Tel: 7676775624 | Mail: info@yellowandred.in

Language: EN KAN

    Follow us :


ಮೆದುಳು ಜ್ವರ ನಿಯಂತ್ರಣಕ್ಕೆ ಸಹಕರಿಸಲು ಮನವಿ: ಡಾ. ಶಶಿಧರ್

Posted date: 24 May, 2023

Powered by:     Yellow and Red

ಮೆದುಳು ಜ್ವರ ನಿಯಂತ್ರಣಕ್ಕೆ ಸಹಕರಿಸಲು ಮನವಿ: ಡಾ. ಶಶಿಧರ್

ರಾಮನಗರ, ಮೇ 22:    ಮೆದುಳು ಜ್ವರವು ವೈರಾಣುವಿನಿಂದ ಬರುವ ರೋಗವಾಗಿದ್ದು ಹೆಚ್ಚಾಗಿ ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಾರೆ. ಕೆಲವರಿಗೆ ನರ ದೌರ್ಬಲ್ಯ ಮತ್ತು ಬುದ್ಧಿಮಾಂದ್ಯತೆ ಉಂಟಾಗುತ್ತದೆ. ಆದ್ದರಿಂದ ಸಮುದಾಯದಲ್ಲಿ ಮೆದುಳು ಜ್ವರದಿಂದ ಉಂಟಾಗುವ ಸಾವು-ನೋವುಗಳನ್ನು ತಪ್ಪಿಸಬೇಕಾದರೆ. ತಾವೆಲ್ಲರೂ ಮಾಹಿತಿಯನ್ನು ತಿಳಿದುಕೊಂಡು ಅನುಸರಿಸುವ ಮೂಲಕ ಮೆದುಳು ಜ್ವರ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಅವರು ತಿಳಿಸಿದರು.


ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ವಿವಿಧ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು, ರಾಮನಗರ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಷ್ಮಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮೆದುಳು ಜ್ವರ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 


ಇಂದು ಜಿಲ್ಲಾ ಮಟ್ಟದ ಮೆದುಳು ಜ್ವರ ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಮುದಾಯದಲ್ಲಿ ಮೆದುಳು ಜ್ವರದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.


ವೈದ್ಯಾಧಿಕಾರಿ ಡಾ. ಶ್ವೇತಾ ಅವರು ಮಾತನಾಡಿ, ಮೆದುಳು ಜ್ವರದ ರೋಗಾಣುಗಳನ್ನು ಹೊಂದಿದ ಹಂದಿ ಮತ್ತು ಕೊಕ್ಕರೆಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗವು ಒಬ್ಬರಿಂದ ಮತೊಬ್ಬರಿಗೆ ಹರಡುತ್ತದೆ. ಪ್ರಾರಂಭದಲ್ಲಿ ವಿಪರೀತ ಜ್ವರ, ತಲೆನೂವು, ಕತ್ತಿನ ಬಿಗಿತ, ತಲೆ ಸುತ್ತುವಿಕೆ, ಮೈನಡುಕ, ಮತ್ತು ಜ್ಞಾನ ತಪ್ಪುವುದು, ಈ ರೋಗದ ಮುಖ್ಯ ಲಕ್ಷಣಗಳಾಗಿದ್ದು ಇಂತಹ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ತಿಳಿಸಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ, ಮೆದುಳು ಜ್ವರ ನಿಯಂತ್ರಿಸುವ ಸಲುವಾಗಿ ಈಗಾಗಲೆ 1 ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜೆ.ಇ ಲಸಿಕಾ ಅಭಿಯಾನದಡಿಯಲ್ಲಿ ಲಸಿಕೆಯನ್ನು ನೀಡಲಾಗಿದ್ದು. ಜೊತೆಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಅರ್ಹ ಮಕ್ಕಳಿಗೆ ಜೆ.ಇ. ಲಸಿಕೆಯನ್ನು ನೀಡಲಾಗುತ್ತಿದ್ದು, ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿಸಿದರು ಹಾಗೂ ಮೆದುಳು ಜ್ವರವನ್ನು ತಡೆಗಟ್ಟಲು ಜನರು ವಾಸಿಸುವ ಸ್ಥಳದಿಂದ ಕನಿಷ್ಠ 3 ಕಿ.ಮೀ ವ್ಯಾಪ್ತಿಯಲ್ಲಿ ಹಂದಿಸಾಕಣೆ ಮಾಡಬಾರದು ಈ ರೋಗ ಕಾಣಿಸಿಕೊಂಡ ಸ್ಥಳಗಳಲ್ಲಿ ಹೊರಾಂಗಣ ಕೀಟನಾಶಕ ಧೂಮೀಕರಣ ಮಾಡಲಾಗುವುದು. ಹಂದಿ ಸಾಕಾಣಿಕಾ ಕೇಂದ್ರಗಳಿಗೆ ಕಾಲ-ಕಾಲಕ್ಕೆ ಕೀಟನಾಶಕ ಸಿಂಪಡಣೆ ಮಾಡುವುದು ಜೊತೆಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವುದು ಸೂಕ್ತ, ಮನೆಯ ಸುತ್ತ-ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ನೀರಿನ ತಾಣಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಗಮನಹರಿಸಬೇಕು. ವಿಶೇಷವಾಗಿ ಮಕ್ಕಳು ಮೈ ತುಂಬ ಬಟ್ಟೆ ಧರಿಸಬೇಕು ಹಾಗೂ ಸೊಳ್ಳೆ ಪರದೆಗಳನ್ನು ಉಪಯೋಗಿಸುವ ಮೂಲಕ ಸೊಳ್ಳೆ ಕಡಿತಗಳಿಂದ ಪಾರಾಗಿ ಮೆದುಳು ಜ್ವರ ಬಾರದಂತೆ ರಕ್ಷಣೆ ಪಡೆಯಬುದೆಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರಿತಾ, ಪಿ.ಡಿ.ಓ ಶಿವಕುಮಾರ್, ಸದಸ್ಯರಾದ ಶಿಲ್ಪ, ಮಹದೇವು, ಬಸವರಾಜು, ತ್ರಿವೇಣಿ, ಮಾಜಿ ಸದಸ್ಯರಾದ ವಿಶ್ವನಾಥ್, ಪಶುವೈದ್ಯ ಡಾ. ವೆಂಕಟೇಶ್, ಕೀಟ ಶಾಸ್ತ್ರಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿನಯ್ ಕುಮಾರ್, ರಾಜೇಂದ್ರ, ವಿಠಲ್, ದಾಸಪ್ಪ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑