ಕುಮಾರಸ್ವಾಮಿಯವರ ಪರ ನಾವು ನಿಲ್ಲುತ್ತೇವೆ, ತಾಲ್ಲೂಕು ಅಲ್ಪಸಂಖ್ಯಾತ ಜೆಡಿಎಸ್ ಅಧ್ಯಕ್ಷ ಫಾಜಿಲ್
ಚನ್ನಪಟ್ಟಣ: ಕುಮಾರಸ್ವಾಮಿ ಯವರು ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಹಲಾಲ್ ಕಟ್, ಹಿಜಾಬ್ ಸೇರಿದಂತೆ ಮುಸ್ಲಿಮರಿಗೆ ತೊಂದರೆಯಾದ ವೇಳೆ ಬೆಂಬಲ ಕೊಟ್ಟಿದ್ದಾರೆ. ತಾಲ್ಲೂಕಿನಲ್ಲಿ ಯಾರೂ ಸಹ ಪಕ್ಷ ಬಿಟ್ಟು ಹೋಗಿಲ್ಲ. ಯಾರೋ ನಾಲ್ಕೈದು ಜನ ಹೋದರೆ ಏನು ಆಗುವುದಿಲ್ಲ. ಇನ್ಯಾರು ಹೋಗುವುದೂ ಇಲ್ಲ. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದ ಕಾರಣ ಸೋತರು. ಕುಮಾರಸ್ವಾಮಿ ಯವರು ಹುಷಾರಿಲ್ಲದ ಸಂದರ್ಭದಲ್ಲಿ ಏನೋ ಬಾಯಿತಪ್ಪಿ ಹೇಳಿದ ಒಂದು ಸಣ್ಣ ವಿಚಾರದಿಂದ ಕೆಟ್ಟ ಅಭಿಪ್ರಾಯ ಹೊಂದುವುದು ಸರಿಯಲ್ಲ ಎಂದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕುಮಾರಸ್ವಾಮಿ ಯವರು ತಪ್ಪು ಮಾತನಾಡಿದ್ದರೆ, ತಪ್ಪು ಮಾಡಿದ್ದರೆ ತೋರಿಸಿ. ಏನೊ ಮಾತಿನ ಬರದಲ್ಲಿ ಒಂದು ಮಾತು ಹೇಳಿದ್ದಾರೆ. ಅದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ. ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಭರವಸೆ ನೀಡಿದ್ದಾರೆ, ಸಮಯ ನಿಗದಿ ಮಾಡಿ ಚನ್ನಪಟ್ಟಣದಲ್ಲಿ ಸಭೆ ಮಾಡೋಣ ಎಂದಿದ್ದಾರೆ. ಈ ಹಿಂದೆ ಎಷ್ಟು ಮಂದಿ ಕಾಂಗ್ರೆಸ್ ನವರು ಬಿಜೆಪಿಗೆ ಹೋಗಿದ್ದಾರೆ ಎಂಬುದು ನಾಲಿಗೆ ಹರಿಬಿಡುವ ನಾಯಕರಿಗೆ ತಿಳಿದಿಲ್ಲವೇ ಎಂದು ಕಿಡಿ ಕಾರಿದರು.
ಮುಸ್ಲಿಂ ಸಮುದಾಯದ ವಿರುದ್ದ ಕುಮಾರಸ್ವಾಮಿ ಯವರು ಎಂದು ಹೋಗಿಲ್ಲ. ಅವರು ನಮ್ಮ ಎಲ್ಲಾ ಕೆಲಸ ಮಾಡಿ ಕೊಟ್ಟಿದ್ದಾರೆ. ಹೆಚ್ಡಿಕೆ ವಿರುದ್ಧ ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಯನ್ನು ಪರ್ಮನೆಂಟ್ ಆಗಿ ಕೊಡುತ್ತೇವೆ ಎಂದು ಬರೆದುಕೊಡಲಿ ನೋಡೋಣಾ ಎಂದು ಸವಾಲು ಹಾಕಿದರು. ಕಾವೇರಿ ನೀರಿನ ಸಮಸ್ಯೆ ಸೇರಿದಂತೆ ಸಾಕಷ್ಡು ಸಮಸ್ಯೆಗಳನ್ನು ರಾಜ್ಯ ಎದುರಿಸುತ್ತಿದೆ. ಅವುಗಳನ್ನು ಮೊದಲು ಪರಿಹರಿಸಿ, ಸುಮ್ಮನೆ ನಮ್ಮ ಸಮುದಾಯದ ಹೆಸರು ಹೇಳಿಕೊಂಡು ರಾಜಕಾರಣ ಮಾಡಬೇಡಿ ಎಂದು ಕುಮಾರಸ್ವಾಮಿ ಟೀಕಿಸುವ ನಾಯಕರಿಗೆ ಎಚ್ಚರಿಸಿದರು.
ಜಮೀರ್ ಅಹ್ಮದ್ ಚಡ್ಡಿ ಹೇಳಿಕೆ ಖಂಡನೀಯ ಎಂದ ಅವರು, ಜಮೀರ್ ಅಹ್ಮದ್, ಸಿದ್ದರಾಮಯ್ಯ ಎಲ್ಲರಿಗೂ ಜೆಡಿಎಸ್ ಪಕ್ಷವೇ ತಾಯಿ, ಈ ಪಕ್ಷದಿಂದಲೇ ಅವರು ಬೆಳೆದಿದ್ದಾರೆ. ಬಾಯಿ ತಪ್ಪಿ ಮಾತನಾಡಿದ ಒಂದು ಹೇಳಿಕೆಗೆ ಈ ಪರಿಯಾಗಿ ಮಾತನಾಡುವುದು ಸರಿಯಲ್ಲಾ. ಇಂದು ಚಡ್ಡಿ ಬಗ್ಗೆ ಮಾತನಾಡುವ ಜಮೀರ್, ಅಂದು ಸಿ ಟಿ ರವಿ ಜೊತೆ ಯಾವ ಚಡ್ಡಿ ಹಾಕಿಕೊಂಡಿದ್ದರು ಎಂದು ನೆನಪಿಸಿಕೊಳ್ಳಲಿ, ಯಾರೂ ಎಷ್ಟೇ ಕೂಗಾಡಿದರೂ ಹೆಚ್ ಡಿ ದೇವೇಗೌಡರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಯವರ ಜೊತೆಗೆ ನಾವು ಇರುತ್ತೇವೆ, ಅವರೂ ಸಹ ನಮ್ಮ ಪರ ಇರುತ್ತಾರೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.
ನಗರಸಭೆಯ ಅಧ್ಯಕ್ಷ ಪಿ ಪ್ರಶಾಂತ್ ಮಾತನಾಡಿ, ಕುಮಾರಸ್ವಾಮಿ ಯವರು ಮಾತನಾಡಿರುವ ಈ ವಿಚಾರದಲ್ಲಿ ಮುಸ್ಲಿಮ್ ಸಮುದಾಯದವರಿಗೆ ಅಸಮಾಧಾನವಿಲ್ಲ. ಯಾರಿಗೋ ಏನೋ ಹೇಳಲು ಹೋಗಿ ಬಾಯಿ ತಪ್ಪಿ ಆಡಿರುವ ಮಾತಾಗಿದೆ. ಅದನ್ನು ತಿರುಚಲಾಗಿದೆ. ಇದರ ಕುರಿತು ಮುಂದಿನ ದಿನಗಳಲ್ಲಿ ಅವರೇ ಸ್ಪಷ್ಡನೆ ನೀಡಲಿದ್ದಾರೆ. ಪಕ್ಷ ಯಾವುದಾದರೂ ಸರಿ, ಜನರಿಗೆ ಕೆಲಸ ಆಗಬೇಕು. ಜನರಿಗೆ ಒಳಿತಾಗಬೇಕು. ಬೆರಳ ಎಣಿಕೆಯಷ್ಟು ಜನ ಮಾತ್ರ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಸ್ವಂತ ನಿರ್ಧಾರದ ಮೇಲೆ ಹೋಗಿದ್ದಾರೆ. ಉಳಿದವರೆಲ್ಲರೂ ಜೆಡಿಎಸ್ ಪಕ್ಷದಲ್ಲೇ ಇದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಅಲ್ಪಸಂಖ್ಯಾತ ಘಟಕದ ನಗರಾಧ್ಯಕ್ಷ ತೌಸೀಪ್, ಅತೀಕ್ ಮುನಾವರ್ ಜಾವೇದ್ ಸೇರಿದಂತೆ ಹಲವಾರು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು