ಚನ್ನಪಟ್ಟಣದ ಕೋರ್ಟ್ ಪಕ್ಕದಲ್ಲಿನ ಓವರ್ ಟ್ಯಾಂಕ್ ನ ಪೈಪ್ ನಲ್ಲಿ ಸಿಕ್ಕ ಮಹಿಳೆಯ ಗುರುತಿನ ಚಹರೆ ಪತ್ತೆ ಹಚ್ಚಿದ ಪೋಲೀಸರು
ನಗರಿಗರು ಕುಡಿಯುವ ಬೃಹತ್ ನೀರಿನ ಟ್ಯಾಂಕ್ ನ ಪೈಪ್ ಗಳಲ್ಲಿ ಮಹಿಳೆಯ ಕಾಲು ಮತ್ತು ಮಾಂಸದ ಮುದ್ದೆ ಕಾಣಿಸಿಕೊಂಡು ಚನ್ನಪಟ್ಟಣ ನಗರದ ಜನತೆಯ ನಿದ್ದೆಗೆಡಿಸಿದ್ದ ಪ್ರಕರಣಕ್ಕೆ ಪೋಲೀಸರು ಟ್ವಿಸ್ಟ್ ನೀಡಿದ್ದಾರೆ. ನೀರಿನ ಪೈಪಿನಲ್ಲಿ ಸಿಕ್ಕ ಕಾಲು ಮತ್ತು ಮಾಂಸದ ಮುದ್ದೆ ತನಿಖೆ ಮತ್ತಷ್ಟು ಪ್ರಗತಿ ಕಂಡಿದ್ದು ಶೀಘ್ರದಲ್ಲೇ ಆರೋಪಿಗಳ ಸೆರೆ ಹಿಡಿಯಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ತಿಳಿಸಿದ್ದಾರೆ.
ಚನ್ನಪಟ್ಟಣ ಕೋರ್ಟ್ ಪಕ್ಕದಲ್ಲಿ ಸಿಕ್ಕ ಅಪರಿಚಿತ ಮಹಿಳೆಯ ಮೃತ ದೇಹದ ಚಹರೆ ಅಂತೂ ಪತ್ತೆಯಾಗಿದೆ. ಪೋಲಿಸ್ ಇಲಾಖೆಗೆ ಕಠಿಣ ಸವಾಲಾಗಿದ್ದ ಪ್ರಕರಣವನ್ನು ಬೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
*ಏನಿದು ಪ್ರಕರಣ …!*
ಕಳೆದ ವರ್ಷ 2021 ರ ಅಕ್ಟೋಬರ್ ತಿಂಗಳಿನಲ್ಲಿ ಚನ್ನಪಟ್ಟಣ ಹೃದಯ ಭಾಗವಾದ ಕೋರ್ಟ್ ಪಕ್ಕದ ಓವರ್ ಟ್ಯಾಂಕ್ ನಲ್ಲಿ ಅಪರಿಚಿತ ಮಹಿಳೆಯ ತುಂಡಾದ ಕಾಲು ಪತ್ತೆಯಾಗಿತ್ತು. ಆ ಮಹಿಳೆ ಯಾರು..? ಟ್ಯಾಂಕ್ ನಲ್ಲಿ ಮಹಿಳೆ ಶವ ಹೇಗೆ ಬಂತು…? ಕೊಲೆ ಮಾಡಿ ಮಹಿಳೆಯನ್ನ ಇಲ್ಲಿ ತಂದು ಹಾಕಲಾಗಿದಿಯಾ..? ಈ ಮಹಿಳೆ ಹೆಸರೇನು..? ದೇಹದ ಉಳಿದ ಭಾಗ ಎಲ್ಲಿ..? ಹೀಗೆ ಹತ್ತು ಹಲವು ಪ್ರಶ್ನೆಗಳು ಪೋಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.
ಇದರ ಜೊತೆ ಜೊತೆಗೆ ಕಾಲು ಸಿಕ್ಕ ನಾಲ್ಕೈದು ದಿನಗಳ ಮಧ್ಯ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೇ ಮೃತ ದೇಹದ ಅಂಗಾಂಗಳು ಪತ್ತೆಯಾಗಿತ್ತು. ನಗರದ ಮಂಗಳವಾರಪೇಟೆಯ 10ನೇ ಕ್ರಾಸ್ ನ ಕುಡಿಯುವ ನೀರಿನ ಪೈಪ್ ನಲ್ಲಿ ಮತ್ತೆ ಮಾಂಸದ ಮುದ್ದೆ ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತಷ್ಟು ಮೂಡಿಸಿತ್ತು.
*ಘಟನೆ ತೀವ್ರ ತನಿಖೆ ಕೈಗೊಂಡಿದ್ದ ಪೋಲೀಸರು*
ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್ನಲ್ಲಿ ಅಪರಿಚಿತ ಮಹಿಳೆ ಶವದ ಕಾಲೊಂದು ಪತ್ತೆಯಾಗಿತ್ತು. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿ ಮಾತ್ರ ಪತ್ತೆಯಾಗಿತ್ತು. ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ…! ಅಥವಾ ಕೊಲೆ ಮಾಡಿ ದೇಹವನ್ನ ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ನಡುವೆ ಈ ಟ್ಯಾಂಕ್ ನಿಂದ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಕೂಡ ಹಲವು ದಿನಗಳಿಂದ ಸ್ಥಗಿತಗೊಳಿಸಲಾಗಿತ್ತು.
ಕಳೆದ ಹಲವು ತಿಂಗಳಿಂದ ಟ್ಯಾಂಕ್ನಿಂದ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಿ. ಎಲ್ಲೆಲ್ಲಿ ವಾಲ್ ಪೈಪ್ ಗಳಿವೆ ಅಲ್ಲಲ್ಲಿ ಪೈಪುಗಳನ್ನು ಕತ್ತರಿಸಿ ದೇಹ ಒಂದು ವೇಳೆ ನೀರಿನ ಪೈಪ್ ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿದೆಂದು ಹೊರ ತೆಗೆಯುವ ಕಾರ್ಯಾಚರಣೆ ಕೂಡ ನಡೆದಿತ್ತು.
ನಗರದ ಹೃದಯ ಭಾಗವಾದ ಕೋರ್ಟ್ ಪಕ್ಕದ ಓವರ್ ಟ್ಯಾಂಕ್ ನ ಪೈಪ್ ನಲ್ಲಿ ಕಾಲು ಪತ್ತೆಯಾಗಿ ಇಲ್ಲಿನ ಜನರನ್ನ ತೀವ್ರ ಆತಂಕಕ್ಕೀಡು ಮಾಡಿತ್ತು. ಇದೀಗ ಅದರ ಕೂಗಳತೆ ದೂರದಲ್ಲಿನ ಪೈಪ್ ನಲ್ಲಿ ಮೂಳೆ ಹಾಗೂ ಮಾಂಸದ ಮುದ್ದೆ ಪತ್ತೆಯಾಗಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿತ್ತು. ಇದಲ್ಲದೆ ಅಂದು ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆದ ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು.
ನಂತರ ಅಂದು ಸಿಕ್ಕ ಮಾಂಸದ ಮುದ್ದೆಯನ್ನ ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್ ಎಸ್ ಎಲ್ ಗೆ ಕಳುಹಿಸಿಕೊಟ್ಟಿದ್ದರು. ಸ್ಥಳದಲ್ಲಿ ಕೊಳೆತ ಮಾಂಸದ ವಾಸನೆಯಿಂದ ಸಾರ್ವಜನಿಕರು ಆತಂಕ್ಕೀಡಾದ ಹಿನ್ನಲೆಯಲ್ಲಿ ಕಾರ್ಯಾಚರಣೆ ಇನ್ನಷ್ಟು ಮುಂದುವರೆಸಲಾಗಿತ್ತು. ಅಂದು ಸಿಕ್ಕ ಮಾಂಸದ ಮುದ್ದೆ ಅದೇ ಮಹಿಳೆಗೆ ಸೇರಿದೆಯೋ ಅಥವಾ ಬೇರೆಯವರಿಗೆ ಸೇರಿದೆಯೋ ಎಂಬುದರ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದೆ.
*ಅಂತೂ ಮಹಿಳೆ ಚಹರೆ ಪತ್ತೆ…!*
ಈ ಪ್ರಕರಣವನ್ನು ಪೋಲೀಸರು ಚಾಲೆಂಜ್ ಆಗಿ ಸ್ವೀಕರಿಸಿದ್ದರು. ಕೋಡಿಹಳ್ಳಿ ಠಾಣೆಯ ಪಿಎಸ್ಐ ಹಾಗೂ ಕನಕಪುರ ಗ್ರಾಮಾಂತರ ಠಾಣೆಯ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಯಿತು. ಮೊದಲಿಗೆ ಮೃತ ಮಹಿಳೆ ಯಾರು…? ಎಂಬುದರ ಬಗ್ಗೆ ತನಿಖೆ ಆರಂಭಿಸಿ ಪೋಲೀಸರು ಅಂತೂ ಮಹಿಳೆ ಚಹರೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಮನಗರ ಎಸ್ಪಿ ಸಂತೋಷ ಬಾಬು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಆರಂಭಿಸಿದ ಪೋಲೀಸರು ಮೊದಲು ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣ ಬಗ್ಗೆ ಕಲೆ ಹಾಕುತ್ತಾರೆ. ಈ ನಡುವೆ ಜಿಲ್ಲೆಯ ಅನಾಥಾಶ್ರಮದಿಂದ ಮೂವರು ಮಹಿಳೆಯರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಅನಂತರ ತನಿಖೆ ನಡೆಸಿದ ಅವರಿಗೆ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರು ಮದುವೆಯಾಗಿರುವುದಾಗಿ ಮಾಹಿತಿ ಕಲೆ ಹಾಕುತ್ತಾರೆ. ಅದರಲ್ಲಿ ಓರ್ವ ಮಹಿಳೆ ಎಷ್ಟೇ ಹುಡುಕಿದರೂ ಕೂಡ ಪತ್ತೆಯಾಗುವುದಿಲ್ಲ. ಇದೇ ಜಾಡನ್ನ ಹುಡುಕಿಕೊಂಡು ಹೋದ ಪೋಲೀಸರಿಗೆ ಟ್ಯಾಂಕ್ ನಲ್ಲಿ ಸಿಕ್ಕ ವಸ್ತುಗಳು ಹಾಗೂ ತುಂಡಾದ ಕಾಲುಗಳು, ಸೀರೆ, ಚಪ್ಪಲಿ ಎಲ್ಲವೂ ಕೂಡ ನಾಪತ್ತೆಯಾದ ಮಹಿಳೆಗೆ ಸಾಮ್ಯತೆ ಇರುವುದು ಕಂಡು ಬರುತ್ತದೆ.
ಸತತ ಆರೇಳು ತಿಂಗಳಿಂದ ತನಿಖೆ ನಡೆಸಿದ ಪೋಲೀಸರಿಗೆ ಈಗ ಮಹಿಳೆ ಯಾರು…? ಎಂಬ ಪ್ರಶ್ನೆಗೆ ಉತ್ತರ ಸಿಕ್ಕದೆ. ಈಗ ಪೋಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಕೆಗೆ ಯಾರ ಜೊತೆ ಸಂಪರ್ಕ ಇತ್ತು..! ಎಲ್ಲಿಂದ ಈಕೆ ಬಂದಿದ್ದಾಳೆ..! ಈಕೆ ಅನಾಥಶ್ರಮಕ್ಕೆ ಏಕೆ ಬಂದಳು..! ಎಂಬಿತ್ಯಾದಿಗಳ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಶೀರ್ಘದಲ್ಲೆ ಅರೋಪಿಯನ್ನ ಸೆರೆ ಹಿಡಿಯಲಾಗುವುದು ಎಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು