ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ

ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಕೊಲೆಯ ವಿಷಯ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆಯಲ್ಲಿ ಸಂಭವಿಸಿದೆ.
ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ, ಮನೆಯಲ್ಲಿ ಮಲಗಿದ್ದ ವೃದ್ಧೆ ಜಯಮ್ಮ(65) ರನ್ನು ಉಸಿರುಗಟ್ಟಿಸಿ, ಮಚ್ಚಿನಿಂದ ಹೊಡೆದು ಕೊಲೆಗೈದಿದ್ದಾನೆ. ಆ ವೇಳೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದು ಮನೆಗೆ ಬಂದ ವೃದ್ದೆಯ ಪುತ್ರ ಸಿದ್ದರಾಜು ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸಿದ್ದರಾಜು ಬಂದ ದ್ವಿಚಕ್ರ ವಾಹನದಲ್ಲಿಯೇ ಕೊಲೆಗಾರ ಸ್ಥಳದಿಂದ ಪರಾರಿಯಾಗಿದ್ದು, ದ್ವಿಚಕ್ರ ವಾಹನವನ್ನು ಚನ್ನಪಟ್ಟಣ ನಗರದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಹೋಗಿದ್ದಾನೆ.
ಗಂಭೀರ ಗಾಯಗೊಂಡ ಸಿದ್ದರಾಜುನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ ಈ ಕೃತ್ಯವೆಸಗಿದ್ದು ಯಾರೋ ಅಪರಿಚಿತ ಎಂದೇ ಭಾವಿಸಲಾಗಿತ್ತು.
ಸಿಸಿ ಟಿವಿ ದೃಶ್ಯಾವಳಿ ಸೇರಿದಂತೆ ಹಲವಾರು ಮಾಹಿತಿಗಳನ್ನು ಕಲೆಹಾಕಿ ಪ್ರಕರಣ ದಾಖಲಾದ ಮೂರೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಅಕ್ಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆ ಕೊಲೆ ಆರೋಪಿ ಬೇರೆ ಯಾರೂ ಆಗಿಲ್ಲದೆ, ವೃದ್ದೆಯಮನೆಯ ಹಿಂಬಂದಿ ಮನೆಯ ನಿವಾಸಿ ಎಂಬುದು ಆಶ್ಚರ್ಯವಾದರೂ ಸತ್ಯವಾಗಿದೆ.
ಸಿದ್ದರಾಜು ಅವರ ಹಿಂಬದಿ ಮನೆಯ ನಿವಾಸಿ ರವಿ(40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯ ಮನೆಯಲ್ಲಿ ಒಡವೆ ದೋಚಲು ರವಿ ಸ್ಕೆಚ್ ಹಾಕಿದ್ದ. ಶುಕ್ರವಾರ ಮುಂಜಾನೆ ಸಿದ್ದರಾಜು ತೋಟಕ್ಕೆ ಹೋಗುವುದನ್ನೇ ಕಾದು ಕುಳಿತು ಮನೆಗೆ ನುಗ್ಗಿ ಜಯಮ್ಮರನ್ನು ಕೊಂದಿದ್ದಾನೆ. ಚಿನ್ನಕ್ಕಾಗಿ ಮನೆಯನ್ನು ಜಾಲಾಡುವ ವೇಳೆ ಮನೆಗೆ ಸಿದ್ದರಾಜು ಬರುತ್ತಿದ್ದಂತೆ ಗಲಿಬಿಲಿಗೊಂಡ ರವಿ, ಬಾಗಿಲ ಹಿಂಬದಿ ಅವಿತುಕೊಂಡು ಬಲವಾದ ಆಯುಧದಿಂದ ತಲೆಗೆ ಹೊಡೆದು ಪರಾರಿಯಾಗಿದ್ದ. ಗ್ರಾಮದಲ್ಲಿನ ಸಿಸಿಟಿವಿ ಹಾಗೂ ಇನ್ನಿತರ ಮಾಹಿತಿಯನ್ನು ಕಲೆಹಾಕಿದ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಬಿ ಶಿವಕುಮಾರ್ ಹಾಗೂ ಅಕ್ಕೂರು ಠಾಣೆ ಪಿಎಸ್ಐ ಶ್ರೀಕಾಂತ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು