Tel: 7676775624 | Mail: info@yellowandred.in

Language: EN KAN

    Follow us :


ಅಂಚೆ ಮತದಾರರಿಗೆ ಸಹಿ ಜೊತೆಗೆ ಜೆಡಿಎಸ್ ಗೆ ಮತ ನೀಡಿ ಎಂದ ಅಧಿಕಾರಿ ವಿರುದ್ಧ ದೂರು

Posted date: 04 May, 2023

Powered by:     Yellow and Red

ಅಂಚೆ ಮತದಾರರಿಗೆ ಸಹಿ ಜೊತೆಗೆ ಜೆಡಿಎಸ್ ಗೆ ಮತ ನೀಡಿ ಎಂದ ಅಧಿಕಾರಿ ವಿರುದ್ಧ ದೂರು

ಚನ್ನಪಟ್ಟಣ:

ಮತಗಟ್ಟೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ಅಂಚೆ ಮತ ಚಲಾವಣೆಯ ವೇಳೆಯಲ್ಲಿ ಪ್ರಾಂಶುಪಾಲರೊಬ್ಬರು ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವಂತೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ನಡುವೆ ಕೆಲಕಾಲ ಜಟಾಪಟಿ ನಡೆದ ಘಟನೆ ನಗರದ ತಾಲೂಕು ಕಚೇರಿ ಮುಂಭಾಗ ಬುಧವಾರ ನಡೆಯಿತು.


ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಮತ್ತು ಇನ್ನಿತರ ಸಿಬ್ಬಂದಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಮಂಗಳವಾರದಿಂದ ಅಂಚೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕಿಗೆ ಸಂಬಂಧಿಸಿದಂತೆ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತಾದರೂ, ಅಂಚೆ ಮತದಾರರ ನಿರಾಸಕ್ತಿ ಹೆಚ್ಚಾಗಿತ್ತು. ಈ ವೇಳೆ ಅಂಚೆಮತದಾನ ಮಾಡಲು ಆಗಮಿಸಿದ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಪ್ರಾಂಶುಪಾಲ ಅಬ್ಬೂರುದೊಡ್ಡಿ ಮಹೇಶ್ ಎಂಬುವವರು ಜೆಡಿಎಸ್ ಅಭ್ಯರ್ಥಿಗೆ ಮತನೀಡುವಂತೆ ಪ್ರಚಾರ ನಡೆಸುತ್ತಿದ್ದು, ಗೆಜೆಟೆಡ್ ಅಧಿಕಾರಿ ಸಹಿ ಜೊತೆಗೆ ಬ್ಯಾಲೆಟ್ ಪೇಪರ್ ನಲ್ಲಿ ಜೆಡಿಎಸ್ ಗುರುತಿಗೆ ಗುರುತು ಮಾಡಿ ಕೊಡುತ್ತಿದ್ದರು ಎಂದು ಬಿಜೆಪಿ ಪಕ್ಷದ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಏನಿದು ಆರೋಪ? ಅಂಚೆಮತದಾನ ಮಾಡುವವರು ತಮ್ಮ ಮತಪತ್ರಕ್ಕೆ ಗೆಜೆಟೆಡ್ ಅಧಿಕಾರಿಯೊಬ್ಬರಿಂದ ಸಹಿ ಪಡೆಯುವುದು  ಅಗತ್ಯ. ಕಾಲೇಜೊಂದರ ಪ್ರಾಂಶುಪಾಲರಾಗಿರುವ ಮಹೇಶ್ ಗೆಜೆಟೆಡ್ ಅಧಿಕಾರಿಯಾಗಿದ್ದು, ಅಂಚೆ ಮತಪತ್ರ ಹೊಂದಿರುವ ಕೆಲ ಸಿಬ್ಬಂದಿಗಳಿಗೆ ಸಹಿ ಹಾಕಿಕೊಡುವ ವೇಳೆ ಇವರು ಜೆಡಿಎಸ್ ಅಭ್ಯರ್ಥಿಯ ಪರ ಮತದಾನ ಮಾಡಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ. ಮಹೇಶ್ ಅವರನ್ನು ಈ ವಿಚಾರವಾಗಿ ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಆಚೆ ಹೋಗುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಹೇಶ್ ಅವರ ರಕ್ಷಣೆಗೆ ಜೆಡಿಎಸ್ ಕಾರ್ಯಕರ್ತರು ಮುಂದಾಗಿದ್ದಾರೆ. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆದಿದೆ. ಜೆಡಿಎಸ್ ಮುಖಂಡರು ಮಹೇಶ್ ರವರನ್ನು ಪಾರು ಮಾಡಿದ್ದಲ್ಲದೆ ಅವರ ಕಾರನ್ನು ಸಹ ಬಲವಂತವಾಗಿ ಅನೇಕ ಕಾರ್ಯಕರ್ತರು ಸೇರಿ ಕಛೇರಿಯ ಆವರಣದಿಂದ ಹೊರಗೆ ಕಳುಹಿಸಿದ ಘಟನೆಯೂ ಸಹ ನಡೆದಿದೆ.


ಇದರಿಂದ ಕೆಲ ಕಾಲ ತಾಲೂಕು ಕಚೇರಿ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಿಗೊಳಿಸಿದರು.  ಪ್ರಾಂಶುಪಾಲ ಮಹೇಶ್ ಕಾರಿಗೆ ರಕ್ಷಣೆ ನೀಡಿ ಹೊರಕಳುಹಿಸುವಲ್ಲಿ ಜೆಡಿಎಸ್ ಕಾರ್ಯಕರ್ತರು ಯಶಸ್ವಿಯಾಗಿದ್ದು, ಈ ಕಾರಿನೊಳಗೆ ಚುನಾವಣೆಗೆ ಸಂಬಂಧಿಸಿದ ವಸ್ತುಗಳೇನಾದರೂ ಇರಬಹುದೇ ಎಂಬ ಗುಮಾನಿ ಸಾರ್ವಜನಿಕರಿಗೆ ಕಾಡಿದೆ.


ಜೆಡಿಎಸ್ ಮತ್ತು ಬಿಜೆಪಿ ಯಿಂದ ದೂರು!:  ಗೆಜೆಟೆಡ್ ಅಧಿಕಾರಿಯಾಗಿರುವ ಪ್ರಾಂಶುಪಾಲ ಮಹೇಶ್, ಜೆಡಿಎಸ್ ಪರವಾಗಿ ಪ್ರಚಾರ ನಡೆಸುತ್ತಿದ್ದು, ಅಂಚೆ ಮತದಾರರನ್ನು ಆ ಪಕ್ಷದ ಪರ ಮತ ಚಲಾಯಿಸುವಂತೆ ಪ್ರೇರೆಪಿಸುತ್ತಿದ್ದಾರೆ ಎಂದು ಆರೋಪಿಸಿ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಚುನಾವಣಾಧಿಕಾರಿಗಳಾದ ಮುನೇಗೌಡ ಹಾಗೂ ತಹಸೀಲ್ದಾರ್ ಮಹೇಂದ್ರ ರವರಿಗೆ ದೂರು ಸಲ್ಲಿಸಿದ್ದು, ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑