ಪಾನಿಪೂರಿ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ತುಂಡಾದ ಬಾಲಕನ ಕೈಬೆರಳುಗಳು
ಚನ್ನಪಟ್ಟಣ.ಏ.೦೭: ಪಾನಿ ಪುರಿ ತಯಾರಿಸುವ ಪ್ಯಾಕ್ಟರಿಯಲ್ಲಿ ಅಕ್ರಮವಾಗಿ ಬಾಲಕಾರ್ಮಿಕನನ್ನು ಕೆಲಸಕ್ಕೆ ಬಳಸಿಕೊಂಡಿದ್ದು, ಮೆಷಿನ್ನಲ್ಲಿ ಕೆಲಸ ಮಾಡುವಾಗ ಬಾಲಕ ಕೈ ಬೆರಳುಗಳು ತುಂಡಾಗಿರುವ ಘಟನೆ ನಡೆದು ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದ ನಿವಾಸಿ ಸಾಕಮ್ಮ ಎಂಬುವವರು ಅದೇ ಗ್ರಾಮದ ವಿಕಾಸ್ ಎಂಬುವವರ ಪಾನಿಪುರಿ ಪ್ಯಾಕ್ಟರಿಯಲ್ಲಿ ಕಳೆದ ೨ ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಇವರ ಮಗನಾದ ಚೇತನ್(೧೫) ೮ನೇ ತರಗತಿಯಲ್ಲಿ ಓದುತ್ತಿದ್ದು, ಈಗ ಬೇಸಿಗೆ ರಜೆ ಇದ್ದುದರಿಂದ ತಾಯಿ ಕೆಲಸ ಮಾಡುವ ಸ್ಥಳಕ್ಕೆ ಆಗಾಗ್ಗೆ ಹೋಗುತ್ತಿದ್ದಾಗ ಪ್ಯಾಕ್ಟರಿ ಮಾಲೀಕರು ಅವನ ಕೈಯಲ್ಲಿ ಪಾನಿಪುರಿ ಹಿಟ್ಟನ್ನು ತುಳಿಸುವ ಕೆಲಸ ಮಾಡಿಸಿತ್ತಿದ್ದರು. ಅದಕ್ಕೆ ಹಣವನ್ನು ಕೊಡುತ್ತಿದ್ದರು ಎನ್ನಲಾಗಿದೆ.
ಇತ್ತೀಚಿಗೆ ಸಾಕಮ್ಮನವರಿಗೆ ಹುಷಾರಿಲ್ಲದ ಕಾರಣ ಕೆಲಸಕ್ಕೆ ಹೋಗುವುದು ತಡವಾಗಿದ್ದು ಅದನ್ನು ತಿಳಿಸಲು ಮಗನನ್ನು ಪ್ಯಾಕ್ಟರಿಗೆ ಕಳುಹಿಸಿಕೊಟ್ಟಿದ್ದಾರೆ. ಆಗ ಮಾಲೀಕ ನಿಮ್ಮ ತಾಯಿ ಬರುವವರೆಗೂ ಕೆಲಸ ಮಾಡು ಎಂದು ಮೆಷಿನ್ ಬಳಿ ಕೆಲಸಕ್ಕೆ ಬಿಟ್ಟಿದ್ದಾರೆ. ಅವರ ತಾಯಿ ಪ್ಯಾಕ್ಟರಿಯ ಬಳಿ ಬಂದು ನೋಡಿದಾಗ ಮಗನ ಕೈಯಲ್ಲಿ ರಕ್ತ ಬರುತ್ತಿದ್ದು, ಆತ ಮೆಷಿನ್ ನಲ್ಲಿ ಕೆಲಸ ಮಾಡುವಾಗ ಬಲಗೈ ಮೆಷಿನ್ಗೆ ಸಿಕ್ಕಿ ಎರಡು ಬೆರುಗಳಿಗೆ ಗಾಯವಾಗಿದ್ದು ಆತನನ್ನು ಸಾರ್ವಜನಿಕರ ಸಹಾಯದಿಂದ ಇಲ್ಲಿನ ಬಿಜೆ ಲಿಂಗೇಗೌಡ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂಬಂಧ ಬಾಲಕನ ತಾಯಿ ಸಾಕಮ್ಮ ಪೂರ್ವ ಪೊಲೀಸ್ ಠಾಣೆಯಲ್ಲಿ ವಿಕಾಸ್ ಎಂಬುವವರ ವಿರುದ್ಧ ದೂರು ನೀಡಿದ್ದು, ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಆಕಾಶ್ ಬಿ ಪತ್ತಾರ್ ರವರು ಠಾಣಾ ಮೊಕದ್ದಮೆ ೨೦/೨೦೨೩, ಮಕ್ಕಳ ಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು