೪೬ ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ ೧೦ ಕಿಲೋ ಕ್ಯಾನ್ಸರ್ ಗಡ್ಡೆ ಹೊರತೆಗೆದ ಬಾಲು ಆಸ್ಪತ್ರೆಯ ವೈದ್ಯರು
ಚನ್ನಪಟ್ಟಣ: ತಾಲ್ಲೂಕಿನ ಗ್ರಾಮವೊಂದರ ೪೬ ವರ್ಷದ ಮಹಿಳೆಯೊಬ್ಬರ ಗರ್ಭ (ಅಂಡಾಶಯ) ದಲ್ಲಿದ್ದ ಬರೋಬ್ಬರಿ ೧೦ ಕಿಲೋ ೩೦೦ ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆ ಯನ್ನು ಹೊರತೆಗೆಯುವಲ್ಲಿ ನಗರದ ಬಾಲು ಆಸ್ಪತ್ರೆಯ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.
ತಾಲೂಕಿನ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ ಬಾರಿ ತೂಕದ ಕ್ಯಾನ್ಸರ್ ಗೆಡ್ಡೆಯನ್ನು ನಗರದ ಬಾಲು ಆಸ್ಪತ್ರೆಯ ಮುಖ್ಯಸ್ಥೆ ಡಾ.ಶೈಲಜಾ ವೆಂಕಟ ಸುಬ್ಬಯ್ಯ ಚಟ್ಟಿ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞ ಡಾ. ಮನೋಜಂ ಮತ್ತು ಸರ್ಜನ್ ಗಳಾದ ಡಾ. ಪ್ರಕಾಶ್ , ಡಾ. ಜಯಶ್ರೀ ರವರ ತಂಡದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೊರತೆಗೆದಿದೆ.
ತನ್ನ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಾತ್ರದ ಗಡ್ಡೆ ಇದೆ ಎಂಬುದು ಆಕೆಯ ಗಮನದಲ್ಲಿರಲಿಲ್ಲ. ಆಕೆಯೇ ಹೇಳುವಂತೆ ಕಳೆದ ಮೂರು ತಿಂಗಳಿನಿಂದ ನೋವು ಬರುತ್ತಿದ್ದು, ಮೂರ್ನಾಲ್ಕು ದಿನದಿಂದ ವಾಂತಿ ಆಗುತ್ತಿದೆ. ನನಗೆ ಗ್ಯಾಸ್ಟ್ರಿಕ್ ಆಗಿದೆ ಡಾಕ್ಟ್ರೆ ಎಂದು ಬಂದಾಗ ಆಕೆಯನ್ನು ಸ್ಕ್ಯಾನಿಂಗ್ ಮಾಡಿಸಲಾಯಿತು. ಇದರಿಂದ ಗಡ್ಡೆ ಇರುವುದು ಖಾತ್ರಿಯಾಯಿತಾದರೂ, ಅದು ಯಾವ ಗಡ್ಡೆ ಎಂಬುದನ್ನು ತಜ್ಞರ ಮೂಲಕ ಖಾತ್ರಿ ಪಡಿಸಿಕೊಳ್ಳಲಾಯಿತು. ನಂತರ ಅವರ ಒಪ್ಪಿಗೆ ಪಡೆದು ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ವೈದ್ಯ ಮನೋಜಂ ಮಾಹಿತಿ ನೀಡಿದರು.
ಸದ್ಯ ಮಹಿಳೆ ಆರೋಗ್ಯವಾಗಿದ್ದು, ಬಾರಿ ಗಾತ್ರದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ವೈದ್ಯರಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಬಾಲು ಆಸ್ಪತ್ರೆಯ ಸಂಸ್ಥಾಪಕ ಸುಬ್ಬಯ್ಯಚಟ್ಟಿ ಯವರು, ಕಳೆದ ವಾರ ನಾಲ್ಕು ಕಿಲೋ ತೂಕದ ಗಡ್ಡೆಯೊಂದನ್ನು ಹೊರತೆಗೆಯಲಾಗಿತ್ತು. ಇಂದು ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ ಇಷ್ಟು ದೊಡ್ಡ ಗಾತ್ರದ ಗಡ್ಡೆ ಹೊರತೆಗೆಯಲಾಗಿದೆ, ಬಹುತೇಕ ಮಹಿಳೆಯರು ನಾಚಿಕೆ ಸ್ವಭಾವದವರಿದ್ದಾರೆ. ಕೆಲವು ನೋವುಗಳನ್ನು ಯಾರ ಜೊತೆಯೂ ಅವರು ಹಂಚಿಕೊಳ್ಳುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ, ಮಹಿಳೆಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಸ್ಪತ್ರೆಯ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು