ಜೆ ಬ್ಯಾಡರಹಳ್ಳಿ ಪಂಚಾಯತಿ ಕಛೇರಿ ಜಗದಾಪುರ ಆಸ್ಪತ್ರೆಯಲ್ಲಿ ಕಳವು
ಚನ್ನಪಟ್ಟಣ: ಮೇ 09 22. ತಾಲ್ಲೂಕಿನ ಅಕ್ಕೂರು ಪೋಲೀಸ್ ಠಾಣಾ ವ್ಯಾಪ್ತಿಯ ಜೆ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಕಛೇರಿ ಮತ್ತು ಜಗದಾಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಕಿಟಕಿ ಸರಳು ಹಾಗೂ ಬಾಗಿಲು ಮೀಟಿ ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಜೆ ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದ ಕಿಟಕಿ ಸರಳನ್ನು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಯುಪಿಎಸ್ ಗೆ ಅಳವಡಿಸಿದ ನಾಲ್ಕು ಬ್ಯಾಟರಿಗಳು, ಒಂದು 32 ಇಂಚಿನ ಎಂಐ ಟಿವಿ, ಸಿಸಿ ಟಿವಿ ಗೆ ಅಳವಡಿಸಿದ ಎಲ್ಸಿಡಿ, ಡಿವಿಆರ್ ಮತ್ತು ಹಾರ್ಡ್ ಡಿಸ್ಕ್ಗಳನ್ನು ಸಹ ಕದ್ದೊಯ್ದಿದ್ದಾರೆ. ಬಹುಶಃ ಶನಿವಾರ ರಾತ್ರಿಯೇ ಕಳ್ಳತನವಾಗಿರುವ ಸಾಧ್ಯತೆ ಇದ್ದು ಎರಡು ದಿನಗಳ ಕಾಲ ರಜೆ ಇದ್ದಿದ್ದರಿಂದ ಸೋಮವಾರ ಕಛೇರಿ ತೆಗೆಯಲು ಹೋದಾಗ ಕಳವು ಆಗಿರುವ ಬಗ್ಗೆ ಮಾಹಿತಿ ದೊರೆತಿದೆ.
ಜಗದಾಪುರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು ಎರಡು ಯುಪಿಎಸ್, ಯುಪಿಎಸ್ ಗೆ ಅಳವಡಿಸಿದ ಆರು ಬ್ಯಾಟರಿಗಳು, ಒಂದು ಟಿವಿ, ಸಿಸಿ ಟಿವಿ ಗೆ ಅಳವಡಿಸಿದ ಎಲ್ಸಿಡಿ ಟಿವಿ, ಡಿವಿಆರ್ ಮತ್ತು ಹಾರ್ಡ್ ಡಿಸ್ಕ್ಗಳನ್ನು ಕದ್ದೊಯ್ದಿದ್ದಾರೆ. ಇಲ್ಲಿಯೂ ಸಹ ಶನಿವಾರ ದಂದೇ ಕಳ್ಳತನ ಆಗಿರುವ ಸಾಧ್ಯತೆ ಇದ್ದು, ರಜೆ ಇದ್ದಿದ್ದರಿಂದ ಸೋಮವಾರ ಬೆಳಿಗ್ಗೆ ಆಸ್ಪತ್ರೆಯ ಬಾಗಿಲು ತೆರೆಯುವ ಸಂದರ್ಭದಲ್ಲಿ ಕಳವು ಆಗಿರುವುದು ತಿಳಿದುಬಂದಿದೆ.
ಎರಡೂ ಕಳ್ಳತನವನ್ನೂ ಕಸುಬಿನ ಕಳ್ಳರೇ ಮಾಡಿರುವ ಸಾಧ್ಯತೆ ಇದ್ದು, ಸಿಸಿ ಟಿವಿ ಎಲ್ಸಿಡಿ ಪರದೆ, ಡಿವಿಆರ್ ಮತ್ತು ಹಾರ್ಡ್ ಡಿಸ್ಕ್ಗಳನ್ನು ತೆಗೆದುಕೊಂಡು ಹೋಗಿರುವುದರಿಂದ ನುರಿತ ಕಳ್ಳರೇ ಇರಬೇಕೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಅಕ್ಕೂರು ಪೋಲೀಸರು ಮಾಹಿತಿ ನೀಡಿದ್ದಾರೆ.
ಆರೋಗ್ಯ ಕೇಂದ್ರಕ್ಕೆ ತಾಲ್ಲೂಕು ಆರೋಗ್ಯ ಅಧಿಕಾರಿ ರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳ್ಳತನ ನಡೆದ ಎರಡು ಕೇಂದ್ರಗಳಿಗೂ ಅಕ್ಕೂರು ಪಿಎಸ್ಐ ಬಸವರಾಜು ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಟಿ ಬಿ ಶಿವಕುಮಾರ್ ಭೇಟಿ ನೀಡಿ ಮಹಜರು ಮಾಡಿಸಿ ತನಿಖೆ ಕೈಗೊಂಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು