ್ಪಾಜಿಗೌಡರನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿದೆ. ಈ ಹಿಂದೆ ಅಲ್ಲಿನ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಡದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಅಲ್ಲಿನ ಸೋಲು ನನಗೆ ನಿರಾಸೆ ತಂದಿಲ್ಲ. ಅಲ್ಲಿನ ಏಳು ವಿಧಾನಸಭಾ ಕ್ಷೇತ್ರದ ಶಾಸಕರ ಜೊತೆಗೂಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನನ್ನದ್ದಾಗಿದೆ. ಮಂಡ್ಯದಲ್ಲಿ ನಮ್ಮ ಪಕ್ಷದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹೆಚ್ಚಾಗಿರುವ ಕಾರಣ ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ, ತಹಸೀಲ್ದಾರ್ ಎಲ್.ನಾಗೇಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ ಮಲಾಲಿ, ಡಿವೈಎಸ್ಪಿ ಕೆ.ಎನ್.ರಮೇಶ್ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು