Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ ಗುರುವಾರ ಮುಂಜಾನೆ ಚಡ್ಡಿ ಗ್ಯಾಂಗ್ ನಿಂದ ಸರಣಿ ಕಳವು

Posted date: 19 Oct, 2023

Powered by:     Yellow and Red

ನಗರದಲ್ಲಿ ಗುರುವಾರ ಮುಂಜಾನೆ ಚಡ್ಡಿ ಗ್ಯಾಂಗ್ ನಿಂದ ಸರಣಿ ಕಳವು

ಚನ್ನಪಟ್ಟಣ:ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ವಿವಿಧ ರೀತಿಯ ಕಳ್ಳತನ ಪ್ರಕರಣಗಳು ದಿನೆದಿನೇ ಹೆಚ್ಚಾಗುತ್ತಿದ್ದು, ಪೋಲೀಸರ ಆಲಕ್ಷ್ಯವೋ ಕಳ್ಳರ ಕೈಚಳಕವೋ ತಿಳಿಯದಾಗಿದೆ. ಬೈಕ್ ಗಳು, ಕಾರುಗಳು, ಮನೆಯಲ್ಲಿನ ಕಳವಿನ ಜೊತೆಗೆ ಅಂಗಡಿ, ಹೋಟೆಲ್ ಗಳ ಕಳ್ಳತ‌ನ ಪ್ರಕರಣಗಳು ಹೆಚ್ಚಾಗುತ್ತಿವೆ. ಪೋಲಿಸ್ ಠಾಣೆಗಳಲ್ಲಿ ದಾಖಲಾಗುವ ದೂರುಗಳಿಗೂ ಪತ್ತೆಯಾಗುವ ಪ್ರಕರಣಗಳಿಗೂ ಅಜಗಜಾಂತರವಿದೆ ಎಂಬುದು ಸತ್ಯ ಸಂಗತಿ. ಪೋಲಿಸ್ ಇಲಾಖೆಯಲ್ಲಿನ ಸಿಬ್ಬಂದಿಗಳ ಕೊರತೆಯೋ ಅಥವಾ ತನಿಖಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೋ ಎಂಬುದು ಗೊಂದಲವಾಗಿದೆ. ಇದಕ್ಕೆಲ್ಲಾ ಹಲವಾರು ಪ್ರಕರಣಗಳು ಇನ್ನೂ ಪತ್ತೆಯಾಗದೆ ಧೂಳು ಹಿಡಿಯುತ್ತಿರುವುದು ಸಾಕ್ಷಿಭೂತವಾಗಿ ನಿಂತಿವೆ. ಸಣ್ಣ ಉದಾಹರಣೆಯಾಗಿರುವ ಕುವೆಂಪು ನಗರದ ಆರನೇ ತಿರವಿನಲ್ಲಿನ ನಗ-ನಗದು ಸೇರಿ ಕೋಟ್ಯಾಂತರ ರೂಪಾಯಿ ಕಳವು,  ಸರ್ಕಾರಿ ಜಮೀನು ಕಬಳಿಸಿದ ಹತ್ತಾರು ಮಂದಿ ಪ್ರಕರಣ, ನ್ಯಾಯಾಲಯದ ಬಳಿ ಇರುವ ಬೃಹತ್ ನೀರಿನ ಟ್ಯಾಂಕ್ ನ ಕೊಳವೆಗಳಲ್ಲಿ ಸಿಕ್ಕ ಶವದ ಅಂಗಾಂಗಳ ಬಗ್ಗೆ ಇದುವರೆಗೂ ಪತ್ತೆಯಾಗದಿರುವ ಕಾರಣ ಸಾರ್ವಜನಿಕರಲ್ಲಿ ಅನುಮಾನ ಮೂಡುವುದರ ಜೊತೆಗೆ ಪೋಲಿಸರ ಮೇಲಿನ ವಿಶ್ವಾಸ ಕಡಿಮೆಯಾಗುವುದು ಸಹಜವಾಗಿದೆ


ಇತ್ತೀಚೆಗೆ ನಗರದಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಗುರುವಾರ ಮುಂಜಾನೆ ನಗರದ ಬೆಂ-ಮೈ ಹೆದ್ದಾರಿಯಲ್ಲಿ ನಾಲ್ಕು ಕಳ್ಳರ ತಂಡ ಸರಣಿ ಕಳ್ಳತನಕ್ಕೆ ಯತ್ನಿಸಿದ್ದು, ಒಂದು ಅಂಗಡಿಯಲ್ಲಿ ಕಳ್ಳತನ ಮಾಡುವಲ್ಲಿ ಯಶಸ್ವಿಯಾಗಿದ್ದು, ಮಿಕ್ಕೆರಡು ಅಂಗಡಿಗಳಲ್ಲಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿರುವ ಘಟನೆ ಜರುಗುದ್ದು, ನಗರಿಗರು ಭಯಭೀತರಾಗಿದ್ದಾರೆ.

ಗುರುವಾರ ಮುಂಜಾನೆ ನಗರದ ನ್ಯಾಯಾಲಯದ ಮುಂಭಾಗ ಬೆಂ-ಮೈ ಹೆದ್ದಾರಿ ಬಳಿಯ ತಿಟ್ಟಮಾರನಹಳ್ಳಿ ರಸ್ತೆಯ ಭಾಸ್ಕರ್ ಮೆಡಿಕಲ್ ಸ್ಟೋರ್‌ನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ನಗದು, ಚಾಕಲೇಟ್ ಬಾಕ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ನಾಲ್ಕು ಜನರ ಗುಂಪು ಈ ಕಳ್ಳತನ ಕೃತ್ಯ ನಡೆಸಿದ್ದು, ಇಬ್ಬರು ಅಂಗಡಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿದ್ದರೆ, ಮತ್ತಿಬ್ಬರು ಹೊರಗಡೆ ನಿಂತಿದ್ದು ರಸ್ತೆಯ ಮೇಲೆ ಗಮನವಿಟ್ಟಿದ್ದಾರೆ. ಅಂಗಡಿಯಲ್ಲಿ ಸುಮಾರು ಮೂವತ್ತು ಸಾವಿರ ರೂ. ನಗದು ಇತ್ತೆಂದು ಹೇಳಲಾಗಿದ್ದು, ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿದ್ದ ಹಣವನ್ನು ಕಳುವು ಮಾಡಿದ್ದು, ಹೋಗುವಾಗ ಅವರಲ್ಲಿ ಒಬ್ಬ ಚಾಕಲೇಟ್ ಡಬ್ಬವನ್ನು ಎತ್ತಿಕೊಂಡು ಹೋಗಿದ್ದಾನೆ. ಕಳ್ಳರ ಗುಂಪಿನ ಕೈಚಳಕ ಹಾಗೂ ಅವರ ಸಂಭಾಷಣೆ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


*ವಿಫಲ ಯತ್ನ:*

ಇದೇ ವೇಳೆ ಕಳ್ಳರ ತಂಡ ಪುರ ಪೊಲೀಸ್ ಠಾಣೆಗೆ ಕೂಗಳತೆಯ ದೂರದಲ್ಲಿರುವ ಅಪೊಲೋ ಮೆಡಿಕಲ್ಸ್ ಹಾಗೂ ನ್ಯೂ ರಾಜ್ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡುವ ವಿಫಲ ಯತ್ನ ನಡೆಸಿದೆ.

ಕುವೆಂಪು ನಗರದ ನಾಲ್ಕನೇ ಅಡ್ಡರಸ್ತೆಯಲ್ಲಿನ ನ್ಯೂ ರಾಜ್ ದಿನಸಿ ಅಂಗಡಿಯ ಶಟರ್ ನ ಬೀಗ ಹೊಡೆಯಲು ಕಳ್ಳರು ಯತ್ನಿಸಿದ್ದಾರೆ. ಈ ವೇಳೆ ಅಂಗಡಿಯ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾ ಕಳ್ಳನಿಗೆ ಕಂಡುಬಂದಿದ್ದು, ಬೀಗ ಒಡೆಯುತ್ತಿದ್ದ ಆಯುಧದಿಂದ ಸಿಸಿ ಕ್ಯಾಮೆರಾವನ್ನು ಹೊಡೆದು ಹಾಕಿದ್ದಾನೆ. ನಂತರ ಶಟರ್ ಬೀಗ ಒಡೆಯಲು ವಿಫಲ ಯತ್ನ ನಡೆಸಿ ಕೈಗೂಡದ ಕಾರಣ ಅಲ್ಲಿಂದ ತೆರಳಿದ್ದಾರೆ.

ನಗರದ ಪುರಪೊಲೀಸ್ ಠಾಣೆ ಸಮೀಪ ಎರಡನೇ ಅಡ್ಡರಸ್ತೆಯಲ್ಲಿರುವ ಅಪೊಲೋ ಮೆಡಿಕಲ್ಸ್ ಬೀಗ ಮುರಿದು ಒಳನುಗ್ಗಿರುವ ಕಳ್ಳರ ತಂಡ ಕಳುವಿನ ವಿಫಲ ಯತ್ನ ನಡೆಸಿದೆ. ಕಳ್ಳರ ತಂಡ ಅಂಗಡಿಯ ಶಟರ್ ಬೀಗ ಮುರಿದಿದ್ದು, ಕಳ್ಳರ ಗುಂಪಿನ ಒಬ್ಬ  ಅಂಗಡಿಯಲ್ಲಿನ ಕ್ಯಾಶ್ ಡ್ರಾಯರ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ವೇಳೆ ಕಂಡು ಬಂದ ಡ್ರಾಯರ್ ಒಂದನ್ನು ಆಯುಧದಿಂದ ಒಡೆದು ಹಣಕ್ಕಾಗಿ ಹುಡುಕಾಟ ನಡೆಸಿರುವ ದೃಶ್ಯ ಮೆಡಿಕಲ್ ಸ್ಟೋರ್‌ನೊಳಗಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಒಟ್ಟು ನಾಲ್ಕು ಮಂದಿ ಕಳ್ಳರು ಎರಡು ಬೈಕ್‌ನಲ್ಲಿ ಆಗಮಿಸಿ ಕಳ್ಳತನ ನಡೆಸಿದ್ದು, ಎಲ್ಲರೂ ಶಾರ್ಟ್ಸ್ ಧರಿಸಿದ್ದು, ಗುರುವಾರ ಮುಂಜಾನೆ ಈ ಚಡ್ಡಿ ಗ್ಯಾಂಗ್ ನಡೆಸಿದ ಕಳ್ಳತನ ಕೃತ್ಯ ಬೊಂಬೆನಗರಿರನ್ನು ಬೆಚ್ಚಿಬೀಳಿಸಿದೆ. ಇವೆಲ್ಲಾ ಕಳ್ಳತನಗಳ ಜೊತೆಗೆ ಒಂಟಿಯಾಗಿ ಹೋಗುವ ಮಹಿಳೆಯರು, ಜಾನುವಾರು ಮೇಯಿಸಲು ಹೋಗುವ ಗ್ರಾಮೀಣ ಭಾಗದ ರೈತ ಮಹಿಳಯರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಚೈನು ಎಗರಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೋಲಿಸರು ಹೆಚ್ಚಿನ ಗಮನ ನೀಡಿ, ಕಳ್ಳರನ್ನು ಎಡೆಮುರಿ ಕಟ್ಟುವ ಮೂಲಕ ಸಾರ್ವಜನಿಕರಿಗೆ ನ್ಯಾಯ ಒದಗಿಸುವುದರ ಜೊತೆಗೆ ಕಳ್ಳಕಾಕರಿಗೆ ಪೋಲಿಸರು ಭಯ ಹುಟ್ಟಿಸುವ ಕೆಲಸ ಮಾಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑