ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಸಲಹೆ - ಡಾ.ಅನಿಲ್

ರಾಮನಗರ, ಜೂ. 15: ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಅಂಶವಿದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ಇದರಿಂದ ದೇಹದ ಅನೇಕ ಭಾಗಗಳಲ್ಲಿ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಗಳ ಸೇವನೆ, ಕಾರ್ಖಾನೆಗಳಿಂದ ಹೊರ ಹೊಮ್ಮುವ ಧೂಳು, ಹೊಗೆ, ಮುಂತಾದವುಗಳಿಂದ ಫ್ಲೋರೈಡ್ ದೇಹದೊಳಗೆ ಸೇರುತ್ತದೆ. ಫ್ಲೋರೋಸಿಸ್ ವಯಸ್ಸಿನ ಅಂತರ, ಲಿಂಗಬೇದವಿಲ್ಲದೆ ಚಿಕ್ಕ ಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು, ಎಲ್ಲರಲ್ಲಿಯೂ ದಂತ, ಮೂಳೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ತಾವುಗಳು ಜಾಗೃತರಾಗಿ ಫ್ಲೋರೋಸಿಸ್ ನಿಯಂತ್ರಿಸಿ ಉತ್ತಮ ಜೀವನ ನಡೆಸುವಂತೆ ಮೂಳೆ ತಜ್ಞರಾದ ಡಾ. ಅನಿಲ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಮನಗರ ತಾಲ್ಲೂಕು, ಜಾಲಮಂಗಲ ಪ್ರಾಥಮಿಕ ಆರೋಗ್ಯ ಕೇಂದದ್ರ ವತಿಯಿಂದ ಆಸ್ಪತ್ರೆಯ ಸಭಾಂಗಣದಲ್ಲಿ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ದಂತ ಫ್ಲೋರೋಸಿಸ್ ಪತ್ತೆ ಮಾಡಲು ಆಯೋಜಿಸಲಾಗಿದ್ದ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಂತವೈದ್ಯರಾದ ಡಾ. ಪ್ರಕೃತಿ ಅವರು ಮಾತನಾಡಿ, ಮಕ್ಕಳು ದಂತ ಫ್ಲೋರೋಸಿಸ್ಗೆ ಸುಲಭವಾಗಿ ತುತ್ತಾಗುತ್ತಾರೆ. ಮಕ್ಕಳ ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಹೆಚ್ಚು ಫ್ಲೋರೈಡ್ ಅಂಶವಿರುವ ನೀರು, ಆಹಾರ ಪದಾರ್ಥಗಳು ಮತ್ತು ಟೂತ್ ಪೇಸ್ಟ್ ಗಳನ್ನು ಬಳಸುವುದರಿಂದ ದಂತ ಫ್ಲೋರೋಸಿಸ್ ಬರುತ್ತದೆ. ಅದರಲ್ಲೂ 8 ವರ್ಷದೊಳಗಿನ ಮಕ್ಕಳಲ್ಲಿ ಫ್ಲೋರೋಸಿಸ್ ಸಾಧಾರಣವಾಗಿ 5-7 ವರ್ಷದ ಮಕ್ಕಳಲ್ಲಿ ವಿಪರೀತವಾಗಿ ಕಂಡು ಬರುತ್ತದೆ. ಆದ್ದರಿಂದ ಹಲ್ಲಿನ ಮೇಲೆ ಹಳದಿ ಅಥವಾ ಕಂದು ಬಣ್ಣ, ಅಡ್ಡ ಗೆರೆಗಳು ಉಂಟಾಗುತ್ತವೆ. ಇದರಿಂದ ಹಲ್ಲಿನ ಒಳ ಹಾಗೂ ಹೊರ ಭಾಗಗಳಲ್ಲಿ ತೊಂದರೆಯಾಗುತ್ತದೆ. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಫ್ಲೋರೋಸಿಸ್ ಸಂಯೋಜಕರಾದ ಬಾಬು ಅವರು ಮಾತನಾಡಿ ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಈ ಶಿಬಿರದಲ್ಲಿ ಮೂಳೆ ಫ್ಲೋರೋಸಿಸ್ನಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಿ ಉಚಿತವಾಗಿ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯ ಉಪಕರಣಗಳನ್ನು ನೀಡಲಾಗುವುದು. ಹಾಗೂ ದಂತ ಫ್ಲೋರೋಸಿಸ್ ನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಜೊತೆಗೆ ದಂತ ಭಾಗ್ಯ ಯೋಜನೆಯಡಿ ಉಚಿತ ಹಲ್ಲು ಜೋಡಣೆ ಮಾಡಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್ ಅವರು ಮಾತನಾಡಿ ಫ್ಲೋರೋಸಿಸ್ ನಿಯಂತ್ರಿಸಲು ಫ್ಲೋರೈಡ್ ಅಂಶ ಕಡಿಮೆ ಇರುವ ಅಂದರೆ (ಒಂದು ಪಿ.ಪಿ.ಎಂ ಗಿಂತ ಕಡಿಮೆ) ಶುದ್ಧ ಕುಡಿಯುವ ನೀರು, ಹಾಲು, ಬೆಲ್ಲ, ಹಸಿರು ಸೊಪ್ಪು, ತರಕಾರಿ, ನುಗ್ಗೆಕಾಯಿ, ಕಾಳುಗಳು, ವಿಟಮಿನ್ -ಸಿ ಅಂಶವಿರುವ, ನೆಲ್ಲಿಕಾಯಿ, ನಿಂಬೆ, ಟೆಮೋಟೋ, ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಹೆಚ್ಚಾಗಿ ಬಳಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಉಮಾ, ಡಾ. ಪ್ರಕೃತಿ, ಡಾ. ಖಟೀಬ್ಉಲ್ಲಾ, ಆರೋಗ್ಯ ನಿರೀಕ್ಷಣಾಧಿಕಾರಿ ಲಕ್ಷ್ಮೀಕಾಂತ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಜಯಮ್ಮ, ಚೈತನ್ಯ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮೀನಾಕ್ಷಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಂದ್ರ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು