Tel: 7676775624 | Mail: info@yellowandred.in

Language: EN KAN

    Follow us :


ಅಧಿಕಾರಕ್ಕಾಗಿ ಮೈತ್ರಿ ಅನಿವಾರ್ಯ ಸಿ ಪಿ ಯೋಗೇಶ್ವರ್

Posted date: 08 Oct, 2023

Powered by:     Yellow and Red

ಅಧಿಕಾರಕ್ಕಾಗಿ ಮೈತ್ರಿ ಅನಿವಾರ್ಯ ಸಿ ಪಿ ಯೋಗೇಶ್ವರ್

ರಾಮನಗರ:ಚನ್ನಪಟ್ಟಣ; ನನ್ನ ಕ್ಷೇತ್ರದ ಜನರಿಗಾಗಿ ನಾನು ಕೆಲಸ ಮಾಡಲು ಆಗುತ್ತಿಲ್ಲ, ವಿಧಾನಸೌಧ ಕ್ಕೆ ಹೋಗಿ ನಿಮ್ಮೆಲ್ಲರ ಕೆಲಸ ಮಾಡಲು ಆಗುತ್ತಿಲ್ಲಾ, ಯಾಕೆಂದರೆ ನನಗೆ ಅಧಿಕಾರ ಇಲ್ಲ. ಜೆಡಿಎಸ್ ಮತ್ತು ನಮ್ಮ ಪ್ರತಿಷ್ಟೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ, ಆದ್ದರಿಂದ ದೊಡ್ಡದೊಡ್ಡ ನಾಯಕರು ಈ ಮೈತ್ರಿ ಮಾಡಿದ್ದಾರೆ, ತಳಮಟ್ಟದ ಕಾರ್ಯಕರ್ತರು ಸಹ ಹೊಂದಾಣಿಕೆ ಮಾಡಿಕೊಳ್ಳಲು ಸಹಕರಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಕರೆ ನೀಡಿದರು.

ಅವರು ನಗರದ ಕಲ್ಯಾಣ ಮಂಟಪವೊಂದರಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು


*ಜೆಡಿಎಸ್ ವಿರೋಧಿಸಿಕೊಂಡೇ ರಾಜಕೀಯ ಆರಂಭ*

ನನ್ನ ರಾಜಕೀಯ ಆರಂಭದಿಂದಲೂ ದೇವೇಗೌಡರ ಮುಖ ನೋಡದೆ, ಜೆಡಿಸ್ ವಿರೋಧಿಸಿಕೊಂಡೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ, ಕಳೆದ ಬಾರಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಕಿತ್ತಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದೆ. ಅವರೇ ಸರ್ಕಾರ ನಡೆಸುತ್ತಿದ್ದಾರೆ. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಮಂತ್ರಿ ಆಗಬೇಕೆಂದು ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಸಿ ಪಿ ಯೋಗೇಶ್ವರ್ ತಿಳಿಸಿದರು.


*ಕಾಂಗ್ರೆಸ್ ಕಟ್ಟಿಹಾಕಲು ಮೈತ್ರಿ ಅನಿವಾರ್ಯ*

ಮೈತ್ರಿ ಇಲ್ಲದಿದ್ದರಿಂದಲೇ ನಾವು ಸೋಲನ್ನು ಅನುಭವಿಸಿದ್ದೇವೆ, ಮೈತ್ರಿಯಿಂದ ತಳಮಟ್ಟದ ಕಾರ್ಯಕರ್ತರಿಗೆ ಇರುಸು-ಮುರಿಸು ಉಂಟಾಗಿರುವುದು ಸತ್ಯ, ಅದರಿಂದ ಯಾರಿಗೂ ತೊಂದರೆ ಆಗುವುದಿಲ್ಲಾ, ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣಾ, ನಮ್ಮಿಬ್ಬರಿಗೂ ವಿರೋಧ ಇರುವುದು ಸತ್ಯ, ನಮ್ಮ ವಿರೋಧವನ್ನೇ ಕಾಂಗ್ರೆಸ್ ಪಕ್ಷ ಲಾಭ ಮಾಡಿಕೊಂಡಿದೆ,. ಎರಡೂ ಪಕ್ಷಗಳು ಒಂದಾದರೆ ಮಾತ್ರ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಸಾಧ್ಯ, ಹೆಚ್ ಡಿ ದೇವೇಗೌಡರಿಗೆ ವಯಸ್ಸಾಗಿದೆ, ಅವರು ತಮ್ಮ ಜೀವನದಲ್ಲಿ ಬಿಜೆಪಿ ಪಕ್ಷವನ್ನು ವಿರೋಧಿಸಿಕೊಂಡೇ ಬಂದವರು. ಅವರು ಇಂದು ಬಿಜೆಪಿ ಪಕ್ಷದ ಜೊತೆಗೆ ಸೇರಿದ್ದಾರೆಂದರೆ ನಾವೆಲ್ಲರೂ ಯೋಚಿಸಬೇಕು ಎಂದರು.


*ಇನ್ನೆರಡು ತಿಂಗಳಲ್ಲಿ ಸರ್ಕಾರ ಇರಲ್ಲಾ;*

ಕಾಂಗ್ರೆಸ್ ನೇತೃತ್ವದ ಸರ್ಕಾರವು ಇನ್ನೆರಡು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ, ಅಲ್ಲಿ ಎಲ್ಲವೂ ಸರಿಯಿಲ್ಲಾ, ನಾನೇ ಸೂಪರ್ ಸಿ ಎಂ ಎಂದು ಡಿ ಕೆ ಶಿವಕುಮಾರ್ ರವರು ಸಿ ಎಂ ಸಿದ್ದರಾಮಯ್ಯ ನವರನ್ನು ಪಕ್ಕಕ್ಕೆ ಸರಿಸಿದ್ದಾರೆ, ಡಿ ಕೆ ಸಹೋದರರು ಕೇವಲ ಮಾತಿಗೆ ಸೀಮಿತವಾಗಿದ್ದಾರೆ, ಗ್ಯಾರಂಟಿ ಯೋಜನೆಗೆ ಸೀಮಿತವಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ನೀರಾವರಿ ಮಂತ್ರಿಯಾಗಿರುವ ಶಿವಕುಮಾರ್ ಕಾವೇರಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲಾ ಎಂದರು.


*ಆನೆಗಳನ್ನು ಓಡಿಸಿದರೆ ಡಿ ಕೆ ಸುರೇಶ್ ಗೆ ಮತನೀಡಿ!?*

ಸಂಸದ ಡಿ ಕೆ ಸುರೇಶ್ ಕೇವಲ ಗ್ರಾಮ ಪಂಚಾಯತಿ ಗೆ ಬಂದು ನರೇಗಾ ಸಭೆ ನಡೆಸಿ ಹೋಗುತ್ತಿದ್ದಾರೆ, ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಯಾವುದನ್ನು ಬಗೆಹರಿಸುತ್ತಿಲ್ಲಾ, ಕಾಡಾನೆಗಳ ಹಾವಳಿ ಹೆಚ್ಚಾಗಿದೆ, ಬೆಳೆ ನಾಶದ ಜೊತೆಗೆ ರೈತರ ಪ್ರಾಣ ಹಾನಿಯೂ ಆಗುತ್ತಿದೆ. ಸಂಸದರಿಗೆ ಇದು ಯಾವುದು ಕಾಣಿಸುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಎಲ್ಲಾ ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟಿದರೆ ಡಿ ಕೆ ಸುರೇಶ್ ಗೆ ಮತ ಹಾಕಿ, ಇಲ್ಲವಾದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಮತ ನೀಡಿ ಎಂದು ವಿನೋದವಾಗಿ ಮಾತನಾಡಿದರು.


*ಹಂತಹಂತವಾಗಿ ಸಭೆ:*

ಬಿಜೆಪಿ ಕಾರ್ಯಕರ್ತರ ಸಭೆಯು ಇದೇ ಮೊದಲನೆ ಬಾರಿಯಾಗಿದ್ದು, ಸ್ಥಳೀಯ ನಾಯಕರ ಜೊತೆಗೆ ಸಭೆ ನಡೆಸಿ, ಜೆಡಿಎಸ್ ನಾಯಕರ ಸಭೆಯ ನಂತರ ಬಿಜೆಪಿ-ಜೆಡಿಎಸ್ ನಾಯಕರ ಹಾಗೂ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗುವುದು. ಈ ಸಭೆಯಲ್ಲಿ ಬೂತ್ ಮಟ್ಟದಿಂದಲೂ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಲು ಮನವಿ ಮಾಡಲಾಗುವುದು ಎಂದರು.


*ಕಾರ್ಯಕರ್ತರ ಸಭೆಯಲ್ಲಿ ಏಕ ನಿರ್ಣಯ!:*

ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಕುರಿತು ಸಾಕಷ್ಟು ಮಾತನಾಡಿದ ಯೋಗೇಶ್ವರ್ ರವರು, ಭಾಷಣದ ಕೊನೆಯಲ್ಲಿ ನಿಮ್ಮೆಲ್ಲರಿಗೂ ಒಪ್ಪಿಗೆ ಇದೇಯೆ ಎಂದು ಕೇಳಿದ್ದನ್ನು ಹೊರತು ಪಡಿಸಿದರೆ, ವೇದಿಕೆ ಮೇಲಿದ್ದ ಸ್ಥಳೀಯ ನಾಯಕರಿಗಾಗಲಿ, ನೆರೆದಿದ್ದ ಐದು ನೂರಕ್ಕೂ ಹೆಚ್ಚಿನ ಕಾರ್ಯಕರ್ತರಿಗಾಗಲಿ ಮಾತನಾಡಲು ಅವಕಾಶ ನೀಡಲಿಲ್ಲ. ಕೆಲ ಕಾರ್ಯಕರ್ತರಷ್ಟೇ ಅಲ್ಲದೆ, ಲಿಂಗೇಶಕುಮಾರ್, ಮಲವೇಗೌಡ ಸೇರಿದಂತೆ ಮೈತ್ರಿ ವಿರೋಧಿಸಿ ಮಾತನಾಡಲು ಸಜ್ಜಾಗಿದ್ದರು. ಇದನ್ನರಿತ ಯೋಗೇಶ್ವರ್ ರವರು ತಾವೊಬ್ಬರೇ ಮಾತನಾಡಿ ಕಾರ್ಯಕರ್ತರ ಬಾಯಲ್ಲಿ ಜೈಕಾರ ಹಾಕಿಸಿಕೊಂಡರು. ವೇದಿಕೆ ಮೇಲಿನ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ಮೈತ್ರಿ ಪರ 'ಕೈ' ಎತ್ತದೆ ಸುಮ್ಮನೆ ಕುಳಿತಿದ್ದದ್ದು ಕಂಡು ಬಂತು. ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ ಸೇರಿದಂತೆ ಹಲವಾರು ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑