Tel: 7676775624 | Mail: info@yellowandred.in

Language: EN KAN

    Follow us :


ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ

Posted date: 01 Aug, 2023

Powered by:     Yellow and Red

ಉತ್ತಮ ಆರೋಗ್ಯಕ್ಕೆ ಆಯುರ್ವೇದವೇ ದಿವ್ಯ ಔಷಧ ಡಾ ಸಹನಾ ಕೃಷ್ಣ

ಚನ್ನಪಟ್ಟಣ: ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಿದೆಯೋ ಹಾಗೆ ಆಯುರ್ವೇದ ಔಷಧವೂ ಸಹ ರೋಗಿಯ ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಪುರಾತನ ಹಿನ್ನೆಲೆಯುಳ್ಳ ಆಯುರ್ವೇದ ಔಷಧಿಗಳಿಗೆ ಇಂದಿಗೂ ಸಾಕಷ್ಟು ಶಕ್ತಿಯಿದೆ. ಆದರೆ, ಇದರ ಬಗ್ಗೆ ಆಳವಾದ ಅರಿವು ಇಲ್ಲದ ಕಾರಣ ಬಳಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವುದು ನಮ್ಮ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ದೀರ್ಘಾಯು ವೆಲ್ನೆಸ್ ಸೆಂಟರ್ ಸ್ಥಾಪಕಿ ಹಾಗೂ ವೈದ್ಯೆ ಸಹನಾ ತಿಳಿಸಿದರು.


ತಾಲೂಕಿನ ದೊಡ್ಡಮಳೂರಿನ ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನದ ಬಳಿ ದೀರ್ಘಾಯು ವೆಲ್ನೆಸ್ ಸೆಂಟರ್, ಜೈ ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್ ಹಾಗೂ ರೋಟರಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಆಯೋಜನೆ ಮಾಡಿ, ನೂರಾರು ರೋಗಿಗಳಿಗೆ ಉಚಿತ ಔಷಧಗಳನ್ನು ವಿತರಿಸಿ ಅವರು ಮಾತನಾಡಿದರು.


ಇತ್ತೀಚೆಗೆ ಹಲವಾರು ಮಾದರಿಯ ಔಷಧೋಪಚಾರಗಳು ಲಭ್ಯವಿದೆ, ಆಯುರ್ವೇದ ಚಿಕಿತ್ಸೆಗೆ ವಿಶೇಷ ಸ್ಥಾನಮಾನವಿದೆ, ನಮ್ಮ ಪುರಾತನ ಆಯುರ್ವೇದ ಚಿಕಿತ್ಸೆ ಬಗ್ಗೆ ನಮ್ಮಲ್ಲೆ ಹಲವರಿಗೆ ಕೀಳರಿಮೆ ಇರುವ ಕಾರಣ ಆಯುರ್ವೇದ ಚಿಕಿತ್ಸೆ ಬಗ್ಗೆ ಹಿಂಜರಿಕೆ ಇದೆ. ಆಯುರ್ವೇದ ಚಿಕಿತ್ಸೆಯಲ್ಲಿ ಸಾಕಷ್ಟು ಅನುಕೂಲವಿದೆ. ಸುಧೀರ್ಘವಾಗಿ ಹೋರಾಡುವ ಗುಣವಿದೆ. ಹಲವು ರೋಗರುಜಿನಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ ರಾಮಬಾಣವಾಗಿದ್ದು, ಆಯುರ್ವೇದದ ಬಗ್ಗೆ ಜನತೆ ಆಸಕ್ತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸೆಂಟರ್ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.


ಜೈ ಶ್ರೀಕೃಷ್ಣ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಕೃಷ್ಣ ಕುಮಾರ್ ಮಾತನಾಡಿ, ನಮ್ಮ ಸರ್ಕಾರಗಳು ಆಯುರ್ವೇದ ಔಷಧಿಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಪ್ರಚಾರ ಕಡಿಮೆ ಇದೆ, ಆದರೂ ಸಹ ನಮ್ಮ ಜನತೆ ಆಲೋಪಥಿ ಔಷಧಗಳಿಗೆ ಮಾರು ಹೋಗಿರುವ ಕಾರಣ ನಮ್ಮ ಆಯುರ್ವೇದ ಔಷಧಗಳನ್ನು ಕಡೆಗಣಿಸುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ ಅವರೂ ಒಗ್ಗಿಕೊಳ್ಳುತ್ತಾರೆಂಬ ಭರವಸೆ ಇದೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ನಮ್ಮ ಸುತ್ತಮುತ್ತಲ ಪರಿಸರದಲ್ಲೆ ಸಿಗುತ್ತಿದ್ದ ಸ್ಥಳೀಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಇದೀಗ, ಎಲ್ಲರೂ ಇಂಗ್ಲೀಷ್ ಔಷಧಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಪ್ರತಿ ಸಣ್ಣ ವಿಚಾರಕ್ಕೂ ಸಾವಿರಾರು ರೂ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.


ದೊಡ್ಡಮಳೂರು ಗ್ರಾಮದ ರೋಗಿಗಳ ಜೊತೆಗೆ ಅಕ್ಕಪಕ್ಕದ ಗ್ರಾಮದ ರೋಗಿಗಳು, ನೂರಾರು ಸಂಖ್ಯೆಯಲ್ಲಿ ಬಂದು ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣಾ ಶಿಬಿದರಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು. ಡಾ ಸಹನಾ ರವರ ಜೊತೆಗೆ ಐವರು ಯುವ ಉತ್ಸಾಹಿ ಆಯುರ್ವೇದ ತಜ್ಞ ವೈದ್ಯರು ತಪಾಸಣೆ ನಡೆಸಿದರು. ಎಲ್ಲಾ ರೋಗಿಗಳಿಗೂ ಉಚಿತ ಔಷಧಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರಾಮ್ ಪ್ರಸಾದ್, ಭಾರತ್ ವಿಕಾಸ್ ಪರಿಷತ್‌ನ ವಸಂತ್ ಕುಮಾರ್, ಪಿ. ಗುರು ಮಾದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑