ಎಂಬಿಬಿಎಸ್ ನಲ್ಲಿ ಗೋಲ್ಡ್ ಮೆಡಲ್, ಪಿಜಿ ಯಲ್ಲಿ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದ ಅಪ್ಪಟ ಗ್ರಾಮೀಣ ಪ್ರತಿಭೆ ಚಕ್ಕಲೂರು ಗ್ರಾಮದ ಡಾ ಅನುಶ್ರೀ

ಚನ್ನಪಟ್ಟಣ: ತಾಲ್ಲೂಕಿನ ಚಕ್ಕಲೂರು ಗ್ರಾಮದಿಂದ ಚನ್ನಪಟ್ಟಣ ನಗರಕ್ಕೆ ಪ್ರತಿದಿನ ಅಂದರೆ ಹದಿನಾಲ್ಕು ವರ್ಷಗಳ ಕಾಲ ಇಪ್ಪತ್ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿ, ಎಲ್ ಕೆ ಜಿ ಇಂದ ಹತ್ತನೇ ತರಗತಿ ವರೆಗೆ ಸೇಂಟ್ ಮೈಖೇಲ್ ಇಂಗ್ಲಿಷ್ ಶಾಲೆಯಲ್ಲಿ ಓದಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಯನ್ನು ನಗರದ ಕೇಂಬ್ರಿಡ್ಜ್ ಕಾಲೇಜಿನಲ್ಲಿ ಓದಿ ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಐದೂವರೆ ವರ್ಷಗಳ ಕೋರ್ಸಿನಲ್ಲಿ ಎರಡು ಚಿನ್ನದ ಪದಕ ಪಡೆದು, ಪಿಜಿ ಪರೀಕ್ಷೆ ಬರೆದು ಅದರಲ್ಲೂ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದು ಎಂಡಿ ಸೀಟು ಪಡೆದುಕೊಂಡು ಹೆತ್ತವರಿಗೆ, ಓದಿದ ಶಾಲಾ ಕಾಲೇಜುಗಳಿಗೆ, ತಾಲೂಕಿಗೆ, ಜಿಲ್ಲೆಗೆ ಹೆಸರು ತಂದಿರುವ ಅಪ್ಪಟ ಗ್ರಾಮೀಣ ಪ್ರತಿಭೆ ಡಾ ಅನುಶ್ರೀ.
ತಂದೆ ಮೋಹನ್ ದಾಸ್ ಕೃಷಿಕರು ಜೊತೆಗೆ ಬೆಂಗಳೂರಿನ ಐಟಿಸಿ ಖಾಸಗಿ ಕಂಪನಿಯಲ್ಲಿ ಕೆಲಸ, ತಾಯಿ ಭುವನೇಶ್ವರಿ ನಗರದ ಸೇಂಟ್ ಮೈಖೇಲ್ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿ, ಅಣ್ಣ ಹರ್ಷ ಸಿ ಎಂ ಬಾಲ್ಯದಿಂದಲೂ ರ್ಯಾಂಕ್ ಸ್ಟೂಡೆಂಟ್, ಆತ ಈಗ ಎಂ ಎನ್ ಸಿ ಕಂಪನಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್, ಪ್ರೌಢಶಾಲೆಗೆ ಬರುವ ತನಕ ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ಅನುಶ್ರೀ, ಹಲವಾರು ಮಂದಿಯ ಮೂದಲಿಕೆಯಿಂದ ಅಣ್ಣನ ಸಹಾಯದಿಂದ, ಹೆತ್ತವರ ಒತ್ತಾಸೆಯಿಂದ ನಾನೂ ಅಣ್ಣನಂತೆ ರ್ಯಾಂಕ್ ಬರಬೇಕೆಂಬ ಛಲ ತೊಟ್ಟು, ಹತ್ತನೇ ತರಗತಿಯಲ್ಲಿ, ಶೇ ೯೫ ಅಂಕಪಡೆದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೂ ಶೇ ೯೫ ಅಂಕ ಪಡೆದು ತಾನು ಓದಿದ ಕೇಂಬ್ರಿಡ್ಜ್ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಮನಗರ ಜಿಲ್ಲೆಗೆ ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಹೆಸರುವಾಸಿಯಾದರು.
ಸಿಇಟಿ ಪರೀಕ್ಷೆ ಬರೆದು ಅಲ್ಲೂ ಯಶಸ್ವಿಯಾದ ಆಕೆಗೆ ದೂರದ ಬೀಜಾಪುರ ದ ಆಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಮೆಡಿಕಲ್ ಸೀಟು ಸಿಕ್ಕಾಯಿತು, ಕೇವಲ ಚಕ್ಕಲೂರು ಟು ಚನ್ನಪಟ್ಟಣ ಎಂದುಕೊಂಡಿದ್ದ ಆಕೆಗೆ ದೂರದ ಬಿಜಾಪುರ, ಅಲ್ಲಿಯ ವಾತಾವರಣ ಕಷ್ಟ ಎನಿಸಿತ್ತಾದರೂ ನೀನು ಸಾಧನೆ ಮಾಡೇ ತೀರುತ್ತಿ ಹೋಗಿ ಬಾ ಎಂದು ತಂದೆ-ತಾಯಿ ಯ ಒತ್ತಾಸೆಯಿಂದ ಬಿಜಾಪುರದಲ್ಲಿ ಓದಲಾರಂಭಿಸಿದರು. ಎರಡನೇ ವರ್ಷದಲ್ಲೇ ರಾಜೀವ್ ಗಾಂಧಿ ವಿಶ್ವವಿದ್ಯಾಲಯಕ್ಕೆ ಮೈಕ್ರೋಬಯಲಾಜಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡರೆ, ನಾಲ್ಕೂವರೆ ವರ್ಷ ಮುಗಿಯುವಷ್ಟರಲ್ಲಿ ಪ್ರಸೂತಿಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆ ಯಲ್ಲಿ ತಲಾ ಒಂದೊಂದು ಚಿನ್ನದ ಪದಕ ಪಡೆದು ಉತ್ತಮ ಮೆಡಿಕಲ್ ವಿದ್ಯಾರ್ಥಿನಿ ಎಂದು ಸಾಬೀತು ಪಡಿಸಿದರು.
ನೀಟ್ ಪಿಜಿ ಪ್ರವೇಶ ಪರೀಕ್ಷೆ ಬರೆದ ಡಾ ಅನುಶ್ರೀ ಅದರಲ್ಲೂ ದೇಶಕ್ಕೆ ಎರಡು ಸಾವಿರ ರ್ಯಾಂಕ್ ಪಡೆದು ಅದರಲ್ಲೂ ಸಾಧನೆ ಮಾಡಿದರು. ಇದನ್ನು ರಾಜ್ಯಕ್ಕೆ ಹೋಲಿಸಿದರೆ ನೂರರ ಆಸುಪಾಸಿನ ರ್ಯಾಂಕ್, ಜಿಲ್ಲೆ ಮತ್ತು ತಾಲ್ಲೂಕಿಗೆ ಪ್ರಥಮ ರ್ಯಾಂಕ್ ಪಡೆದು, ಇವರು ಯಾವ ಕಾಲೇಜಿನಲ್ಲಿ ಕೇಳಿದರೂ ಅದೇ ಕಾಲೇಜಿನಲ್ಲಿ ಸೀಟು ಸಿಗುವ ಹಂತದ ರ್ಯಾಂಕ್ ಇದು. ಅಪ್ಪಟ ಗ್ರಾಮೀಣ ಪ್ರತಿಭೆಯೊಬ್ಬರು ಇಂತಹ ಸಾಧನೆ ಮಾಡಿದ್ದು ಜಿಲ್ಲೆ ಮತ್ತು ತಾಲೂಕ್ಕಿಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಯನ್ನು ನನ್ನ ಕುಟುಂಬ, ಶಾಲಾಕಾಲೇಜಿನ ಬೋಧಕರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅರ್ಪಿಸುತ್ತೇನೆ. ಎಂಡಿ ಯಲ್ಲಿ ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಅಥವಾ ಚರ್ಮರೋಗ ಪಠ್ಯ ತೆಗೆದುಕೊಂಡು ಓದಬೇಕೆಂಬ ಬಯಕೆ ಇದೆ. ತರುವಾಯ ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ಆರಂಭಿಸಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಅರಿವು ಮೂಡಿಸಬೇಕೆಂಬ ಹೆಬ್ಬಯಕೆ ಇದೆ. ಡಾ ಅನುಶ್ರೀ ಚಕ್ಕಲೂರು.
ಮಕ್ಕಳಿಗೆ ಆಸ್ತಿ ಮಾಡುವುದಲ್ಲಾ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆಂಬ ಇಚ್ಚೆಯಿಂದ ಓದಿಸಿದ್ದೇವೆ. ಅವರೂ ಸಹ ಸಾಧಿಸಿದ್ದಾರೆ. ಮುಂದಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಬೇಕೆಂಬ ಆಕೆಯ ಹೇಳಿಕೆ ನಮಗೆ ಹೆಮ್ಮೆ ಮೂಡಿಸಿದೆ. ಮೋಹನ್ ದಾಸ್ ಮತ್ತು ಭುವನೇಶ್ವರಿ
ಏನು ಓದಿದೆ, ಎಷ್ಟು ಓದಿದೆ ಎಂಬುದು ಮುಖ್ಯವಲ್ಲಾ, ಒಬ್ಬ ಗ್ರಾಮೀಣ ಭಾಗದ ಹೆಣ್ಣು ಮಗಳು ವೈದ್ಯ ವೃತ್ತಿಯಲ್ಲಿ ನಿಪುಣತೆ ಸಾಧಿಸಿರುವುದು ಕರ್ನಾಟಕಕ್ಕೆ ಹೆಮ್ಮೆ ವಿಷಯ. ಹಾಗಾಗಿ ಅವರಿಗೆ ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಅಭಿನಂದಿಸಿದ್ದೇನೆ. ಲಕ್ಷ್ಮಿ ಗೋ ರಾ ಶ್ರೀನಿವಾಸ... ಜಾನಪದ ಕಲಾವಿದರು ಚನ್ನಪಟ್ಟಣ
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು