ಪ್ರತಿನಿತ್ಯ ನಗರ ಸ್ವಚ್ಚತೆ ಮಾಡುವ ಪೌರಕಾರ್ಮಿಕರು ಆರೋಗ್ಯದ ಕಡೆ ಗಮನ ನೀಡಬೇಕು, ರಮೇಶ್
ಚನ್ನಪಟ್ಟಣ: ಮನೆಮನೆಯ ಕಸ ಪಡೆದು, ವಿಂಗಡಿಸಿ ವಿಲೇವಾರಿ ಮಾಡುವ ಹಾಗೂ ಪ್ರತಿ ಮನೆಯ ಮುಂಭಾಗವು ಸ್ವಚ್ಚತೆ ಮಾಡಿ, ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿನಿತ್ಯ ಶ್ರಮಿಸುವ ಪೌರಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ತಿಳಿಸಿದರು.
ನಗರದ ಪುರಭವನದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಗರವನ್ನು ಸ್ವಚ್ಛಗೊಳಿಸಿ ನಾಗರೀಕರ ಸ್ವಾಸ್ಥ್ಯ ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕುರಿತು ಗಮನ ಹರಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪೌರಕಾರ್ಮಿಕರು ಹಾಗೂ ಆವರ ಕುಟುಂಬದ ಆರೋಗ್ಯ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದಲ್ಲಿ ನಗರದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಆದ್ದರಿಂದ ಸರ್ಕಾರ ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ಅವರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದರು. ಪೌರಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳನ್ನು ಪೌರಕಾರ್ಮಿಕರಿಗೆ ತಲುಪಿಸಲು ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು. ಉಳಿದಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದು.
ಪೌರಕಾರ್ಮಿಕರ ಕುಟುಂಬದ ಹಿತದೃಷ್ಟಿಯಿಂದ ಅವರಿಗೆ ವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮನೆ ನಿರ್ಮಿಸಿಕೊಡುವ ಕುರಿತು ಪೌರಕಾರ್ಮಿಕರು ಬೇಡಿಕೆ ಸಲ್ಲಿಸಿದ್ದಾರೆ. ಪೌರಕಾರ್ಮಿಕರು ನಗರ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಎಲ್ಲೋ ದೂರದಲ್ಲಿ ನಿವೇಶನ ನೀಡಿದರೆ ಪ್ರಯೋಜನವಿಲ್ಲ. ನಗರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಸರ್ಕಾರಿ ಜಾಗ ಗುರುತಿಸಿದರೆ, ಮನೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಮ್ಯಾನುವೆಲ್ ಸ್ಕ್ಯಾವೆಂಜಿನ್ಗೆ ಮಾನವ ಬಳಕೆಯನ್ನು ಈಗಾಗಲೇ ನಿಷೇಧಿಸಿದೆ. ಆದರೆ, ಅದನ್ನು ಸರ್ಕಾರ ಆದೇಶವನ್ನು ಮೀರಿ ಪೌರಕಾರ್ಮಿಕರು ಶೌಚ ಗುಂಡಿಯನ್ನು ಸ್ವಚ್ಛ ಮಾಡುತ್ತಿರುವುದು ಕಂಡುಬಂದಿದೆ. ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಶೌಚ ಗುಂಡಿ ಸ್ವಚ್ಛಗೊಳಿಸಲು ಇಳಿಯಬಾರದು. ಇಂಥ ಪ್ರಕರಣ ಕಂಡು ಬಂದರೆ ಅಂಥ ಪೌರಕಾರ್ಮಿಕರ ಜತೆಗೆ ಅಧಿಕಾರಿಗಳು ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚನ್ನಪಟ್ಟಣದ ಕಸ ಸಮಸ್ಯೆಗೆ ಮುಕ್ತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕಿನ ಬ್ರಹ್ಮಣೀಪುರದ ಬಳಿ ಕಸದ ಡಂಪಿಂಗ್ಗೆ 10 ಎಕರೆ ಜಾಗ ಗುರುತಿಸಲಾಗಿದೆ. ಆದಷ್ಟು ಬೇಗ ಜಾಗವನ್ನು ನಗರಸಭೆ ಸುಪರ್ಧಿಗೆ ವಹಿಸುವಂತೆ ತಹಸೀಲ್ದಾರ್ ರವರಿಗೆ ಸೂಚಿಸಲಾಗಿದೆ. ಜಾಗ ನೀಡದಿದ್ದಲ್ಲಿ ನಿಮ್ಮ ವಿರುದ್ಧವೇ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದರ ಜತೆಗೆ ತಗಚಗೆರೆ ಹಾಗೂ ವಂದರಾಗುಪ್ಪೆ ಬಳಿ ಇರುವ ಜಾಗವನ್ನು ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಶೌಚ ಗುಂಡಿ ಸ್ವಚ್ಛತೆಗೆ ಮಾನವ ಬಳಕೆಗೆ ಮುಂದಾಗದ ಕುರಿತು ಪೌರಕಾರ್ಮಿಕರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಮೆರವಣಿಗೆ ಮೂಲಕ ನಗರಸಭೆಯಿಂದ ಅಂಬೇಡ್ಕರ್ ಪ್ರತಿಮೆವರೆಗೂ ತೆರಳಿ ಮಾಲಾರ್ಪಣೆ ಮಾಡಲಾಯಿತು. ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಕ್ರೀಡೆಗಳಲ್ಲಿ ವಿಜಯ ಸಾಧಿಸಿದವರಿಗೆ ಬಹುಮಾನ ನೀಡಲಾಯಿತು, ಆಯಾಯ ವಿಭಾಗಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪೌರಾಯುಕ್ತ ಸಿ.ಪುಟ್ಟಸ್ವಾಮಿ, ನಗರಸಭೆ ಅಧ್ಯಕ್ಷ ಪ್ರಶಾಂತ್, ನೇರಪಾವತಿದಾರ ಗುತ್ತಿಗೆ ಕಾರ್ಮಿಕರ ರಾಜ್ಯಾಧ್ಯಕ್ಷ ಎಂ ಬಿ ನಾಗಣ್ಣಗೌಡ, ಸದಸ್ಯರಾದ ಮಂಜುನಾಥ್, ವಾಸೀಲ್ ಅಲಿಖಾನ್, ರಫೀಕ್, ಮಹದೇವ, ಸತೀಶ್ ಬಾಬು, ಸುಮಾರವೀಶ್, ಜಯಮಾಲ, ಸರ್ವಮಂಗಳ ಲೋಕೇಶ್, ಮಂಗಳಮ್ಮ, ಪೌರಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ಜಿಲ್ಲಾ ಮತ್ತು ತಾಲ್ಲೂಕು ಅದ್ಯಕ್ಷರು ಮತ್ತು ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು