Tel: 7676775624 | Mail: info@yellowandred.in

Language: EN KAN

    Follow us :


ಅಂಬೇಡ್ಕರ್ ಹೆಸರೇಳಿ ಬದುಕುವುದು ಬೇಡ ಅವರ ದಾರಿಯಲ್ಲಿ ನಡೆಯೋಣಾ ಭೀಮರಾವ್ ಯಶವಂತರಾವ್ ಅಂಬೇಡ್ಕರ್

Posted date: 24 Apr, 2022

Powered by:     Yellow and Red

ಅಂಬೇಡ್ಕರ್ ಹೆಸರೇಳಿ ಬದುಕುವುದು ಬೇಡ ಅವರ ದಾರಿಯಲ್ಲಿ ನಡೆಯೋಣಾ ಭೀಮರಾವ್ ಯಶವಂತರಾವ್ ಅಂಬೇಡ್ಕರ್

ಅಂಬೇಡ್ಕರ್ ರವರ ಹೆಸರೇಳಿಕೊಂಡು ಬದುಕುವ ಬದುಕು ನಮಗೆ ಬೇಡ. ಅವರ ಕ್ರಾಂತಿಯ ದಾರಿಯಲ್ಲಿ ನಾವೆಲ್ಲರೂ ಸಾಗಿ ಅವರ ಕನಸು-ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಜೈ ಭೀಮ್ ಎಂದರೆ ಅಂಬೇಡ್ಕರ್ ಅವರ ಕನಸು ಆಶಯಗಳು ಈಡೇರುವುದಿಲ್ಲ. ನಾವೆಲ್ಲರೂ ವಿದ್ಯಾವಂತರಾಗಿ, ಜಾಗೃತರಾಗಿ ಅಂಬೇಡ್ಕರ್ ರವರ ಚಿಂತನೆ, ವಿಚಾರಧಾರೆ, ಕ್ರಾಂತಿಯ ದಾರಿಯಲ್ಲಿ ನಡೆಯುವ ಮೂಲಕ  ಅವರ ಕನಸು ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಹಾಗೂ  ಭಾರತೀಯ ಭೌದ್ಧ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಭೀಮರಾವ್ ಯಶ್ವಂತ್‍ರಾವ್ ಅಂಬೇಡ್ಕರ್ ಅವರು ತಿಳಿಸಿದರು.


ಅವರು ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಹಬ್ಬ ಆಚರಣಾ ಸಮಿತಿಯ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಮಹಾನ್ ಮಾನವತಾವಾದಿ ಡಾ.ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ಜಯಂತಿ ಪ್ರಯುಕ್ತ ನಗರದ ಸಾತನೂರು ರಸ್ತೆಯ ಹೌಸಿಂಗ್ ಬೋರ್ಡ್ ಮೈದಾನದಲ್ಲಿ ಇಂದು ಅದ್ದೂರಿ ಹಾಗೂ ವಿಶೇಷವಾಗಿ ಆಯೋಜಿಸಿದ್ದ  ಸ್ವಾಭಿಮಾನಿ ಅಂಬೇಡ್ಕರ್ ಹಬ್ಬ-2022 ಕಾರ್ಯಕ್ರಮವನ್ನು ಬುದ್ಧ ಪ್ರತಿಮೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ದೇಶದಲ್ಲಿ ಇಂದು ಸಾಮಾಜಿಕ ಬದಲಾವಣೆ ಆಗಿದೆ ಎಂದರೆ ಅದು ಅಂಬೇಡ್ಕರ್ ರವರ ಕೊಡುಗೆ ಆಗಿದೆ. ಅಪಾರ ದೇಶದ ಸರ್ವ ಜನಾಂಗದ ಏಳಿಗೆ, ಸಮ ಸಮಾಜದ ಆಶಯವನ್ನು ಹೊಂದಿ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಬರೆದು ಅಂಬೇಡ್ಕರ್ ಕೊಡುಗೆ ನೀಡಿದ್ದಾರೆ. ಆದರೆ ಇಂದು ದೇಶದಲ್ಲಿ  ವಾತಾವರಣ ಅಷ್ಟೊಂದು ಸರಿಯಾಗಿಲ್ಲ. ಧರ್ಮ, ಜಾತಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಅವರ ವಿರೋಧಿಗಳು ಅಂಬೇಡ್ಕರ್  ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಾ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಹಕ್ಕು ರಕ್ಷಣೆಯನ್ನು ನಾಶ ಮಾಡಲು ಹೊರಟಿದ್ದಾರೆ.ಇದಕ್ಕೆ ನಾವುಗಳು ಅವಕಾಶ ಮಾಡಿಕೊಡಬಾರದು. ಅಂಬೇಡ್ಕರ್ ಅವರು ಯಾವ ರೀತಿ ಹೋರಾಟ, ಕ್ರಾಂತಿ ಮಾಡಿದರು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಂಡು ಜಾಗೃತರಾಗಬೇಕು ಎಂದು ಒತ್ತಿ ಹೇಳಿದರು.

                                                                                *ಭೀಮರಾವ್ ಯಶವಂತರಾವ್ ಅಂಬೇಡ್ಕರ್ ರವರು ಹಿಂದಿಯಲ್ಲಿ ಮಾಡಿದ ಭಾಷಣವನ್ನು ಚನ್ನಪಟ್ಟಣ ಪುರ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹರೀಶ್ ರವರು ಕನ್ನಡಕ್ಕೆ ತರ್ಜುಮೆ ಮಾಡಿದರು.

ಮುಂದೆ ದೇಶದಲ್ಲಿ ಜನಗಣತಿ ಪ್ರಾರಂಭವಾಗುತ್ತದೆ. ಅಂಬೇಡ್ಕರ್ ರವರ ಕನಸಿನಂತೆ ನಾವೆಲ್ಲರೂ ಭೌದ್ಧ ಧರ್ಮ ಸೇರಬೇಕಾಗಿದೆ. ಜನಗಣತಿಯಲ್ಲಿ ನಮ್ಮ ಜಾತಿ ಜೊತೆಗೆ ಭೌದ್ಧ ಧರ್ಮವನ್ನು ಸೇರಿಸಬೇಕು ಎಂದು ಅವರು ಕರೆ ನೀಡಿ, ಕಾರ್ಯಕ್ರಮದ ಆಯೋಜಕರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


*ಅಂಬೇಡ್ಕರ್ ಕನಸಿನಂತೆ ನಾವು ಆಳುವ ವರ್ಗವಾಗಬೇಕು:*

ಉರಿಲಿಂಗಪೆದ್ದಿ ಮಠದ ಬಹುಜನಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಗಳು ಬೋಧಿ ಗಿಡಕ್ಕೆ ನೀರು ಹಾಕಿ, ಸಂವಿಧಾನದ ಪೀಠಿಕೆಯನ್ನು ಭೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಹಾದಿ ಬೀದಿ ಗಲ್ಲಿ ರಸ್ತೆಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಹಾರ ಹಾಕಿ ಜಯಂತಿ ಮಾಡಿದರೆ ಸಾಲದು, ನಾವೆಲ್ಲರೂ ಅಂಬೇಡ್ಕರ್ ಅವರ ಚಿಂತನೆ, ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿಯೊಂದು ಮನೆ, ಮನಗಳಲ್ಲಿ ಅಂಬೇಡ್ಕರ್ ಅವರನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸುವ ಕೆಲಸವನ್ನು ಮಾಡಬೇಕು. ಅಂಬೇಡ್ಕರ್ ಅವರ ಕನಸಿನಂತೆ ನಾವು ಸ್ವಾಭಿಮಾನಿಗಳಾಗಿ ವಿದ್ಯಾವಂತರಾಗಿ ಆಳುವ ವರ್ಗವಾಗಬೇಕೇ ಹೊರತು ಇನ್ನೊಬ್ಬರ ಗುಲಾಮರಾಗಬಾರದು. ಯಾರ ಮನೆ ಕಾಯುವ ದಾಸರಾಗಬಾರದು ಎಂದರು.


ಅಂಬೇಡ್ಕರ್ ಅವರು ಒಂದು ಜಾತಿ, ಧರ್ಮಕ್ಕೆ ಹೋರಾಟ ಮಾಡಿಲ್ಲ. ಸಂವಿಧಾನ ರಚನೆ ಮಾಡಿಲ್ಲ. ದೇಶದ ಸರ್ವ ಜನಾಂಗ ಮತ್ತು ಸಮುದಾಯದ ಏಳಿಗೆ ಮತ್ತು ರಕ್ಷಣೆಗಾಗಿ ಶ್ರಮಿಸಿದವರು. ಸಂವಿಧಾನ ದೇಶದ ರಕ್ಷಾ ಕವಚವಾಗಿದೆ. ಅವರ ವಂಶದ ಕುಡಿ ಡಾ.ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗ ಭೀಮರಾವ್ ಯಶ್ವಂತ್‍ರಾವ್ ಅಂಬೇಡ್ಕರ್ ಅವರು ಈ ಮಣ್ಣಿನ ಸ್ಪರ್ಷ ಮಾಡಿರುವುದು, ನಾವು ಅವರನ್ನು ಕಣ್ತುಂಬಿಕೊಳ್ಳುತ್ತಿರುವುದು ನಮ್ಮ ಸೌಭಾಗ್ಯ. ನಾವು ನಕಲಿ, ಸೀಸನ್, ಕಲೆಕ್ಷನ್ ಅಂಬೇಡ್ಕರ್ ವಾದಿಗಳಾಗದೇ ಅಸಲಿ ಅಂಬೇಡ್ಕರ್ ವಾದಿಗಳಾಗಬೇಕು. ಅಂಬೇಡ್ಕರ್ ರವರು ಹೇಳಿರುವಂತೆ ಎಲ್ಲಾ ಕೆಟ್ಟದ್ದನ್ನು ತ್ಯಜಿಸಿದರೆ ನಾವು ಸಮಾಜದಲ್ಲಿ ಸದೃಢರಾಗಲು ಸಹಕಾರಿ ಆಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಮುಂದಡಿ ಇಡೋಣಾ ಎಂದು ಅವರು ಕರೆ ನೀಡಿದರು.

 

ಸರ್ವ ಧರ್ಮಗಳ ಸಮಾವೇಶಕ್ಕೆ ಸಾಕ್ಷಿಯಾಗುವಂತೆ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಅಬ್ದುಲ್ ಐ ಮೌಲಾನಾ, ಕೈಸ್ತ ಸಭಾ ಪಾಲಕರಾದ ರೆವರೆಂಡ್ ಪಿ.ವಿ.ಜಿ.ಕುಮಾರ್, ಬೌಧ್ದ ಮಹಾಸಭಾದ ಮಲ್ಲಿಕಾರ್ಜುನ ಬಾಲ್ಕಿ ಅವರು ಮಾತನಾಡಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೆಲುಕು ಹಾಕಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಳಂದ ಭೌದ್ಧ ವಿಶ್ವ ವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೆ ಭೋಧಿದತ್ತ ಥೇರರವರು ಅಧ್ಯಕ್ಷತೆ ವಹಿಸಿ ಭೋಧನೆ ಮಾಡಿದರು.  ವೇದಿಕೆಯಲ್ಲಿ ಮತ್ತೊಬ್ಬ ಕೇಂದ್ರ ಬಿಂದು ಮಹಾನಾಯಕ ಧಾರವಾಹಿಯ ಅಂಬೇಡ್ಕರ್ ಬಾಲ ಪಾತ್ರಧಾರಿ ಆಯುದ್ ಬನ್ಸಾಲಿ, ತಾಯಿ ದೀಪಾ ಮಯೂರ್ ಬನ್ಸಾಲಿ ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಜಯಕಾಂತ್ ಚಾಲುಕ್ಯ ಸ್ವಾಗತಿಸಿದರು. ಡಾ.ರವಿಕುಮಾರ್ ನಿರೂಪಣೆ ಮಾಡಿದರು. ಹನುಮಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.


*ಬೃಹತ್ ಮೆರವಣಿಗೆ:*

ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್, ಸಿಇಓ ಇಕ್ರಂ, ಎಸ್ಪಿ ಸಂತೋಷ್ ಬಾಬು ಮತ್ತು ಸಂಘಟಕರು ಮಾಲಾರ್ಪಣೆ ಮಾಡಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಸುಮಾರು 50ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡ, ಪೂಜಾ ಕುಣಿತ ತಮಟೆ ನಗಾರಿ ಡೊಳ್ಳು ಕುಣಿತಗಳೊಂದಿಗೆ ಬೃಹತ್ ಮೆರವಣಿಗೆ ಹೊರಟು ಬೆಂಗಳೂರು ಮೈಸೂರು ಹೆದ್ದಾರಿ ಸಾತನೂರು ಮಾರ್ಗ ಸಾಗಿ ಹೌಸಿಂಗ್ ಬೋರ್ಡ್ ಮೈದಾನದಲ್ಲಿನ ವೇದಿಕೆಯಲ್ಲಿ ಸಮಾವೇಶಗೊಂಡಿತು. ನಗರದ ರಸ್ತೆಗಳೆಲ್ಲವೂ ಸಂಪೂರ್ಣವಾಗಿ ನೀಲಿ ಮಯವಾಗಿತ್ತು. ಸಾಗರೋಪಾದಿಯಲ್ಲಿ ಜನಸಮೂಹ ಕಾರ್ಯಕ್ರಮಕ್ಕೆ ಹರಿದು ಬಂದು ಕಣ್ತುಂಬಿಕೊಂಡಿದ್ದು ವಿಶೇಷ.


*ಮೆರವಣಿಗೆಗೆ ಸಾಥ್ ನೀಡಿದ ಮುಸ್ಲಿಮರು*

ಮೆರವಣಿಗೆ ಆರಂಭವಾಗಿ ಸಾತನೂರು ವೃತ್ತ ತಲುಪುತ್ತಿದ್ದಂತೆ ಹಲವಾರು ಮುಸ್ಲಿಮರು ಮೆರವಣಿಗೆಯಲ್ಲಿ ಭಾಗವಹಿದವರಿಗೆ ನೀರು ನೀಡಿ ರಸ್ತೆಯ ಉದ್ದಗಲಕ್ಕೂ ಅಂಬೇಡ್ಕರ್ ರವರಿಗೆ ಜೈಕಾರ ಹಾಕುವ ಮೂಲಕ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆನಂದಪುರ ನಿವಾಸಿಗಳಾದ ತಮಿಳಿಯನ್ನರು ಎರಡೂವರೆ ಸಾವಿರ ಮಂದಿಗೆ ಮಜ್ಜಿಗೆ ವಿತರಿಸಿದರು. ಅಂಬೇಡ್ಕರ್ ನಗರದ ನಿವಾಸಿಗಳು ಸಹ ನೀರು ಮತ್ತು ಮಜ್ಜಿಗೆ ನೀಡಿದರು.


 ಸಮಿತಿಯ ಪ್ರಮುಖರಾದ ಇಂಜಿನಿಯರ್ ಶಂಕರಪ್ಪ, ಚಿಕ್ಕೇನಹಳ್ಳಿ ಕುಮಾರ್, ನೀಲಸಂದ್ರ ಸಿದ್ದರಾಮು, ಮಲ್ಲೇಶ್ ದ್ಯಾವಪಟ್ಣ, ಅಪ್ಪಗೆರೆ ಶಿವಮೂರ್ತಿ, ವಂದಾರಗುಪ್ಪೆ ರಾಜೇಶ್, ಗೋವಿಂದರಾಜು, ವಿಷಕಂಠಮೂರ್ತಿ, ಶಿವರಾಂ, ಚಕ್ಕಲೂರು ಚೌಡಯ್ಯ, ಕೆಂಗಲ್‍ಮೂರ್ತಿ ಸೇರಿದಂತೆ ನೂರಾರು ಮಂದಿ ಸಮಾರಂಭದ ಯಶಸ್ಸಿಗಾಗಿ ಶ್ರಮಿಸಿದರು. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑